ಚುನಾವಣೆ ಬಳಿಕ ಬೊಮ್ಮಾಯಿ ಅವರಿಗೂ ಯಡಿಯೂರಪ್ಪ, ಸವದಿ, ಶೆಟ್ಟರ ಪರಿಸ್ಥಿತಿ ಬರಲಿದೆ ಎಂ ಬಿ ಪಾಟೀಲ

ವಿಜಯಪುರ: ಚುನಾವಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪರಿಸ್ಥಿತಿ ಬರಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಲಿಂಗಾಯಿತರನ್ನು ವ್ಯವಸ್ಥಿತವಾಗಿ ಬಿಜೆಪಿ ತುಳಿಯುತ್ತಿದೆ.  ಮೊದಲಿಗೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಯಿತು.  ಅವರಿಂದ ಆಪರೇಷನ್ ಕಮಲ‌ ಮಾಡಿಸಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು.  ಬಿ ಎಸ್ ವೈ ಅವರನ್ನು ಬಳಸಿಕೊಂಡು ಹಿಂಬಾಗಿಲಿನಿಂದ ಅನೈತಿಕ ಸರಕಾರ ತಂದ್ರು.  ಬಳಿಕ ಅವರನ್ನ ಮೂಲೆಗುಂಪು ಮಾಡಿ, ಕೆಳೆಗೆ ಇಳಿಸಿದರು ಎಂದು ಅವರು ಆರೋಪಿಸಿದರು.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದಾಗ ಮತ್ತೊಬ್ಬ ಲಿಂಗಾಯತರನ್ನು ಸಿಎಂ ಮಾಡುವುದು ಬಿಜೆಪಿಯವರ ಉದ್ಧೇಶ ಆಗಿರಲಿಲ್ಲ.  ಅವರ ಅಜೆಂಡಾ ಬೇರೆ ಯಾರನ್ನೋ ಮಾಡಬೇಕು ಎಂಬುದಾಗಿತ್ತು.  ಆ ಸಮಯದಲ್ಲಿ ನಾನು, ಶಾಮನೂರು ಶಿವಶಂಕರಪ್ಪನವರು, ಜನ, ಎಲ್ಲಾ ಮಠಾಧೀಶರು ಸೇರಿ ಪ್ರತಿಭಟನೆ ಮಾಡಿದಾಗ ಅನಿವಾರ್ಯವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು.  ಯಡಿಯೂರಪ್ಪನವರ ಸರದಿ ಮುಗಿದಿದೆ.  ನಂತರ ಲಕ್ಷ್ಮಣ ಸವದಿ ಸರದಿ ಮುಗಿದಿದೆ.  ಜಗದೀಶ ಶೆಟ್ಟರ ಸರದಿ ಮುಗಿದಿದೆ.  ಶೆಟ್ಟರ ಅವರಿಗೆ ಈಗ 65 ವರ್ಷ.   ನನಗಿಂತ ಅವರ ಆರೋಗ್ಯ ಚೆನ್ನಾಗಿದೆ.  ಫಿಟ್ ಇದ್ದಾರೆ.  ಅವರ ಮೇಲೆ ಆರೋಪಗಳು ಇಲ್ಲ.  ಚುನಾವಣೆಯಲ್ಲಿ ಸಮೀಕ್ಷೆಯಲ್ಲಿ ಗೆಲ್ಲಲಿದ್ದಾರೆ ಎಂಬ ಮಾಹಿತಿ ಇತ್ತು.  ಅವರು ಅಧಿಕಾರಕ್ಕೆ ಆಸೆ ಪಡದ, ಸೌಮ್ಯ ಸ್ವಭಾವದ ಸರಳ‌ ಸಜ್ಜನಿಕೆಯ ವ್ಯಕ್ತಿ.  ಅವರಿಗೆ ಒಂದು ವಿಧಾನಸಭೆ ಟಿಕೆಟ್ ಕೊಡಲಿಲ್ಲ.  ಕಾರಣವೇ ಇಲ್ಲದೆ ಒಂದು ಟಿಕೆಟ್ ಸಲುವಾಗಿ ಮಾನಸಿಕ ಚಿತ್ರಹಿಂಸೆ ಕೊಡುತ್ತಿದ್ದಾರೆ.  ಕಳೆದ ಎರಡು ವರ್ಷದಿಂದ ಅವರನ್ನು ಮೂಲೆಗುಂಪು ಮಾಡಲಾಗಿತ್ತು.  ಆಗಿನ ಕಾಲದ ಬಿಜೆಪಿ ಬೇರೆ, ಈಗಿನ ಬಿಜೆಪಿ ಬೇರೆ.  ಬಿಜೆಪಿ ಈಗ ಕೆಲವರ ಕಪಿಮುಷ್ಠಿಯಲ್ಲಿ ಇದೆ ಎಂದು ಜಗದೀಶ ಶೆಟ್ಟರ್ ಅವರು ಹೇಳಿದ್ದಾರೆ.  ಹೀಗಾಗಿಯೇ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಯಡಿಯೂರಪ್ಪ ಅವರನ್ನು ಮುಗಿಸಿದ್ರು, ಲಕ್ಷ್ಮಣ ಸವದಿ ಅವರನ್ನು ಮುಗಿಸಿದ್ರು, ಈಗ ಜಗದೀಶ ಶೆಟ್ಟರ ಅವರನ್ನು ಮುಗಿಸಿದ್ರು.  ಬೊಮ್ಮಾಯಿ ಅವರದ್ದು ಕಾಲ‌ ಬಹಳ‌ ದೂರಿವಿಲ್ಲ.  ಚುನಾವಣೆ ಬಳಿಕ ಬೊಮ್ಮಾಯಿ ಅವರಿಗೂ ಇದೇ ಪರಿಸ್ಥಿತಿ ಬರುತ್ತೆ.  ಬರೆದಿಟ್ಟುಕೊಳ್ಳಿ.  ಚುನಾವಣೆ ಮುಗಿದ ಬಳಿಕ ಬೊಮ್ಮಾಯಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ನೋಡಿ.  ಬಿಜೆಪಿ ಹಿಡನ್ ಅಜೆಂಡಾ ಬೇರೆನೇ ಇದೆ.  ಇದ್ನು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಈ ಹಿಂದೆ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಈ ಬಾರಿ ಚುನಾವಣೆಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.  ನೀರಾವರಿ ಅಭಿವೃದ್ಧಿ ಮಾಡಿದ್ದೇನೆ.  ರೈತರಿಗೆ ಅನುಕೂಲ ಕಲ್ಪಿಸಿದ್ದೇನೆ.  ಸೂರ್ಯ ಚಂದ್ರರು ಇರುವ ವರೆಗೂ ರೈತರ ಕುಟುಂಬಗಳು ಆರ್ಥಿಕ ಸಬಲತೆ ಹೊಂದುತ್ತವೆ.  ನಾನು ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೆನೆ ಎಂದು ಅವರು ಹೇಳಿದರು.

ಲಕ್ಷ್ಮಣ ಸವದಿ ಆಗಮನದಿಂದ ಕಾಂಗ್ರೆಸ್ಸಿಗೆ ಲಾಭ

ಇದೇ ವೇಳೆ, ಲಕ್ಷ್ಮಣ ಸವದಿ ಹಿರಿಯ ನಾಯಕರು.  ಸಚಿವರಾಗಿ, ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ.  ಅವರ ಆಗಮನದಿಂದ ವಿಜಯಪುರ, ಬಾಗಲಕೋಟೆ, ಕೊಪ್ಪಳ, ಯಲಬುರ್ಗಾ, ಜೇವರ್ಗಿ ಸೇರಿದಂತೆ 10ಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಅವರ ಪ್ರಭಾವ ಇದ್ದು, ಎಲ್ಲ ಕಡೆ ಕಾಂಗ್ರೆಸ್ಸಿಗೆ ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ- ಸಿಎಂ ವಿರುದ್ಧ ಶಾಸಕ ಓಲೆಕಾರ ಆರೋಪ ವಿಚಾರ

ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಾಸಕ ನೆರಹೂ ಓಲೆಕಾರ ಮಾಡಿರುವ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ‌ ಸರಕಾರ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದೆ.  ಕಾಂಟ್ರಾಕ್ಟರ್ ಅಸೋಸಿಯೇಷನ್ ಪತ್ರ ಬರೆದು ಎರಡು ವರ್ಷ ಆಯ್ತು.  ನಾ ಖಾವುಂಗಾ, ನಾ ಖಾನೆದುಂಗಾ ಅಂತ ಪ್ರಧಾನಿ ಹೇಳುತ್ತಾರೆ.  ಮತ್ತೆ 40 ಪರ್ಸೆಂಟ್ ಖಾವುಂಗಾ ಇದೆಯಲ್ಲ, ಇದು ತಿನ್ನೋದು ಅಲ್ಲಾ ಅನ್ಕೊಂಡಿದಾರಾ? ಅಥವಾ 40 ಪರ್ಸೆಂಟ್ ಕಡಿಮೆ ಎನೆಸಿದೆಯಾ? ನಾ ಖಾನೇ ದುಂಗಾ ಅಂದ್ರೆ 100 ಪರ್ಸೆಂಟ್ ನಾ ಅಥವಾ 40 ಪರ್ಸೆಂಟ್ ಖಾನೆದೂಂಗಾ ನಾ ಎಂಬ ಪ್ರಶ್ನೆ ಮೂಡುತ್ತದೆ.  ಇದೊಂದೇ ಅಲ್ಲ, ಬಹಳಷ್ಟು ಹಗರಣಗಳು ಇವೆ.  ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿ ಕೊಟ್ಟಿಲ್ಲ.  ಬದುಕನ್ನು ಕಟ್ಟಿಕೊಡುವ ಕೆಲಸ ಇವರಿಂದ ಆಗಿಲ್ಲ.  ಕೇವಲ ಭಾವನೆಗಳನ್ನು ಕೆಲಸ ಮಾಡಿದ್ದಾರೆ ಎಂದು ಅ;ರು ಆರೋಪಿಸಿದರು.

ಹಿಜಾಬು, ಹಲಾಲ್, ಅಜಾನು, ಲವ್ ಜಿಹಾದ್ ಇಂಥದ್ದೆ ಮಾತನಾಡುತ್ತಾರೆ.  ನೀರು, ಚರಂಡಿ, ರಸ್ತೆ ಏನ್ ಮಾಡ್ತಿರಾ? ಲವ್ ಜಿಹಾದ್ ಎಬ್ಬಿಸಿಬಿಡಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳುತ್ತಾರೆ.  ಈ ರಾಜ್ಯದ ಭವ್ಯವಾದ ಇತಿಹಾಸ, ಸಂಸ್ಕ್ರತಿ, ಗೌರವ ಎಲ್ಲವನ್ನೂ ಮಣ್ಣುಪಾಲು ಮಾಡಿದ್ದಾರೆ.  ನಾವು ಮತ್ತೆ ಅಧಿಕಾರಕ್ಕೆ ಬಂದು ಈ ರಾಜ್ಯದ ಮರ್ಯಾದೆ, ಗೌರವವನ್ನು ಮರು ಸ್ಥಾಪನೆ ಮಾಡಿ, ಅಭಿವೃದ್ಧಿ ಮಾಡುತ್ತೇವೆ.  ಮೇ 10 ರ ಬಳಿಕ ಈ‌ ಕೆಟ್ಟ ಸರಕಾರವನ್ನು ಕಿತ್ತು ಹಾಕುತ್ತಾರೆ. ಅದು ಮೇ 13ಕ್ಕೆ ಎಲ್ಲರಿಗೂ ಗೊತ್ತಾಗುತ್ತೆ.  ಕಾಂಗ್ರೆಸ್ ಬಹಳ ದೊಡ್ಡ ಮಟ್ಟದಲ್ಲಿ ಅಧಿಕಾರಕ್ಕೆ ಬಂದು ಜನ್ರ ಸೇವೆ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ತಿಳಿಸಿದರು.

ಮೀಸಲಾತಿ ವಿಚಾರ

ಮೀಸಲಾತಿ ಯಾವ ರೀತಿಯಿಂದ ಮಾಡಿದ್ರು? ಯಾವುದೇ ಮೀಸಲಾತಿ ಮಾಡಿದರೆ ಅದಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಬೇಕಾಗುತ್ತೆ.  ಮುಸ್ಲಿಂ ಸಮುದಾಯದ ಕೇಸ್ ನಲ್ಲಿ ಬೇರೆಯವರದ್ದನ್ನು ಕಿತ್ತುಕೊಂಡು ಕೊಡಿ ಅಂತ ಲಿಂಗಾಯತರು ಹಾಗೂ ಬೇರೆಯವರು ಯಾರೂ ಕೇಳಿಲ್ಲ.  2ಎ ಕೇಳಿದರೆ 2ಸಿ, 2ಡಿ ಕೊಟ್ಟಿದ್ದಾರೆ.  ರಿಟ್ ಪೆಟಿಷನ್ ಪೆಂಡಿಂಗ್ ಇದ್ದಾಗ ಹೀಯರಿಂಗ್ ಮಾಡದೆ ಕಿತ್ತಾಕಿದ್ದು ಕಾನೂನು ಬಾಹಿರ ಎಂದು ಕೋರ್ಟ್ ಹೇಳಿದೆ.  ಇದು ಚುನಾವಣೆ ಗಿಮಿಕ್ ಆಗಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

Leave a Reply

ಹೊಸ ಪೋಸ್ಟ್‌