ಶಾಸಕರು ಮುಸ್ಲಿಮರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ- ಕಾರಜೋಳ ಹೇಳಿಕೆ ನಿರಾಸೆ ಮೂಡಿಸಿದೆ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಮುಸ್ಲಿಮರ ಓಟ್ ನನಗೆ ಬೇಕಿಲ್ಲ ಎನ್ನುವ ಬಸನಗೌಡ ಪಾಟೀಲ ಯತ್ನಾಳ ತಮ್ಮ ತಂದೆಯ ಕಾಲದಿಂದಲೂ ಮುಸ್ಲಿಮರೊಂದಿಗೆ ಬ್ಯೂಸಿನೆಸ್ ಪಾರ್ಟನರ್ ಆಗಿದ್ದಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕರ ಹೆಸರು ಹೇಳದೇ ಆರೋಪಿಸಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಟೂರಿಸ್ಟ್ ಹೋಟೇಲಿನಲ್ಲಿ ಶಾಸಕರು ಅವರ ತಂದೆಯ ಕಾಲದಿಂದಲೂ ಮುಸ್ಲಿಮರೊಂದಿಗೆ ಬ್ಯೂಸಿನೆಸ್ ಪಾರ್ಟನರ್ ಆಗಿದ್ದಾರೆ.  ಅವರ ತಂದೆಯಿಂದ ಈಗ ಇವರಿಗೆ ಆ ಆಸ್ತಿ ಬಂದಿದೆ.  ಶಾಸಕರಿಗೆ ಅವರ ಮಾತುಗಳಲ್ಲಿ ಬದ್ಧತೆಯಿಲ್ಲ.  ಟಿಪ್ಪು ಸುಲ್ತಾನ್ ವಂಶಜರ ಜೊತೆ ಪಾರ್ಟನರ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರ ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಿದೆ.  ಸಂಸದರಾಗಿದ್ದಾಗ ವಿಜಯಪುರದ ಖಡ್ಡಾ ಮಸೀದಿಯಲ್ಲಿಯೇ ನಮಾಜ್ ಮಾಡಿದ್ದಾರೆ.   ಆ ಬಗ್ಗೆ ನನ್ನ ಬಳಿ ಈಗ ದಾಖಲೆಗಳಿಲ್ಲ.  ಆದರೆ, ಈ ವಿಷಯ ಎಲ್ಲರಿಗೂ ಗೊತ್ತಿದೆ.  ಮಾಜಿ ಸಚಿವ ದಿ. ಬಿ. ಎಸ್. ಪಾಟೀಲ ಸಾಸನೂರ ಮತ್ತೀತರ ನಾಯಕರ ಜೊತೆಗೂಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೋಂಡಿದ್ದಾರೆ ಎಂದು ಅವರು ಆರೋಪಿಸಿದರು.

ಶಾಸಕರ ಹಿಂಬಾಲಕರೇ ಮುಸ್ಲಿಮರೊಂದಿಗೆ ಸೌಹಾರ್ಧದಿಂದ ಇದ್ದಾರೆ

ಶಾಸಕರು ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿದ್ದರೆ, ಅವರ ಹಿಂಬಾಲಕರು ಮತ್ತು ಕಾರ್ಪೋರೇಟರ್ ಗಳು ಮಸೀದಿಗಳಿಗೆ ಹೋಗಿ ಸಭೆ ಮಾಡುತ್ತಾರೆ.  ಮುಸ್ಲಿಂ ಬಾಂಧವರೊಂದಿಗೆ ಸೌಹಾರ್ಧದಿಂದ ಇದ್ದಾರೆ.  ಹಾಗಾದರೆ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ ಎಂದು ಅರ್ಥವಲ್ಲವೇ? ಅವರಿಗೆ ನೀವು ಹೇಳುವ ಮಾತುಗಳು ಅನ್ವಯವಾಗುವುದಿಲ್ಲವಾ? ಎಂದು ಶಾಸಕರನ್ನು ಪಟ್ಟಣಶೆಟ್ಟಿ ಪ್ರಶ್ನಿಸಿದರು.

ಪಂಚಮಸಾಲಿ ಹೋರಾಟದಲ್ಲಿ ಅನ್ಯ ಸಮುದಾಯಗಳ ವಿರುದ್ಧ ಹೇಳಿಕೆ ವಿಚಾರ

ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದೆ. ಈ ಹೋರಾಟದ ಸಂದರ್ಭದಲ್ಲಿ ಶಾಸಕರು ಬೇರೆ ಬೇರೆ ಸಮಾಜಗಳ ಕುರಿತು ಯತ್ನಾಳ ನೀಡಿರುವ ಹೇಳಿಕೆಗಳು ಪ್ರಭಾವ ಬೀರಿವೆ.  ಎಲ್ಲರಿಗೂ ಸ್ವಾಭಿಮಾನವಿದೆ.  ಚುನಾವಣೆಯಲ್ಲಿ ಇದು ಪರಿಣಾಮ ಬೀರಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಸರಕಾರಿ ಕಾರ್ಯಕ್ರಮಗಳಲ್ಲಿ ಏನು ಮಾತನಾಡಬೇಕು ಎಂಬುದು ಶಾಸಕರಿಗೆ ಗೊತ್ತಿಲ್ಲ.  ಪಂಚಮಸಾಲಿ 2ಎ ಮೀಸಲಾತಿ ಸಮಯದಲ್ಲಿ ವಿನಾಕಾರಣ ಅನ್ಯ ಸಮುದಾಯಗಳಿಗೆ ಬೈದಿದ್ದಾರೆ.  ಅಂದು ಯಡಿಯೂರಪ್ಪ ಅವರನ್ನು ಬೈದರು.  ಅಪ್ಪ, ಮಗನನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದರು.  ಈಗ ಯಡಿಯೂರಪ್ಪ ಜೊತೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳುತ್ತಾರೆ.  ಇವರನ್ನು ಯಾರಾದರೂ ನಂಬಲು ಸಾಧ್ಯವೇ? ಇವರು ನಾಚಿಕೆ, ಮಾನ, ಮರ್ಯಾದೆ ಬಿಟ್ಟು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು.

ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ

ಪಕ್ಷದ ವಿಚಾರದಲ್ಲಿ ನಾನು ಅವರಿಗಿಂತ ನಾನು ಚೆನ್ನಾಗಿದ್ದೇನೆ.  ಅವರಿಗಿಂತ ಹೆಚ್ಚು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ.  ಅವರ ಹೇಳಿಕೆಗೆ ಅವರು ಅವರೇ ಬದ್ಧರಾಗಿಲ್ಲ.  ಚಪ್ಪಾಳೆ ಹೊಡೆಸಿಕೊಂಡು ಶಿಳ್ಳೆ ಕೆಕೆ ಹಾಕಿಸಿಕೊಂಡರೆ ದೊಡ್ಡ ಲೀಡರ್ ಆಗಲ್ಲ.  ಈ ದೇಶದಲ್ಲಿ ಕೆಲವು ಜನ ಹಾಸ್ಯ ಕಲಾವಿದರು ಪ್ರಧಾನಿ ಮೋದಿ ಅವರಿಗಿಂತಲೂ ಹೆಚ್ಚು ಚಪ್ಪಾಳೆ ಹೊಡೆಸಿಕೊಳ್ಳುತ್ತಾರೆ.  ಹಾಗಂತ ಅವರು ಪ್ರಧಾನಿಗಿಂತ ಹೆಚ್ಚು ಜನಪ್ರೀಯರಾಗಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

ನನ್ನ ವಿರುದ್ಧ ಆರೋಪಗಳು ಸುಳ್ಳು

ತಮ್ಮ ವಿರುದ್ಧ ಶಾಸಕರು ಈ ಹಿಂದೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.  ಆದರೆ, ಇದುವರೆಗೆ ಒಂದನ್ನೂ ಸಾಬೀತು ಪಡಿಸಿಲ್ಲ.  ನಾನು 10 ವರ್ಷ ಶಾಸಕ ಮತ್ತು ಸಚಿವನಾಗಿದ್ದಾಗ ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದನ್ನು ಶೀಘ್ರದಲ್ಲಿ ಮಾಹಿತಿ ನೀಡುತ್ತೇನೆ.  ವಿಜಯಪುರದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲ ಅಧಿಕಾರಿಗಳು ಮತ್ತು ಜನರಿಗೆ ಗೊತ್ತಿದೆ.  ಇನ್ನೋಂದು ತಿಂಗಳಲ್ಲಿ ಭ್ರಷ್ಟಾಚಾರ ಸಂತ್ರಸರು ಬಹಿರಂಗವಾಗಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.

ಶಾಸಕರ ವಿರುದ್ಧ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಸಚಿವ ಮುರುಗೇಶ ನಿರಾಣಿ ಈ ಹಿಂದೆ ಹೇಳಿದ್ದರು.  ಸಚಿವರ ಹೇಳಿಕೆಯ ಮುಂದುವರೆದ ಭಾಗವಾಗಿ ತಾವು ಈ ಆರೋಪ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಪ್ಪು ಪಟ್ಟಣಶೆಟ್ಟಿ, ನಾನು ಯಾರನ್ನೂ ಅನುಕರಣೆ ಮಾಡುವುದಿಲ್ಲ.  ಬೇರೆ ಪಕ್ಷಗಳಿಗೆ ಹೋಗಲ್ಲ.  ಯಾರನ್ನೂ ನೋಡಿ ಕಲಿಯುವ ದಡ್ಡ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಮುರುಗೇಶ ನಿರಾಣಿ ನನ್ನ ಆತ್ಮೀಯ ಸ್ನೇಹಿತ

ಸಚಿವ ಮುರುಗೇಶ ನಿರಾಣಿ ನನ್ನ ಆತ್ಮೀಯ ಸ್ನೇಹಿತ.  ಇಬ್ಬರೂ ಒಟ್ಟಿಗೆ ರಾಜಕೀಯಕ್ಕೆ ಕಾಲಿಟ್ಟಿದ್ದೇವೆ.  ಅವರಿಗೆ ನನ್ನ ಮೇಲೆ ಪ್ರೀತಿಯಿದೆ.  ನನಗೆ ಟಿಕೆಟ್ ಸಿಕ್ಕರೆ ಅವರು ನನಗೆ ಸಹಾಯ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸಚಿವ ಗೋವಿಂದ ಎಂ. ಕಾರಜೋಳ ವಿರುದ್ಧ ಅಸಮಾಧಾನ

ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಯತ್ನಾಳ ಅವರನ್ನು 50 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ನೀಡಿರುವ ಹೇಳಿಕೆಯ ಬಗ್ಗೆ ಅಪ್ಪು ಪಟ್ಟಣಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ಈ ಹೇಳಿಕೆ ಹಿನ್ನೆಲೆಯಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರನ್ನು ಸೋಮವಾರ ಆಲಮಟ್ಟಿಯಲ್ಲಿ ಭೇಟಿ ಮಾಡಿದ್ದೇನೆ.  ಟಿಕೆಟ್ ಫೈನಲ್ ಆಗಿರುವ ಕುರಿತು ಪ್ರಶ್ನಿಸಿದ್ದೇನೆ. ಅದರೆ, ಅವರು, ಹಾಲಿ, ಮಾಜಿ ಸೇರಿದಂತೆ ಯಾವ ನಾಯಕರಿಗೂ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ.  ಪಕ್ಷದಲ್ಲಿ ಈ ನಿಟ್ಟಿನಲ್ಲಿ ಯಾವುದೇ ತೀರ್ಮಾನವಾಗಿಲ್ಲ.  ಯಾತ್ರೆಗಳು ನಡೆಯುತ್ತಿವೆ.  ಯಾವುದೇ ಹೇಳಿಕೆಗಳು ಸಂಬಂಧವಿಲ್ಲ ಎಂದು ನಳೀನಕುಮಾರ ಕಟೀಲ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಸಚಿವ ಕಾರಜೋಳ ಹೈಕಮಾಂಡ್ ಎಂದು ನಾನು ಭಾವಿಸಿಲ್ಲ

ಸಚಿವ ಗೋವಿಂದ ಕಾರಜೋಳ ಸಾಹೇಬರು ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ.  ಕಾರಜೋಳ ಸಾಹೇಬರು ಅವರು ಪಕ್ಷದ ಹೈಕಮಾಂಡ ಎಂದು ನಾನು ತಿಳಿದುಕೊಂಡಿಲ್ಲ.  ಅವರು ಹೇಳಿಕೊಂಡಿರಬೇಕು.  ಅವರಿಗೆ ಆ ಕುರಿತು ವರಿಷ್ಠರು ಕೇಳುತ್ತಾರೆ.  ಅವರು ಉತ್ತರ ಕೊಡುತ್ತಾರೆ.  ಆ ಮಾತು ಬೇರೆ.  ನನಗೆ ಗೊತ್ತಿರುವ ಮಟ್ಟಿಗೆ ಈಗ ಯಾವುದೇ ಟಿಕೆಟ್ ಅಂತಿಮವಾಗಿಲ್ಲ.  ಅಭಿಪ್ರಾಯ ಸಂಗ್ರಹ, ರ್ಯಾಲಿಗಳು, ಸಮಾವೇಶಗಳು ನಡೆಯುತ್ತಿದ್ದು, ನಮ್ಮ ನಾಯಕರು ಅದರಲ್ಲಿ ಬ್ಯೂಸಿಯಾಗಿದ್ದಾರೆ.  ನಾನು ಕಾರಜೋಳ ಅವರು ಮಾಡಿರುವ ಭಾಷಣ ಮಾತ್ರ ಕೇಳಿದ್ದೇನೆ ಎಂದು ಮಾಜಿ ಸಚಿವರು ತಿಳಿಸಿದರು.

ಕಾರಜೋಳ ಅವರು ಹಿರಿಯ ಸಚಿವರಾಗಿದ್ದಾರೆ.  ಅನುಭವಿಗಳಾಗಿದ್ದಾರೆ.  ನಮ್ಮ ಜಿ್ಲ್ಲೆಯವರಿದ್ದಾರೆ.  ಆದರೆ, ಅವರ ಆ ರೀತಿ ಯಾಕೆ ಹೇಳಿದ್ದಾರೆ ಎಂಬುದು ನನಗೂ ಯಕ್ಷಪ್ರಶ್ನೆಯಾಗಿದೆ.  ಸಾಕಷ್ಟು ಅನುಭವಿಗಳು, ದೀರ್ಘಕಾಲದಿಂದ ರಾಜಕಾರಣದಲ್ಲಿದ್ದವರು.  ಅವರಿಗೆ ಪಕ್ಷದ ಮಾಹಿತಿ ಇರಲಿಲ್ಲವಾ ಎಂದು ನನಗೂ ನಿರಾಸೆಯಾಗಿದೆ.  ಆಕಾಂಕ್ಷಿಗಳಿಗೂ ನಿರಾಸೆಯಾಗಿದೆ.  ಕಾರ್ಯಕರ್ತರಿಗೂ ನಿರಾಸೆಯಾಗಿದೆ.  ಅವರು ಹಾಗೇ ಹೇಳಬಾರದಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿದದೆ.  ಕಾರ್ಯಕರ್ತರಿಗೂ ನಿರಾಸೆಯಾಗಿದೆ. ಈ ಸ್ಪಷ್ಟನೆಗೆ ನಾನು ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಬಂದಿದ್ದೇನೆ.  ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಅಧಿಕಾರಕ್ಕಾಗಿ ಯಾರ ಬಾಗಿಲೂ ಬಡಿದಿಲ್ಲ ಧರ್ಮಾಧಾರಿತ ರಾಜಕಾರಣ ಮಾಡುವುದಿಲ್ಲ

ನಾನು ಧರ್ಮಾಧರಿತವಾಗಿ ಮಾತನಾಡಲ್ಲ.  ಒಮ್ಮೆ ಎಲ್ಲ ಹಿಂದೂ ಮುಸ್ಲಿಂ ಸಮಾನ ಎನ್ನುವುದು ಮತ್ತೋಂದು ಸಲ ಪ್ಲೇಟ್ ಬದಲಾಯಿಸಿ ಹಿಂದುತ್ವ ಎನ್ನುತ್ತ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದು ಅವರಿಗೆ ರೂಢಿಯಾಗಿದೆ.  ನಾನು ಪಕ್ಷ ನಿಷ್ಠೆಯಿಂದ ಇದ್ದೇನೆ.  ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ.  ಅಧಿಕಾರಕ್ಕಾಗಿ ಯಾರ ಬಾಗಿಲನ್ನೂ ಬಡಿದಿಲ್ಲ.  ಕೇವಲ ಅಧಿಕಾರಕ್ಕಾಗಿ ನಾನು ಬಿಜೆಪಿ ಸೇರಿಲ್ಲ.  ಒಂದು ವೇಳೆ ಆ ವಿಚಾರವಿದ್ದರೆ, ಕಳೆದ ಬಾರಿ ಟಿಕೆಟ್ ತಪ್ಪಿದಾಗ ಬಿಜೆಪಿ ತೊರೆಯುತ್ತಿದ್ದೆ.  ಆದರೆ, ನಾನು ಆ ರೀತಿ ಎಂದೂ ಯೋಚಿಸುವುದಿಲ್ಲ.

ನಾನು ಕಳೆದ 10 ವರ್ಷಗಳಿಂದ ಒಂದೂ ಪದಾಧಿಕಾರಿ ಹುದ್ದೆ ಪಡೆದಿಲ್ಲ.  ನಿಗಮ, ಮಂಡಳಿ ಅಧ್ಯಕ್ಷನಾಗಿಲ್ಲ.  ಯಾವುದೇ ಅಪೇಕ್ಷೆಯಿಲ್ಲದೇ ಪಕ್ಷ ಸಂಘಟನೆಯಲ್ಲಿ ಸಕ್ರೀಯನಾಗಿದ್ದೇನೆ.  ಜನರೊಂದಿಗಿದ್ದೇನೆ.  ಸಮಾಜದ ಕೆಲಸ ಮಾಡಿದ್ದೇನೆ.  ಸಂಘಟನೆಯಲ್ಲಿ ತೊಡಗಿದ್ದೇನೆ.  ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೇನೆ.  ಖುಷಿಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ.  ಖುಷಿಯಿಂದಲೇ ಜನರ ಕೆಲಸ ಮಾಡುತ್ತಿದ್ದೇನೆ.  ಖುಷಿಯಿಂದಲೇ ಸಂಘಟನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಅವರು ತಿಳಿಸಿದರು.

ಕಾರ್ಯಕರ್ತರನ್ನು ಪೂಜಿಸುವ ಕೆಲಸವಾಗಬೇಕು

ಬಿಜೆಪಿ ಕಾರ್ಯಕರ್ತರ ಶ್ರಮವನ್ನು ಗುರುತಿಸುವ ಕೆಲಸ ಮಾಡಬೇಕು.  ಪಕ್ಷದ ನಿರ್ಧಾರಗಳನ್ನು ಚಾಚೂ ತಪ್ಪದೆ ಪಾಲಿಸುವ ನಿಷ್ಠೆ ಹೊಂದಿದ್ದಾರೆ.  ಟಿಕೆಟ್ ನೀಡದಿದ್ದರೂ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಾರೆ.  ನಿಷ್ಠಾವಂತ ಕಾರ್ಯಕರ್ತರನ್ನು ಪೂಜೆ ಮಾಡಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ಧರಾಮಯ್ಯ ಮಲ್ಲಿಕಾರ್ಜುನಮಠ ಮತ್ತು ಸನ್ನಿ ಗವಿಮಠ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌