ವಿಧಾನಸಭೆ ಚುನಾವಣೆ: ಚುನಾವಣಾಧಿಕಾರಿಗಳಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ವಿಜಯಪುರ: ವಿಧಾನಸಭೆ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ತಪ್ಪದೇ ಪಾಲಿಸುವಂತೆ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರದ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ  ಸೂಚನೆ ನೀಡಿದರು.

ವಿಜಯಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ವಿಧಾನಸಭೆ ಚುನಾವಣೆಗೆ ಏ. 13 ಗುರವಾರ ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏ. 20ರ ಗುರುವಾರ ಕೊನೆಯ ದಿನವಾಗಿದ್ದು, ಏ. 21ರ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಏ. 24ರಂದು ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಮೇ 10 ಬುಧವಾರ ಮತದಾನ ನಡೆಯಲಿದೆ.  ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದ್ದು, ಈಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲರೂ ಚುನಾವಣೆ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಿದರು.

ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 269 ಮತಗಟ್ಟೆಳಿದ್ದು, ಈ ಪೈಕಿ 118 ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.  137599 ಪುರುಷ, 140056 ಮಹಿಳೆ  ಹಾಗೂ 93 ಇತರೆ ಸೇರಿದಂತೆ ಒಟ್ಟು  277748 ಮತದಾರರಿದ್ದಾರೆ ಎಂದು ಅವರು ಹೇಳಿದರು.

ಚುನಾವಣೆ ಸುಗಮವಾಗಿ ನಡೆಯಲು ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ 19 ಸೆಕ್ಟರ್ ಅಧಿಕಾರಿಗಳು, 9 ಫ್ಲಾಯಿಂಗ್ ಸ್ಕ್ವಾಡ್, 9 ಎಸ್‍ಎಸ್‍ಟಿ ತಂಡ, 3 ವಿಡಿಯೋ ಸರ್ವೇಲೆನ್ಸ್ ತಂಡ ತಲಾ ಒಂದು ವಿವಿಟಿ ಮತ್ತು ಲೆಕ್ಕಪತ್ರಗಳ ತಂಡಗಳನ್ನು ನಿಯೋಜಿಸಲಾಗಿದೆ.  ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ.  ತಾವು ಸಹ ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಕ್ಯಾ ಮಹೇಶ ಮಾಲಗಿತ್ತಿ ಮನವಿ ಮಾಡಿದರು.

ಈ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ ಸುರೇಶ ಮುಂಜೆ, ರೇಣುಕಮ್ಮ, ಬಿ ಎಸ್ ಯ ನಿತೇಶ ತೊರವಿ, ಬಿಜೆಪಿಯ ಸಿದ್ದು ಬೆಲ್ಲದ, ಕಾಂಗ್ರೆಸ್ ನ ಚನ್ನಬಸಪ್ಪ ನಾಮದಾರಿ, ಎಚ್. ಎಸ್. ದಳವಾಯಿ, ಮಚೀಂದ್ರ, ಜೆಡಿಎಸ್‍ ನ ಎಂ. ಕೆ. ಬಾಗಾಯತ, ಎಸ್‍ಡಿಪಿಐನ ನಿಸಾರ ಅಹ್ಮದ ಮನಿಯಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌