ಪೊಲೀಸರು ಶ್ರದ್ಧೆ, ಪ್ರಜ್ಞೆ, ರಚನಾತ್ಮಕವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು- ನಿವೃತ್ತ ಪೊಲೀಸ್ ಅಧಿಕಾರಿ ಸಿ. ಬಿ. ಬಾಗೇವಾಡಿ

ವಿಜಯಪುರ: ನಮ್ಮನ್ನು ನಾವು ಹೆಚ್ಚು ಶ್ರದ್ದಾಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ, ರಚನಾತ್ಮಕವಾಗಿ ಮತ್ತು ನಿಷ್ಠಾಪೂರಕವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ನಿವೃತ್ತ ಸಿಪಿಐ ಸಿ. ಬಿ. ಬಾಗೇವಾಡಿ ಹೇಳಿದ್ದಾರೆ. 

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಿಜಯಪುರ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ದಿನದಂದು ನಮ್ಮ ಸಂಕಲ್ಪ ದೃಢಪಡಿಸುವುದರ ಜೊತೆಗೆ, ಪೊಲೀಸ್ ಪಡೆಗಳ ಧೈರ್ಯ, ಶೌರ್ಯ, ಸ್ಥೈರ್ಯ ಮತ್ತು ಸಮರ್ಪಿತ ಮನೋಭಾವವನ್ನು ಪುರಸ್ಕರಿಸಿ ಗೌರವಿಸುವ ದಿನವಾಗಿದೆ.  ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಶಾಂತಿ ಪಾಲನೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.  ಕೊರೊನಾ ವಿರುದ್ಧ ಹೋರಾಟದಲ್ಲಿ ಅವಿರತವಾಗಿ ಶ್ರಮ ಪಟ್ಟಿದ್ದೇವೆ.  ನೊಂದವರ ಪಾಲಿಗೆ ಭರವಸೆಯನ್ನು ಹುಟ್ಟು ಹಾಕಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ಪೊಲೀಸರ ಧ್ಯೇಯವಾಗಿದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಪೊಲೀಸ್ ಕಲ್ಯಾಣ, ಧ್ವಜ ದಿನಾಚರಣೆ ಆಚರಿಸಲಾಯಿತು

ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಪೊಲೀಸ್ ಕಲ್ಯಾಣ ಕಾರ್ಯಕ್ರಮದ ಮೂಲಕ ಪೊಲೀಸರ ಮತ್ತು ಅವರ ಅವಲಂಬಿತರ ಜೀವನ ಮಟ್ಟವನ್ನು ಸುಧಾರಿಸಬೇಕಿದೆ.  ಈ ನಿಟ್ಟಿನಲ್ಲಿ ಪೊಲೀಸ್ ಕಲ್ಯಾಣ ನಿಧಿಯಡಿ ವಂತಿಕೆ ಸಂಗ್ರಹಿಸಿ, ಈ ನಿಧಿಯನ್ನು ಕಾಲಕಾಲಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ.  ಅದರಲ್ಲೂ ವೈದ್ಯಕೀಯ ಸಹಾಯಧನ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ಬಿ. ದಾನಮ್ಮನವರು ಮಾತನಾಡಿ, ಪೊಲೀಸರು ಹಗಲು-ರಾತ್ರಿ ಲೆಕ್ಕಿಸದೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಾರೆ.  ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರ ಸೇವೆ ಅನನ್ಯವಾಗಿದೆ.  ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಪೊಲೀಸರ ಬಹಳ ಶ್ರಮವಿದೆ.  ವಿಜಯಪುರದ ಪೊಲೀಸರು ಹಲವಾರು ಪ್ರಕರಣಗಳನ್ನು ಭೇದಿಸಿ,ತಾರ್ಕಿಕ ಅಂತ್ಯ ಕಾಣಿಸಿದ್ದಾರೆ.  ವಿಪತ್ತು, ಕೊರೊನಾ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.  ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೆಕಫೊಸ್ಟ್ಗ್ ಗಳಲ್ಲಿ ವಾಹನ ತಪಾಸಣೆ ಮಾಡಿ, ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆಯುಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.

ಎಸ್ಪಿ ಎಚ್. ಡಿ. ಆನಂದಕುಮಾರ ವರದಿ ವಾಚನ ಮಾಡಿ ಮಾತನಾಡಿದರು.  ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಒಟ್ಟಾಗಿ ಆಚರಿಸಲಾಗುತ್ತಿದೆ.  ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ  ಪೊಲೀಸ್ ಕಲ್ಯಾಣ ನಿಧಿಯಡಿ ವಂತಿಕೆ ಸಂಗ್ರಹಿಸುತ್ತಿದ್ದು ಈ ನಿಧಿಯನ್ನು ಕಾಲಕಾಲಕ್ಕೆ ಪೊಲೀಸ್ ಸಿಬ್ಬಂದಿ ಅವರಿಗೆ ಬಳಸಲಾಗುತ್ತಿದೆ.  2022-23ರ ಆರ್ಥಿಕ ವರ್ಷದಲ್ಲಿ ಪೊಲೀಸ್ ಕಲ್ಯಾಣ ನಿಧಿಯಿಂದ  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಧನ ಸಹಾಯ ಒದಗಿಸಿದೆ.  ವಿದ್ಯಾಭ್ಯಾಸಕ್ಕಾಗಿ ಪೊಲೀಸರ ಕುಟುಂಬ ಹಾಗೂ ಅವರ ಅವಲಂಬಿತ ತಂದೆ ತಾಯಿಯ ಆರೋಗ್ಯ ಭಾಗ್ಯ ಯೋಜನೆಯಡಿ ವೈದ್ಯಕೀಯ ಚಿಕಿತ್ಸಾ ಸೇವೆಯೂ ಒದಗಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂದೆ ಮಾತನಾಡಿದರು.

ಆಕರ್ಷಕ ಪಥಸಂಚಲನ

ಪರೇಡ್ ಕಮಾಂಡರ್ ಡಿ. ಎಸ್. ಶಿವಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ ಎಸ್ ಐ ರಂಗಪ್ಪ, ವಿಜಯಪುರ ನಗರದ ತಂಡದ ರಾಮು ಝಂಡೆ, ವಿಜಯಪುರ ಗ್ರಾಮೀಣ ವಲಯದ ತಂಡದ ಪಿಎಸ್ ಐ ಅರವಿಂದ ಅಂಗಡಿ, ಇಂಡಿ ವಲಯದಿಂದ ರಾಜು ಪೂಜಾರಿ, ಬಸವನ ಬಾಗೇವಾಡಿ ತಂಡದ ಆರ್. ಎಸ್. ಐ. ದಾನೇಶ ಕಲ್ಯಾಣಿ, ಆದರ್ಶ ನಗರ ಪೊಲೀಸ್ ಠಾಣೆಯ ಪಿ ಎಸ್ ಐ ಸುಷ್ಮಾ ಬಿ. ನಂದೆಗೋಳ, ಐ ಆರ್ ಬಿ ಕೆ. ಪಿ. ಖ್ಯಾಡದ ಅವರ ತಂಡಗಳು ಆಕರ್ಷಕವಾಗಿ ತೀವ್ರಗತಿಯ ಮತ್ತು ನಿಧಾನಗತಿಯ ಪಥ ಸಂಚಲನ ನಡೆಸಿದವು.

ಈ ಕಾರ್ಯಕ್ರಮಕದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌