ವೃದ್ಧೆಯ ಭಕ್ತಿ- ಗುಳೆ ತಪ್ಪಿಸಿ ಸುಖ ಸಂಸಾರಕ್ಕೆ ಕಾರಣರಾದ ಆಧುನಿಕ ಭಗೀರಥನ ಚುನಾವಣೆ ಖರ್ಚಿಗೆ ರೂ. 50 ಸಾವಿರ ನೀಡಲು ನಿರ್ಧಾರ

ವಿಜಯಪುರ: ನೀರಾವರಿ ಸೌಲಭ್ಯ ಒದಗಿಸಿ ಜನ ಗುಳೆ ಹೋಗುವುದನ್ನು ತಪ್ಪಿಸಲು ಕಾರಣರಾದ ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರಿಗೆ ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮತ್ತು ಖರ್ಚಿಗಾಗಿ ಬಂಜಾರಾ ವೃದ್ಧೆಯೊಬ್ಬರು ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್. ಟಿ. 2ರ ವೃದ್ದೆ ಪುತಲಿಬಾಯಿ ರಾಮು ರಾಠೋಡ(65) ಎಂ. ಬಿ. ಪಾಟೀಲರ ಮೇಲಿನ ಅಭಿಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುತಲಿಬಾಯಿ ರಾಮು ರಾಠೋಡ, ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದಲೂ ಸ್ವಂತ ಹೊಲವಿದ್ದರೂ ನೀರು ಇರದ ಕಾರಣ ದೇಶಾಂತರ(ಗುಳೆ) ಹೋಗುತ್ತಿದ್ದೇವು. ನಾಲ್ಕು ಎಕರೆ ಜಮೀನಿದ್ದರೂ, ಕೇವಲ ಒಣ ಬೇಸಾಯದಿಂದಾಗಿ ಬೆಳೆ ಬಾರದೇ ಸಂಕಷ್ಟ ಎದುರಿಸುತ್ತಿದ್ದೇವು. ಇದರಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಹುಡುಕಿಕೊಂಡು ಕುಟುಂಬಸ್ಥರೆಲ್ಲರೂ ಸೇರಿಕೊಂಡು ಮಹಾರಾಷ್ಟ್ರ ಮತ್ತೀತರ ಕಡೆ ದುಡಿಯಲು ಹೋಗುತ್ತಿದ್ದೇವು. ಆದರೆ, ಎಂ. ಬಿ. ಪಾಟೀಲ ಸಾಹೇಬರು ನಮಗ ನೀರಾವರಿ ಮಾಡಿದ್ದರಿಂದ ಈಗ ಹೊಲಗಳಿಗೆ ನೀರಾವರಿಯಾಗಿದೆ. ನಮ್ಮ ಪಾಲಿಗೆ ಈಗ ಉಳಿದಿರುವ ಒಂದು ಎಕರೆ ಜಮೀನಿನಲ್ಲಿ ಕಾಯಿಪಲ್ಲೆ, ಜೋಳ ಬೆಳೆಯುತ್ತಿದ್ದೇವೆ. ಈಗ ನಾವೆಲ್ಲ ಕುಟುಂಬ ಸದಸ್ಯರು ತಾಂಡಾದಲ್ಲಿಯೇ ಬಂಧುಗಳೊಂದಿಗೆ ಇದ್ದುಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಸಂಸಾರ ಸುಧಾರಿಸಲು ಎಂ. ಬಿ. ಪಾಟೀಲರೇ ಕಾರಣ ಎಂದು ತಿಳಿಸಿದರು.

ಕುಟುಂಬ ಸದಸ್ಯರೊಂದಿಗೆ ಪುತಲಿಬಾಯಿ ರಾಮು ರಾಠೋಡ

ನನ್ನ ಹಿರಿಯ ಮಗ ರಾಜು ರಾಮು ರಾಠೋಡ, ಎರಡನೇ ಮಗ ಪಿಂಟು ರಾಮು ರಾಠೋಡ ಮತ್ತು ನಾಲ್ಕನೆ ಮಗ ಲಿಂಗಪ್ಪ ರಾಮು ರಾಠೋಡ ಹೊಲದಲ್ಲಿ ಕೃಷಿ ಮಾಡುತ್ತಿದ್ದಾರೆ. ಮೂರನೇ ಮಗ ಕಟೀಲ ರಾಠೋಡ ಕುರಿಗಾಯಿಯಾಗಿದ್ದಾನೆ. ತಾಂಡಾ ಬಿಟ್ಟು ದೇಶಾಂತರ ಹೋಗುತ್ತಿದ್ದ ನಮಗೆ ಈಗ ನಮ್ಮ ತಾಂಡಾದಲ್ಲಿಯೇ ಎಲ್ಲರೊಂದಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸಲು ಎಂ. ಬಿ. ಪಾಟೀಲರ ನೀರಾವರಿ ಯೋಜನೆಗಳು ಶಾಶ್ವತ ಪರಿಹಾರ ಒದಗಿಸಿವೆ. ನಮಗೆ ಉಪಕಾರ ಮಾಡಿದ ನಾಯಕನಿಗೆ ಚುನಾವಣೆ ಸಂದರ್ಭದಲ್ಲಿ ನಮ್ಮದೂ ಅಳಿಲು ಸೇವೆ ಇರಲಿ ಎಂದು ನಿರ್ಧರಿಸಿ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆ ಖರ್ಚಿಗಾಗಿ ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದೇನೆ. ಇದು ನಾನು ದುಡಿದ ಗಳಿಸಿದ ಹಣ. ಮಕ್ಕಳಿಂದಲೂ ಹಣ ಪಡೆದಿಲ್ಲ. ನನ್ನ ತೀರ್ಮಾನಕ್ಕೆ ಮಕ್ಕಳು ಸಹಮತ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಹಣವನ್ನು ನೀಡುತ್ತೇವೆ ಎಂದು ತಿಳಿಸಿದರು.

ತಾಯಿಯ ನಿರ್ಧಾರದ ಕುರಿತು ಸಂತಸ ವ್ಯಕ್ತಪಡಿಸಿರುವ ಪುತ್ರ ಲಿಂಗಪ್ಪ ರಾಮು ರಾಠೋಡ, ಭೂಮಿ ತಾಯಿಗೆ ನೀರು ಸಿಕ್ಕಿದೆ. ಇದರಿಂದ ನನ್ನ ತಾಯಿ ಖುಷಿಯಾಗಿದ್ದಾರೆ. ಭೂಮಿ ತಾಯಿ ಮತ್ತು ನನ್ನ ತಾಯಿ ಸಂಸತದಿಂದ ಇರಲು ಕಾರಣರಾದ ಎಂ. ಬಿ. ಪಾಟೀಲರಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ. ಹೀಗಾಗಿ ತಾಯಿಯೊಂದಿಗೆ ಎಂ. ಬಿ. ಪಾಟೀಲರನ್ನು ಶೀಘ್ರದಲ್ಲಿ ಭೇಟಿಯಾಗಿ ಚುನಾವಣೆ ಖರ್ಚಿಗೆ ರೂ. 50 ಸಾವಿರ ನೀಡುವುದಾಗಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌