ಕಿರಿಯ ವಯಸ್ಸಿನಲ್ಲಿ ಬಸವಣ್ಣನವರ ಭಕ್ತಿಯ ತತ್ವಗಳನ್ನು ಬಸನಗೌಡ ಎಂ. ಪಾಟೀಲ ಅಳವಡಿಸಿಕೊಂಡು ಮುನ್ನಡೆಯುತ್ತಿ್ದ್ದಾರೆ- ರಂಭಾಪುರಿ ಜಗದ್ಗುರುಗಳು

ವಿಜಯಪುರ, ಮಾ. 30: ವಯಸ್ಸಿನಿಂದ ಕಿರಿಯರಾದರೂ ಪ್ರತಿಭೆ ಮತ್ತು ತಮ್ಮ ಕೆಲಸ ಕಾರ್ಯಗಳಿಂದ ಎಲ್ಲರ ಮನದಲ್ಲಿ ಸದಾ ಕಂಗೊಳಿಸುತ್ತಿರುವ ಬಸನಗೌಡ ಎಂ. ಪಾಟೀಲ, ಸದ್ವಿನಯ ಸಂಪನ್ನರಾಗಿ ಬಾಗಿದ ತಲೆ, ಮುಗಿದ ಕೈ ಎಂಬ ಬಸವಣ್ಣನವರ ಭಕ್ತಿಯ ತತ್ವಗಳನ್ವನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.

ನಗರದ ಜೋರಾಪುರ ಪೇಟೆಯ ಪೇಟೆ ಓಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರ ಮನೆಯಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಬಸನಗೌಡ ಎಂ. ಪಾಟೀಲರು ಇತ್ತೀಚೆಗೆ ಎರಡ್ಮೂರು ಬಾರಿ ಜಗದ್ಗುರುಗಳನ್ನು ಭೇಟಿ ಮಾಡಿದ್ದಾರೆ. ಈಗ ಅಖೀಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶಾಮನೂರ ಶಿವಶಂಕರಪ್ಪ ಅವರ ಮೊಮ್ಮಗಳ ಜೊತೆ ಬಸನಗೌಡ ಪಾಟೀಲ ಅವರ ನಿಶ್ಚಿತಾರ್ಥವಾಗಿರುವುದು ನಮಗೆ ಬಹಳ ಸಂತಸ ತಂದಿದೆ. ನಿಶ್ಚಿತಾರ್ಥ ಸಂದರ್ಭದಲ್ಲಿ ಎಂ. ಬಿ. ಪಾಟೀಲರು ಕೂಡ ಆಶೀರ್ವಾದ ಮಾಡಲು ಆಹ್ವಾನ ನೀಡಿದ್ದರು. ಆದರೆ, ಅಂದು ಕಾರ್ಯ ಬಾಹುಳ್ಯದಿಂದಾಗಿ ಹೋಗಲು ಆಗಿರಲಿಲ್ಲ ಇಂದು ಅವರನ್ನು ಆಶೀರ್ವಾದಿಸುವ ಯೋಗಾಯೋಗ ಕೂಡಿ ಬಂದಿದೆ ಎಂದು ಹೇಳಿದರು.

ವಿಜಯಪುರದಲ್ಲಿ ನಡೆದ ಧರ್ಮಸಭೆಯಲ್ಲಿ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು

ಜಿಲ್ಲೆಯಲ್ಲಿ ಶಂಬುಲಿಂಗ ಶಿವಾಚಾರ್ಯರು, ಇಂಚಗೇರಿ ಮಠದ ಶ್ರೀಗಳು, ಚಿಮ್ಮಲಗಿ ಶ್ರೀಗಳು, ಜ್ಞಾನಯೋಗಾಶ್ರಮ, ಷಣ್ಮೂಖರೂಢ ಮಠ ಕೂಡ ಆಧ್ಯಾತ್ಮದ ನೆಲೆಗಟ್ಟಿನ ಮೇಲೆ ಭಕ್ತರಿಗೆ ಮಾರ್ಗದರ್ಶನ ನೀಡುತ್ತ ಬಂದಿವೆ. ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ತಮ್ಮ ಜೀವನಪೂರ್ತಿ ಭಕ್ತರು ಕರೆದಲ್ಲಿಗೆ ಹೋಗಿ ತಮ್ಮ ಪ್ರವಚನಗಳ ಮೂಲಕ ಜನರನ್ನು ಪರಿಶುದ್ಧ ಗೊಳಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಬಹಳಷ್ಟು ಜನರಲ್ಲಿ ಮಾನವ ಧರ್ಮದ ಹಿರಿಮೆಯಿದೆ. ಎಲ್ಲವನ್ನೂ ಗಮನಿಸಿ ನಾವೂ ಕೂಡ ವಿಜಯಪುರ ನಗರದ ಮೇಲೆ ಹೆಚ್ಚಿನ ಲಕ್ಷ ಇಟ್ಟು. ಇಲ್ಲಿ, ಉತ್ತಮ ಧಾರ್ಮಿಕ ವಾತಾರವಣ ಉಂಟು ಮಾಡುವ ಅಪೇಕ್ಷೆ ನಮ್ಮದಾಗಿದೆ. ಇಲ್ಲಿ ರಂಭಾಪುರಿ ಪೀಠದ ಕೇಂದ್ರವೊಂದನ್ನು ಆರಂಭಿಸಲಾಗುವುದು ಎಂದು ಜಗದ್ಗುರುಗಳು ತಿಳಿಸಿದರು.

ಈ ಜಾತಿಗಳ ಮಧ್ಯೆ ಬಹಳಷ್ಟು ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷ ಒಳ್ಳೆಯದಲ್ಲ. ಅವರವರ ಧರ್ಮ ಅವರರವರ ಸಂಸ್ಕೃತಿ ಅವರಿಗೆ ಬಹಳಷ್ಟು ದೊಡ್ಡದು. ಇನ್ನೋಂದು ಧರ್ಮದ ಬಗ್ಗೆ, ಇನ್ನೊಬ್ಬರ ಬಗ್ಗೆ ಸಹಾನುಭೂತಿ, ಸಹಿಷ್ಣುತ ಮಹಾಭಾವ ನಮ್ಮೆಲ್ಲರಲ್ಲಿ ಹಿಂದೆಗಿಂತ ಇವತ್ತು ಅಗತ್ಯವಾಗಿದೆ. ಇಂದು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪಾಲಿಸಬೇಕಾಗಿದೆ. ಇಂದು ಮಾನವ ಧರ್ಮ ಉಳಿದರೆ ಎಲ್ಲ ಧರ್ಮಗಳು ಉಳಿಯಲು ಸಾಧ್ಯ. ಮಾನವ ಧರ್ಮ ಉಳಿಯದೇ ಹೋದರೆ, ಯಾವ ಧರ್ಮಗಳು ಉಳಿದು ಬೆಳೆದುಕೊಂಡು ಬರಲು ಸಾಧ್ಯವಿಲ್ಲ. ಮಾನವ ಧರ್ಮದಲ್ಲಿ ಎಲ್ಲ ಧರ್ಮಗಳ ಅಂಶ ಅಡಕವಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಈಗ ವ್ಯಕ್ತಿಗಳ ಮಧ್ಯೆ, ಧರ್ಮಗಳ ಮಧ್ಯೆ, ಕಂದಕ ನಿರ್ಮಾಣಗೊಂಡಿದ್ದು, ಅದನ್ನು ನಿವಾರಿಸಿ ಬಾಂಧವ್ಯದ ಸೌಹಾರ್ಧದ ಸೇತುವೆಯನ್ನು ಕಟ್ಟುವುದೇ ಮಾನವ ಧರ್ಮದ ಮೂಲ ಆಶಯವಾಗಿದೆ. ಹಿಂದೆ ಗುರು ಮುಂತೆ ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಇಂದಿನ ಆಧುನಿಕ ವೈಚಾರಿಕ ಯುಗದಲ್ಲಿ ಹಳೆಯದಾವುದೂ ಬೇಡ ಎಂದು ಹಣ ಮತ್ತು ಅಧಿಕಾರ ಬೆನ್ನು ಹತ್ತಿ ನಿಜವಾದ ಶಾಂತಿ ಮತ್ತು ಸಮಾಧಾನಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಧರ್ಮ ಪರಿಪಾಲನೆ ಮಾಡದಿದ್ದರೆ ನಾವು ಮನುಷ್ಯನ ಜೀವನ ಇನ್ನಷ್ಟು ದುಸ್ತರವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ನಾಡಿನಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಎಲ್ಲ ಮಠಾಧೀಶರು ಕಾರ್ಯೋನ್ಮುಖರಾಗಿದ್ದಾರೆ. ಇಂದು ಎಲ್ಲ ಮಠಾಧೀಶರು ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜಕ್ಕೆ ಸ್ಪಂದಿಸುವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಅವರಲ್ಲಿರುವ ದೂರದೃಷ್ಠಿ ಮತ್ತು ಸಮಾಜದ ಮೇಲೆ ಇಟ್ಟಿರುವ ಕಳಕಳಿಗೆ ಸಾಕ್ಷಿಯಾಗಿವೆ. ಗುರು ಹೇಳಿದ ಮಾತುಗಳನ್ನು ನಂಬಿ ನಡೆದರೆ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಆ ಮಾತುಗಳನ್ನು ಮರೆತು ಮಲಗಿದರೆ ಅದರಿಂದ ಆಗುವ ತಾಪತ್ರಯಗಳು ಹಲವಾರು ಎಂಬುದನ್ನು ನೆನೆಪಿಡಬೇಕು ಎಂದು ಅವರು ಹೇಳಿದರು.

ನಮ್ಮ ಪೂರ್ವಿಕರಾದ ಆಚಾರ್ಯರು, ಋಷಿಮುನಿಗಳು, ಶರಣರು, ಸಂತರು, ಮಹಾನುಭಾವಿಗಳು ಕೇವಲ ನುಡಿಯದೇ ನುಡಿದಂತೆ ನಡೆದು ತೋರಿಸಿದ್ದಾರೆ. ಆ ದಾರಿಯಲ್ಲಿ ನಾವು ಹೋದರೆ ಸಾಕು. ಬೇರೇನೂ ಮಾಡಬೇಕಿಲ್ಲ. ಶ್ರೇಷ್ಠವಾದ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಶಿಕ್ಷಣದ ಜೊತೆ ಸಂಸ್ಕಾರವೂ ಅಗತ್ಯವಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದರು.

ಮಮದಾಪುರದ ವಿರಕ್ತ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಕೊರೊನಾ ಮತ್ತು ಲಾಕಡೌನ್ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರುಗಳ ಜನಸಾಮಾನ್ಯರ ಕಷ್ಟಗಳಿಗೆ ತಾಯಿಯಂತೆ ಸ್ಪಂದಿಸಿದ್ದಾರೆ. ನಮ್ಮಂಥ ಸಣ್ಣ ಮಠಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಭಕ್ತರು ಕೊಡುವ ದೇಣಿಗೆಯಿಂದಲೇ ನಡೆಯುವ ಮಠಗಳು ಯಾವುದೇ ಕಾರ್ಯಕ್ರಮವಿಲ್ಲದೆ ಸಂಕಷ್ಟದಲ್ಲಿದ್ದವು. ಆಗ ರಂಭಾಪುರ ಜಗದ್ಗುರುಗಳ ಎಲ್ಲ ಮಠಾಧೀಶರನ್ನು ಕರೆದು ಎಲ್ಲ ಮಠಗಳಿಗೆ ತಮ್ಮ ಪೀಠದಿಂದ ಆಶೀರ್ವಾದ ರೂಪದಲ್ಲಿ ಕಾಣಿಕೆ ನೀಡಿದರು. ಇದರಿಂದ ಮೂರ್ನಾಲ್ಕು ತಿಂಗಳು ನಮ್ಮ ಮಠಗಳಲ್ಲಿ ದಾಸೋಹ ಮುಂದುವರೆಸಲು ಸಾಧ್ಯವಾಯಿತು. ಇದೇ ರೀತಿ, ಬಿ.ಎಲ್.ಡಿ.ಇ ಸಂಸ್ಥೆಯವರು ಸರಕಾರ ನಿಗದಿ ಪಡಿಸಿದಕ್ಕಿಂತ ಅತೀ ಕಡಿಮೆ ದರದಲ್ಲಿ ರೋಗಿಗಳಿಗೆ ನಿಂತಿದ್ದರಿಂದ ನಾವೆಲ್ಲರೂ ಇಲ್ಲಿ ಸೇರಲು ಇಂದು ಸಾಧ್ಯವಾಗಿದೆ. ರಂಭಾಪುರಿ ಶ್ರೀಗಳು ಮಠಗಳೊಂದಿಗೆ ಮತ್ತು ಬಿ.ಎಲ್.ಡಿ.ಇ ಸಂಸ್ಥೆ ಜನರೊಂದಿಗೆ ನಿಂತುಕೊಂಡಿದ್ದು ಮನುಕುಲಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಲಮೇಲ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಡವಲಗಾ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಮದಾಪುರ ಸಂಸ್ಥಾನ ವಿರಕ್ತಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ, ಹನುಮಾಪುರ ಬಳವಾಟದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ರೇವಣಿ ಮಠದ ಶ್ರೀಗಳು, ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ, ಸುಧಾಕರ ಹಿರೇಮಠ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ. ಗಂಗಾಧರ ಸಂಬಣ್ಣಿ ಮತ್ತು ಭಾಗ್ಯಶ್ರೀ ಸಂಬಣ್ಣಿ ದಂಪತಿ ಮತ್ತು ಬಸನಗೌಡ ಎಂ. ಪಾಟೀಲ ಅವರನ್ನು ರಂಭಾಪುರಿ ಜಗದ್ಗುರುಗಳು ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು.
ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು. ವಿವೇಕಾನಂದ ಹಿರೇಮಠ ನಿರೂಪಿಸಿದರು.
ಇದಕ್ಕೂ ಮೊದಲು ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

Leave a Reply

ಹೊಸ ಪೋಸ್ಟ್‌