ಭೀಮಾ ತೀರದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣ- ಮಹಾದೇವ ಸಾಹುಕಾರ ಭೈರಗೊಂಡ ಮತ್ತೀತರರ ವಿಚಾರಣೆ ಏ. 10ಕ್ಕೆ ಮುಂದೂಡಿದ ನ್ಯಾಯಾಲಯ

ವಿಜಯಪುರ: ಜಿಲ್ಲೆಯ ಭೀಮಾ ತೀರದ ಉಮರಾಣಿ ಗ್ರಾಮದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣದ ವಿಚಾರಣೆಯನ್ನು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಏ. 10ಕ್ಕೆ ಮುಂದೂಡಿದೆ.

ಚಡಚಣ ಸಹೋದರರಾದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಆರೋಪ ಮತ್ತು ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣದ ಕುರಿತು ಬೆಳಿಗ್ಗೆ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ. 10ಕ್ಕೆ ನಿಗದಿ ಮಾಡಿ ಮುಂದೂಡಿತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಹಾದೇವ ಸಾಹುಕಾರ ಭೈರಗೊಂಡ, ಅಂದಿನ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ, ಅಂದಿನ ಚಡಚಣ ಸಿಪಿಐ ಎಂ. ಬಿ. ಅಸೋದೆ, ಶಿವಾನಂದ ಬಿರಾದಾರ ಸೇರಿದಂತೆ ಸುಮಾರು ಏಳು ಜನ ಆರೋಪಿಗಳು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಎದುರು ಹಾಜರಾಗಿದ್ದರು.

ಈ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು HBC (ಆರೋಪ ಮೊದಲು ವಿಚಾರಣೆ) ಯನ್ನು ಏ. 10ಕ್ಕೆ ಮುಂದೂಡಿದರು.

ಈ ಪ್ರಕರಣದ ವಿಚಾರಣೆ ಮತ್ತು ಆರೋಪಿಗಳು ಕೋರ್ಟಿಗೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ನ್ಯಾಯಲಯದ ಸಂಕೀರ್ಣದ ಸುತ್ತಮುತ್ತ ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.  ಜಿಲ್ಲಾ ಮೀಸಲು ಪೊಲೀಸ್ ಪಡೆ ವಾಹನವನ್ನೂ ಕೂಡ ನಿಯೋಜನೆ ಮಾಡಲಾಗಿತ್ತು.

ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಹೊಸ ಸಂಕೀರ್ಣ

ಘಟನೆ ಹಿನ್ನೆಲೆ

ಭೀಮಾ ತೀರದ ಉಮರಾಣಿ ಗ್ರಾಮದ ಧರ್ಮರಾಜ ಚಡಚಣ ಅವರನ್ನು 2017ರ ಅಕ್ಟೋಬರ್ 30 ರಂದು ಚಡಚಣ ತಾಲೂಕಿನ ಕೊಂಕಣಗಾಂವನಲ್ಲಿರುವ ಧರ್ಮರಾಜ ಅವರ ಫಾರ್ಮ್‌ ಹೌಸ್ ನಲ್ಲಿ ಎನಕೌಂಟರ್ ಮಾಡಲಾಗಿತ್ತು.  ಅಲ್ಲದೇ, ಅದೇ ದಿನ, ಧರ್ಮರಾಜ ಚಡಚಣ ತಮ್ಮ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ.  ಈ ಎನಕೌಂಟರ್ ನಕಲಿಯಾಗಿದ್ದು, ನಿಗೂಢವಾಗಿ ನಾಪತ್ತೆಯಾಗಿರುವ ಗಂಗಾಧರ ಚಡಚಣ ಅವರನ್ನು ಮಹಾದೇವ ಸಾಹುಕಾರ ಭೈರಗೊಂಡ ಮತ್ತು ಇತರರು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಚಡಚಣ ಸಹೋದರರ ತಾಯಿ ವಿಮಲಾಬಾಯಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಒಟ್ಟು 18 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.  ನಂತರ ಈ ಪ್ರಕರಣವನ್ನು ಸರಕಾರ 2020ರಲ್ಲಿ ಸಿಐಡಿ ತನಿಖೆಗೆ ವಹಿಸಿತ್ತು.

ಸಿಬಿಐ ತನಿಖೆಗೆ ಆಗ್ರಹಿಸಿದ್ದ ವಿಮಲಾಬಾಯಿ ಚಡಚಣ

ಪೊಲೀಸರೇ ತಮ್ಮ ಮಕ್ಕಳ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಕಲಬುರಗಿ ಹೈಕೊರ್ಟಿಗೆ ಮೊರೆ ಹೋಗಿದ್ದರು.

ಇತ್ತೀಚೆಗೆ ನಡೆದ ಸಂಧಾನ

ಈ ಮಧ್ಯೆ ಎಡಿಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಇತ್ತೀಚೆಗೆ ಚಡಚಣದಲ್ಲಿ ನಡೆದ ಸಂಧಾನ ಸಭೆಯಲ್ಲಿ ಚಡಚಣ ಮತ್ತು ಭೈರಗೊಂಡ ಕುಟುಂಬಸ್ಥರು ಹಾಗೂ ಅವರ ಬೆಂಬಲಿಗರನ್ನು ಕರೆಯಿಸಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು.  ಇನ್ನು ಮುಂದೆ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಎರಡೂ ಕಡೆಯವರಿಂದ ಅಲೋಕ ಕುಮಾರ ಪ್ರಮಾಣ ಮಾಡಿಸಿದ್ದರು.  ಅಲ್ಲದೇ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಾವು ಯಾವುದೇ ಸಂಧಾನ ನಡೆಸುವುದಿಲ್ಲ ಎಂದು ಎಡಿಜಿಪಿ ಅಲೋಕ ಕುಮಾರ ಅಂದೇ ಸ್ಪಷ್ಟಪಡಿಸಿದ್ದರು.  ಆದರೆ, ಇನ್ನು ಮುಂದೆ ಎರಡೂ ಕುಟುಂಬಗಳ ಮಧ್ಯೆ ಯಾವುದೇ ರೀತಿ ಘರ್ಷಣೆ ನಡೆಸದಂತೆ ರಾಜಿ ಸಂಧಾನ ಮಾಡಿಸಿದ್ದರು.

ವಿಚಾರಣೆ ಏ. 10ಕ್ಕೆ

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಏ. 10ಕ್ಕೆ ಮುಂದೂಡಿದರು.  ಆರೋಪಿಗಳ ಪರ ನ್ಯಾಯವಾದಿ ಎಸ್. ಆರ್. ಕೋರಿ ವಕಾಲತ್ತು ವಹಿಸಿದ್ದರು.

ಪ್ರತಿಕ್ರಿಯೆ ನೀಡದೇ ಕೈ ಮುಗಿದು ತೆರಳಿದ ಮಹಾದೇವ ಸಾಹುಕಾರ ಭೈರಗೊಂಡ

ಈ ಮಧ್ಯೆ, ವಿಜಯಪುರ ನ್ಯಾಯಾಲಯಕ್ಕೆ ಆಗಮಿಸಿದ್ದ ಮಹಾದೇವ ಸಾಹುಕಾರ ಭೈರಗೊಂಡ ವಿಚಾರಣೆ ಏ. 10ಕ್ಕೆ ಮುಂದೂಡಿದ ನಂತರ ಹೊರ ಬಂದರು.  ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಲು ಪ್ರಯತ್ನಿಸದಾಗ ಕಾರಿನಲ್ಲಿಯೇ ಕುಳಿತು ಕೈ ಮುಗಿದು ತಮ್ಮೂರಿಗೆ ಮರಳಿದರು.

 

Leave a Reply

ಹೊಸ ಪೋಸ್ಟ್‌