ಈ ಬಾರಿಯೂ ಕೇಸರಿ ಗುಲಾಲ್ ಹಾರಬೇಕು-ಯತ್ನಾಳ, ನಮ್ಮ ಅಭ್ಯರ್ಥಿ ಯತ್ನಾಳ 50 ಸಾವಿರ ಮತಗಳಿಂದ ಗೆಲ್ಲಿಸಬೇಕು- ಕಾರಜೋಳ

ವಿಜಯಪುರ: ಈ ಬಾರಿಯೂ ಗುಮ್ಮಟ ನಗರಿ ವಿಜಯಪುರದಲ್ಲಿ ಗುಲಾಲ್ ಹಾರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ವಿಜಯಪುರ ನಗರದಲ್ಲಿ ನಡೆದ ರೋಡ್ ಶೋ ಬಳಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಹಳ ಸಂತೋಷವಾಗುತ್ತಿದೆ ನಿಮ್ಮೆಲ್ಲರ ಅಭಿಮಾನ, ನಿಮ್ಮಲ್ಲರ ಹಿಂದುತ್ವದ ಶಕ್ತಿ, ವಿಜಯಪುರ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ, ಮಹಾರಾಣಾ ಪ್ರತಾಪರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ, ಅಹಿಲ್ಯಾಬಾಯಿ ಹೋಳ್ಕರ, ಮಹಾತ್ಮಾ ಬಸವೇಶ್ವರ ಎಲ್ಲರ ಊರಾಗಿ ಉಳಿಯಲಿದೆ.  ಯಾವುದೇ ಕಾರಣಕ್ಕೆ ವಿಜಯಪುರ ಇನ್ನು ಮುಂದೆ ಟಿಪ್ಪು ಸುಲ್ತಾನ, ಔರಂಗಜೇಬ ಆಗಲು ಸಾಧ್ಯವಿಲ್ಲ.  ನಾವೆಲ್ಲ ಒಂದಾಗಿರಬೇಕು.  ಈ ಸಲ ನೂರಕ್ಕೆ ನೂರು ಮತದಾನ ಮಾಡಬೇಕು ಎಂದು ಅವರು ಹೇಳಿದರು.

ಯಾರೂ ಮತದಾನದ ದಿನ ಊರಿಗೆ ಹೋಗುವುದು ಮನೆಯಲ್ಲಿ ಮಲಗುವುದು ಮಾಡಬಾರದು.  ಮುಂಜಾನೆ 6ಕ್ಕೆ ಬಂದು ಮತ ಹಾಕಬೇಕು.  ಏಕೆಂದರೆ ಅವರೆಲ್ಲ ಬೆಳಿಗ್ಗೆ ಮತದಾನ ಮಾಡಿ ಈ ಕಡೆ ಬಂದು ದಾಂಧಲೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ.  ನೀವೆಲ್ಲರೂ 6 ಗಂಟೆಗೆ ಮತದಾನ ಮಾಡಲು ಆರಂಭಿಸಿ.  ಬೆ. 11 ಗಂಟೆಯವರೆಗೆ ಶೇ. 70 ರಷ್ಟು ಮತದಾನ ಮಾಡಿದರೆ, ಕೇಸರಿ ಗುಲಾಲ್ ಹಾರಿಸುವುದು ಗ್ಯಾರಂಟಿ.  ವಿಜಯಪುರದಲ್ಲಿ ಕೇಸರಿ ಗುಲಾಲ್ ಹಾರಿಸಬೇಕೋ? ಬೇಡವೋ? ಹಸಿರು ಗುಲಾಲ್ ಹಾರಬಾರದು ಅಲ್ವಾ? ಅಂದರೆ ಎಲ್ಲರೂ ಓಟ್ ಹಾಕಬೇಕು ಎಂದು ಯತ್ನಾಳ ಹೇಳಿದರು.

ವಿಜಯಪುರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾರಜೋಳ, ಸಿ. ಸಿ. ಪಾಟೀಲ, ಯತ್ನಾಳ ಪಾಲ್ಗೋಂಡರು

ವಿಜಯಪುರ ನಗರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.  ಕಾರಜೋಳ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ, ಸಿ. ಸಿ. ಪಾಟೀಲರು, ಮುಖ್ಯಮಂತ್ರಿಗಳು ಎಲ್ಲರ ಸರಕಾರದಿಂದ ಎಲ್ಲ ಅಭಿವೃದ್ಧಿ ಮಾಡಿದ್ದೇವೆ.  ಇವತ್ತು ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿಯಾಗಿದೆ.  ಮನೆ ಬಂದಿವೆ.  ರೂ. 1500 ಕೋ. ಟೆಕ್ಸಟೈಲ್ಸ್ ಪಾರ್ಕ್ ಬರುತ್ತಿದೆ.  ರೂ. 140 ಕೋ. ವೆಚ್ಚದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಮಂಡಳಿಯಿಂದ ಒಂದು ವಿಶ್ವ ಮಾರುಕಟ್ಟೆಯಾಗುತ್ತಿದೆ.  ಮುಂದಿನ ಎರಡು ವರ್ಷಗಳಲ್ಲಿ ಹತ್ತಾರು ಸಾವಿರ ಉದ್ಯೋಗ ಸೃಷ್ಠಿ ಮಾಡುವ ಕೆಲಸ ಮಾಡುತ್ತಿದ್ದೇನೆ.  ನಿನ್ನೆ ಸಿ. ಸಿ. ಪಾಟೀಲರನ್ನು ಭೇಟಿ ಮಾಡಿದ್ದೇನೆ.  ವಿಜಯಪುರ ನಗರದ ನಾನಾ ಸಂದಿ ರಸ್ತೆಗಳ ಅಭಿವೃದ್ಧಿಗೆ ರೂ. 25 ಕೋ. ಅನುದಾನ ನೀಡಿದ್ದಾರೆ.  ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಅವರು ತಿಳಿಸಿದರು.

ಕಾರಜೋಳ ಸಾಹೇಬರು ಇದ್ದಾಗ ನಾನು ಕೇಳಿದ್ದಷ್ಟು ಹಣ ನೀಡಿದ್ದಾರೆ.  ಬೊಮ್ಮಾಯಿಯವರು ಕೊಟ್ಟಿದ್ದಾರೆ.  ಎಲ್ಲರ ಕಡೆ ದುಡ್ಡು ತಂದಿದ್ದೇನೆ.  ಇವತ್ತು ವಿಜಯಪುರ ಧೂಳಾಪುರ ಅಲ್ಲ, ವಿಜಯಪುರ ಸ್ಮಾರ್ಟ್ ಸಿಟಿ ಆಗಿದೆ.  ಈಗ ವಿಜಯಪುರದಲ್ಲಿ ಎಲ್ಲಿಯಾದರೂ ಧೂಳು ಇದೆಯಾ? ಯಾರಾದರೂ ಕರ್ಚಿಫ್ ನಿಂದ ಮೂಗು ಮುಚ್ಚಿಕೊಂಡು ತಿರುಗಾಡುತ್ತೀರಾ? ಇದಕ್ಕೆಲ್ಲ ಕಾರಣ ನನಗೆ ಸಿಎಂ ಮತ್ತು ಸಚಿವರು ನೀಡಿದ ಸಹಕಾರ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಯತ್ನಾಳ 60 ಸಾವಿರ ಮತಗಳಿಂದ ಗೆಲ್ತಾರೆ ಎಂದ ಸಚಿವ ಗೋವಿಂದ ಕಾರಜೋಳ

ಇದೇ ವೇಳೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಇವತ್ತು ನನಗೆ ಏನು ಅನಿಸುತ್ತಿದೆ ಎಂದರೆ ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದವನು. ಒಮ್ಮೆ ಉತಚ್ಸಾಹ ನೋಡಿದಾಗ ಬಸನಗೌಡರನ್ನು ಗೆಲ್ಲಿಸಿ ಸಿದ್ಧೇಶ್ವರ ಗುಡಿಗೆ ಕರೆದುಕೊಂಡು ಬಂದಿದ್ದೇವೆ ಎನಿಸುತ್ತಿದೆ ಎಂದು ಹೇಳಿದರು.

ಈ ಉತ್ಸಾಹ ಸದಾ ನಮ್ಮ ಪಕ್ಷದ ಮೇಲೆ, ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ಮೇಲೆ, ರಾಜ್ಯದ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿಯವರ ಮೇಲೆ ಮತ್ತು ಎಲ್ಲ ನಾಯಕರ ಮೇಲೆ ಇರಬೇಕು ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ.  ಈ ಉತ್ಸಾಹ ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಗೆಲ್ಲಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಗೇವಿಂದ ಕಾರಜೋಳ ಹೇಳಿದರು.

ಇದಕ್ಕೂ ಮೊದಲು ನಡೆದ ರೋಡ್ ಶೋನಲ್ಲಿ ಸಾವಿರಾರು ಜನರು ಪಾಲ್ಗೋಂಡರು.  ಕೈಯ್ಯಲ್ಲಿ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ಮುಂದೆ ಸಾಗುತ್ತಿದ್ದರೆ, ಹಿಂದೆ ವಾಹನದಲ್ಲಿ ನಿಂತಿದ್ದ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಶಾಸಕರಾದ ರಮೇಶ ಜಾರಕಿಹೊಳಿ, ಸೋಮನಗೌಡ ಪಾಟೀಲ, ಬಸನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ರೋಡ್ ಶೋ ನಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌