ಸ್ವಚ್ಛ ಆಡಳಿತ ನೀಡಲು ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ- ಬಿಜೆಪಿಗೆ ಅಧಿಕಾರ ತಪ್ಪಿಸಲು ವಿದೇಶಿ ಶಕ್ತಿಗಳು ಕೈ ಜೋಡಿಸಿವೆ- ಯತ್ನಾಳ

ವಿಜಯಪುರ: ಸ್ವಚ್ಛ ಆಡಳಿತ ನೀಡಲು ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ವಿದೇಶಿ ಶಕ್ತಿಗಳ ಷಡ್ಯಂತ್ರ ರೂಪಿಸಿವೆ ಎಂದು ವಿಜಯಪುರ ನಗರ ಬಿಜೆಪಿ ಅಭರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಈ ಎಲ್ಲ ವೇಸ್ಟ್ ಬಾಡಿಗಳನ್ನು ಅಂದರೆ ಕಸವನ್ನು ತೆಗೆದು ಕರ್ನಾಟಕದಲ್ಲಿ ಸ್ವಚ್ಛ ಆಡಳಿತ ನೀಡಲು ಹಲವಾರು ಜನರಿಗೆ ಟಿಕೆಟ್ ನಿರಾಕರಿಸಲಾಗಿದೆ.  ಇವರೆಲ್ಲರ ಬಗ್ಗೆ ಪ್ರಧಾನಿ, ಬಿಜೆಪಿ ಮುಖಂಡರಿಗೆ ಮಾಹಿತಿ ಇದೆ.  ಎರಡನೇ ಹಂತದ ನಾಯಕರನ್ನು ಬೆಳೆಸಬೇಕು.  ಮುಂದಿನ ಐದು ವರ್ಷ ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ಒಳ್ಳೆಯ ಪ್ರಾಮಣಿಕ ಸರಕಾರ ಕರ್ನಾಟಕದಲ್ಲಿ ರಚಿಸುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ಈ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

ಬಿಜೆಪಿ ಲಿಂಗಾಯಿತರನ್ನು ನಿರ್ಲಕ್ಷಿಸಿಲ್ಲ- ಕ್ಷಮೆ ಕೇಳಿ ವಾಪಸ್ಸಾಗಿ

ಬಿಜೆಪಿ ಲಿಂಗಾಯಿತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ.  ಪಕ್ಷ ಬಿಟ್ಟವರಲ್ಲಿ ಸ್ವಾರ್ಥ ಅಡಗಿದೆ.  ಪಕ್ಷಕ್ಕೆ ಡ್ಯಾಮೇಜ್ ಮಾಡುವ ಕೆಲಸವನ್ನು ನೀವು ಮಾಡಿದ್ದೀರಿ.  ದೇವರು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ.  ತಾವೆಲ್ಲರೂ ಆರ್ ಎಸ್ ಎಸ್ ಸ್ವಯಂ ಸೇವಕರು ಎಂದು ಹೇಳಿಕೊಳ್ಳುತ್ತೀರಿ.  ನಿಮ್ಮ ತತ್ವ ಈಗ ಎಲ್ಲಿ ಹೋಗಿದೆ? ನಿಮ್ಮ ಸಲುವಾಗಿಯೇ ರಾಜಕಾರಣ ಮಾಡಿದ್ದೀರಿ ಎಂದು ಅರ್ಥ ಅಲ್ವಾ? ನೀವು ಎಂಎಲ್‌ಎ, ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶ ಮಾತ್ರ ಹೊಂದಿದ್ದೀರಿ.  ದೇಶದ ಹಿಂದೂಗಳು, ನಿಮಗೆ ಕಾಳಜಿಯಿಲ್ಲ.  ಸಿದ್ಧಾಂತದ ಬಗ್ಗೆ ಕಾಳಜಿಯಿಲ್ಲ.  ಲಿಂಗಾಯಿತರು, ಮರಾಠರು, ದಲಿತರಿಗೆ ನೀಡಿರುವ ಮೀಸಲಾತಿ ತೆಗೆದು ಹಾಕುತ್ತೇವೆ ಎನ್ನುವ ಪಾರ್ಟಿಗೆ ನೀವು ಸೇರುತ್ತಿದ್ದೀರಿ.  ಇದರ ಉದ್ದೇಶ, ನಿಮ್ಮ ಮತ್ತು ನಿಮ್ಮ ಕುಟುಂಬ ಸ್ವಾರ್ಥ ಕಾಣಿಸುತ್ತದೆ.  ಈಗಲೂ ಕಾಲ ಮಿಂಚಿಲ್ಲ.  ಮಾಡಿದ ತಪ್ಪಿನ ಕುರಿತು ಕ್ಷಮೆ ಕೇಳಿ ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ 5ನೇ ನಂಬರ್ ನಲ್ಲಿದ್ದವರು ಈಗ ಕಾಂಗ್ರೆಸ್ ಸೇರಿದ್ದಾರೆ.  ಮೇ 13ರ ನಂತರ ಕಾಂಗ್ರೆಸ್ಸಿನಲ್ಲಿ ಅವರನ್ನು ನಾಯಿಗಿಂತ ಕಡೆ ಮಾಡುತ್ತಾರೆ.  ಕಾಂಗ್ರೆಸ್ಸಿನಲ್ಲಿ ಯಾರೂ ದಕ್ಕುವುದಿಲ್ಲ.  ಬಿಜೆಪಿಯಲ್ಲಿದ್ದವರು ಮೊದಲು ದಕ್ಕುವುದಿಲ್ಲ.  ಇವರು ಸಿದ್ಧಾಂತಗಳ ಮೇಲೆ ಬೆಳೆದವರು.  ಅಲ್ಲಿಗೆ ಹೋದರೆ ಇವರನ್ನು ಯಾರು ಕೇಳುತ್ತಾರೆ. ಸೋನಿಯಾ ಗಾಂಧಿ ಕಿ ಜೈ, ಅರೆ ಹುಚ್ಚ ರಾಹುಲ್ ಗಾಂಧಿ ಕಿ ಜೈ ಎಂದು ಹೇಳಲು ನಾಚಿಕೆ ಬರುವುದಿಲ್ಲವೇ? ಭಾರತ ಮಾತಾ ಕಿ ಜೈ ಎನ್ನುವುದನ್ನು ಬಿಟ್ಟು ವಿದೇಶ ಮಹಿಳೆಯ ಜೈ ಎನ್ನುವುದು ಸರಿಯಲ್ಲ. ನಮಗಂತೂ ಸ್ವಾಭಿಮಾನ ಇದ್ದವರು ಕಾಂಗ್ರೆಸ್ ಸೇರಬಾರದು ಎಂದು ಅವರು ಹೇಳಿದರು.

ಬಿಜೆಪಿ ಬಿಟ್ಟವರು ಮೀಸಲಾತಿ ವಿರೋಧಿಗಳು- ಬಿಜೆಪಿಗೆ ವಾಪಸ್ ಶರಣಾಗಿ

ಕಾಂಗ್ರೆಸ್ಸಿನವರ ಮೀಸಲಾತಿ ತೆಗೆಯುವ ಘೋಷಣೆ ಮಾಡಿದ್ದಾರೆ.  ಹಾಗಾದರೆ ಲಿಂಗಾಯಿತರಿಗೆ ಸಿಕ್ಕಿರುವ ಮೀಸಲಾತಿಯ ಬಗ್ಗೆ ನಿಮಗೆ ಸಮಾಧಾನವಿಲ್ಲವೇ? ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ ಮೀಸಲಾತಿ ಎರಿಸಿದ ಬಗ್ಗೆ ಸಮಾಧಾನವಿಲ್ಲವೇ? ಲಿಂಗಾಯಿತರು, ಮರಾಠರು, ಕ್ಷತ್ರೀಯ ಸಮಾಜರು, ಕ್ರಿಶ್ಚಿಯನ್ನರಿಗೆ ಸಿಗುವ ಮೀಸಲಾತಿ ತೆಗೆದು ಹಾಕುವ ಪಕ್ಷಕ್ಕೆ ನೀವು ಸೇರುವ ಮೂಲಕ ತಪ್ಪು ಮಾಡಿದ್ದಾರೆ.  ರಾಜ್ಯದಲ್ಲಿ ನಿಮ್ಮ ಅಧ್ಯಾಯ ಕೊನೆಯಾಗುತ್ತದೆ.  ಇಂಥ ನಾಯಕರಿಗೆ ಸಲಹೆ ನೀಡುತ್ತೇನೆ.  ಕಿವಿಮಾತು ಹೇಳುತ್ತೇನೆ.  ದುಡುಕಿನ ನಿರ್ಧಾರ ನೀವು ಮಾಡಿದ್ದೀರಿ.  ಅದರಿಂದ ವಾಪಸ್ ಬನ್ನಿ, ಬಿಜೆಪಿಗೆ ಶರಣರಾಗಿ.  ಪ್ರಧಾನಿ, ನಡ್ಡಾ, ಅಮಿತ್ ಶಾ ನಿರ್ಧಾರಕ್ಕೆ ಬದ್ಧರಾಗೋಣ.  ಈ ಪಕ್ಷದ ಋಣ ನಮ್ಮ ಮೇಲಿದೆ.  ಉಪಕಾರವಿದೆ.  ಎಲ್ಲರಿಗೂ ಒಂದೊಂದು ಕಾಲದಲ್ಲಿ ಅನ್ಯಾಯ ಎಂದು ನಮಗೆ ಎನಿಸುತ್ತದೆ.  ನನಗೂ ಐದು ವರ್ಷದಲ್ಲಿ ನನಗೂ ಅನ್ಯಾಯವಾಗಿದೆ.  ನನ್ನನ್ನು ಮಂತ್ರಿ ಮಾಡಲಿಲ್ಲ.  ಒಂದು ದಿನವೂ ನಾನು ಮಂತ್ರಿ ಸಲುವಾಗಿ ಲಾಬಿ ಮಾಡಲಿಲ್ಲ.  ನಗರದ ವಿಕಾಸಕ್ಕಾಗಿ ನಮ್ಮ ಸಿಎಂ ಸಾಕಷ್ಟು ಸಹಾಯ ಮಾಡಿದ್ದಾರೆ.  ನಾನು ಯಾರೊಂದಿಗಾದರೂ ಜಗಳಾಡಿರಬಹುದು.  ಆದರೆ, ಬಿಜೆಪಿಯಿಂದ ಆರು ವರ್ಷಗಳ ಕಾಲ ನನ್ನನ್ನು ಉಚ್ಛಾಟನೆ ಮಾಡಿದಾಗ ನಾನು ಜೆಡಿಎಸ್ ಸೇರಿದ್ದೆ ಹೊರತು ನಾನಾಗಿಯೇ ಬಿಜೆಪಿ ಟಿಕೆಟ್ ಕೊಟ್ಟಿಲ್ಲ, ನನಗೆ ಮೋಸ ಮಾಡಿದ್ದಾರೆ ಎಂಬ ಕಾರಣದಿಂದ ಬಿಜೆಪಿ ತೊರೆದಿಲ್ಲ ಎಂದು ಅವರು ತಿಳಿಸಿದರು.

ಶೆಟ್ಟರ ಬಿಜೆಪಿ ಬಿಡಬಾರದಿತ್ತು- ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತೆ ವಿದೇಶಿ ಶಕ್ತಿಗಳು ಷಡ್ಯಂತ್ರ ರೂಪಿಸಿವೆ

ಬಿಜೆಪಿ ಬಗ್ಗೆ ಮಾತನಾಡಿದರೆ ತಕ್ಕ ಉತ್ತರ ನೀಡುತ್ತೇವೆ.  ಇನ್ನು ಮೇಲೆ ಬಿಜೆಪಿ ಬಗ್ಗೆ, ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ನಮ್ಮ ಪಕ್ಷದಿಂದ ಸೂಕ್ತ ಉತ್ತರ ಕೊಡುತ್ತೇವೆ.   ಜಗದೀಶ ಶೆಟ್ಟರ ಅವರು ಪಕ್ಷ ಬಿಡುವ ಬದಲು ಉಳಿಯಬೇಕಿತ್ತು.  ಧರ್ಮೇಂದ್ರ ಪ್ರಧಾನ, ಬಿ. ಎಲ್. ಸಂತೋಷ, ಮುಖ್ಯಮಂತ್ರಿ ಬೊಮ್ಮಾಯಿ ಮನವೊಲಿಸುವ ಕೆಲಸ ಮಾಡಿದ್ದಾರೆ.  ಅವರಿಗೆ ಸಾಕಷ್ಟು ಆಶ್ವಾಸನೆ ಕೂಡ ಕೊಟ್ಟಿದ್ದಾರೆ.  ಆದರೂ, ವ್ಯವಸ್ಥಿತವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ದೊಡ್ಡ ಷಡ್ಯಂತ್ರವ್ನನು ದೇಶ ಮತ್ತು ವಿದೇಶಿ ಶಕ್ತಿಗಳು ತಂತ್ರ ರೂಪಿಸಿವೆ.  ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡರೆ ಲೋಕಸಭೆಯಲ್ಲಿ ಪರಿಣಾಮ ಬೀರಲಿದೆ ಎಂಬ ದುರುದ್ದೇಶದಿಂದ ಈ ಷಡ್ಯಂತ್ರ ರೂಪಿಸಿವೆ ಎಂದು ಅವರು ಆರೋಪಿಸಿದರು.

ಕರ್ನಾಟಕದಲ್ಲಿ ಮೇ 13ರ ನಂತರ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ.  ಈಗ ಪಕ್ಷ ತೊರೆದವರ ಡಿಪಾಸಿಟ್ ಉಳಿಯುವುದಿಲ್ಲ.  ದೇಶದ ಜನ ಇಂದು ನರೇಂದ್ರ ಮೋದಿ ಕಡೆ ನೋಡುತ್ತಿದ್ದಾರೆ.  ರಾಷ್ಟ್ರದ ಸುರಕ್ಷೆ ನೋಡುತ್ತಿದ್ದಾರೆ.  ರಾಷ್ಟ್ರದ ಪ್ರಗತಿ ನೋಡುತ್ತಿದ್ದಾರೆ.  ಪ್ರಾಮಾಣಿಕರಿಗೆ ಹೊಸ ಅವಕಾಶ ನೀಡಲು ಈ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಯತ್ನಾಳ ತಿಳಿಸಿದರು.

ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಮೈತ್ರಿ ಮಾರಕ

ಎಸ್ ಡಿ ಪಿ ಐ ವಿದೇಶಿ ಶಕ್ತಿ.  2047ಕ್ಕೆ ಇಸ್ಲಾಂ ರಾಷ್ಟ್ರ ಮಾಡಬೇಕು.  ಈ ದೇಶದ ರಾಷ್ಟ್ರಪತಿ, ಈ ದೇಶದ ಪ್ರಧಾನ ಮಂತ್ರಿ ಮುಸ್ಲಿಂ ಆಗಬೇಕು ಎಂಬ ಸಂಕಲ್ಪ ಹೊಂದಿರುವ ಎಸ್ ಡಿ ಪಿ ಐಗೆ ವಿದೇಶಗಳಿಂದ, ಪಾಕಿಸ್ತಾನದಿಂದ, ಮುಸ್ಲಿಂ ರಾಷ್ಟ್ರಗಳಿಂದ ಹಣ ಬರುತ್ತಿದೆ.  ಅಂಥ ಸಂಘಟನೆ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದು, ವಿದೇಶಿ ಶಕ್ತಿಗಳು ಕೂಡ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಿ ಬಿಟ್ಟರೆ ಮುಂಬರುವ ದಿನಗಳಲ್ಲಿ ಇಡೀ ದೇಶದಲ್ಲಿ ಮೋದಿ ಮತ್ತು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ಅನುಕೂಲವಾಗುತ್ತದೆ ಎಂಬ ದುರದ್ದೇಶದಿಂದ ವ್ಯವಸ್ಥಿತವಾಗಿ ಈ ಕೃತ್ಯ ನಡೆಸುತ್ತಿವೆ.  ದುರಂತವೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ 2047ರ ವರೆಗೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ತಂತ್ರ ರೂಪಿಸಿರುವ ಮತ್ತು ಈಗಾಗಲೇ ಭಾರತ ಸರಕಾರ ನಿಷೇಧ ಮಾಡಿರುವ ಪಿ ಎಫ್ ಐ ನ ಪ್ರತಿರೂಪವಾದ ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಪಕ್ಷ ಮೈತ್ರಿಯನ್ನು ಮಾಡಿಕೊಂಡಿದೆ.  ಎಸ್ ಡಿ ಪಿ ಐ ಉದ್ದೇಶ ಭಾರತದಲ್ಲಿರುವ ಸಮಸ್ತ ಹಿಂದೂಗಳನ್ನು ನಾಶ ಮಾಡುವುದು, ಅವರನ್ನು ಮತಾಂತರ ಮಾಡುವುದು, 2047ಕ್ಕೆ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಮೂಲಕ ಭಾರತದ ಸಂವಿಧಾನವನ್ನುಅಂತ್ಯ ಮಾಡುವ ದೊಡ್ಡ ಸಂಚನ್ನು ರೂಪಿಸಿದೆ. ಈ ಕುರಿತು ಸಾಕಷ್ಟು ದಾಖಲೆಗಳು ಕೇಂದ್ರ ಸರಕಾರಕ್ಕೆ ಸಿಕ್ಕ ಮೇಲೆ, ಕೇಂದ್ರ ಸರಕಾರ ಸಾಕಷ್ಟು ಅಧ್ಯಯನ ಮಾಡಿ, ಗುಪ್ತಚರ ಇಲಾಖೆ, ಎನ್ ಐ ಎ ಎಲ್ಲ ಕಡೆಯಿಂದ ಮಾಹಿತಿ ಪಡೆದು ಇವತ್ತು ನಿಷೇಧ ಮಾಡಿದ್ದಾರೆ.  ಅದೇ ಸಂಘಟನೆಯ ಮತ್ತೋಂದು ರೂಪ ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.

ಇಂಥ ದೇಶ ವಿರೋಧಿ, ಮುಸ್ಲಿಂ ಶಕ್ತಿಗಳ ರಾಷ್ಟ್ರದ್ರೋಹಿಗಳ ಜೊತೆ ನೀವು ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕವನ್ನು ಕಾಶ್ಮೀರ, ಪಾಕಿಸ್ತಾನದಂತೆ ಭಯೋತ್ಪಾದಕರ ತಾಣವನ್ನಾಗಿ ಮಾಡುವ ಮತ್ತು ಪಿ ಎಫ್ ಐ ಕರ್ನಾಟಕವನ್ನು ಇಸ್ಲಾಮಿಕರಣ ಮಾಡುವ ಪ್ರಯೋಗ ಶಾಲೆಯಾಗಿ ಮಾಡಿದೆ.  ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, 1700 ಪಿ ಎಫ್ ಐ, ಎಸ್ ಡಿ ಪಿ ಐ ಭಯೋತ್ಪಾದಕರ ಮೇಲಿರುವ ಎಲ್ಲ ಕ್ರಿಮಿನಲ್ ಕೇಸ್ ಗಳನ್ನು ಸಿದ್ಧರಾಮಯ್ಯ ಪಿಂಹಡೆದಿದೆ.  ಹಿಂದೂ ಕಾರ್ಯಕರ್ತರ ಮೇಲಿರುವ ಒಂದೂ ಕೇಸ್ ಹಿಂಪಡೆದಿಲ್ಲ.  ಗೋಹತ್ಯೆ ಮಾಡಿದ ಕಾರ್ಯಕರ್ತರಿಗೆ ಶಿಕ್ಷೆ ನೀಡಿಲ್ಲ.  ಗೋಹತ್ಯೆಗೆ ಬೆಂಬಲ ಕೊಟ್ಟಂಥಹ ಕೆಲವೊಂದು ವ್ಯಕ್ತಿಗಳಿಗೆ ರೂ. 5 ರಿಂದ ರೂ. 10 ಲಕ್ಷ ಪರಿಹಾರ ಕೊಡುವ ಅತ್ಯಂತ ದುರ್ದೈವದ ಸಂಗತಿ ಈ ರಾಜ್ಯದಲ್ಲಿ ನಡೆದಿದೆ.  ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬಹಿರಂಗಪಡಿಸಲಿ.  ಎಸ್ ಡಿ ಪಿ ಐ ಜೊತೆ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ನಮ್ಮಲ್ಲಿ ದಾಖಲೆ ಇದೆ.  ಉದ್ದೇಶಪೂರಕವಾಗಿ ರಾಜ್ಯದಲ್ಲಿ ತುಷ್ಠೀಕರಣ ಮಾಡಬೇಕು.  ಕೋಮು ಗಲಭೆಗೆ ಅವಕಾಶ ಕೊಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ಜನರನ್ನು ಮೋಸ ಮಾಡುವ ಒಂದು ತಂತ್ರ ಎಂದು ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

Leave a Reply

ಹೊಸ ಪೋಸ್ಟ್‌