ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೆರೆ ಅಂಗಳದಲ್ಲಿ ಮತದಾನ ಜಾಗೃತಿ

ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ರಾಹುಲ್ ಶಿಂಧೆ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ  ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ತಾಳಿಕೋಟಿ  ತಾಲೂಕಿನ ಅಸ್ಕಿ ಗ್ರಾಮ ಪಂಚಾಯಿತಿಯ ಅಸ್ಕಿ ಗ್ರಾಮದ  ಕೆರೆ ಹೂಳೆತ್ತುವ  ಕಾಮಗಾರಿ ಸ್ಥಳದಲ್ಲಿ,  ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆರೆ ಅಂಗಳದಲ್ಲಿ ಮತದಾನ ಜಾಗೃತಿ ಸಂಬಂಧಿಸಿದ “ನನ್ನ ಮತ ನನ್ನ ಹಕ್ಕು” ಘೋಷಣೆಯೊಂದಿಗೆ  ಕೂಲಿಕಾರ್ಮಿಕರಿಗೆ “ಮತದಾನ ಪ್ರತಿಜ್ಞಾವಿಧಿ” ಬೋಧಿಸಲಾಯಿತು.

ಈ ಸಂದರ್ಭ ಪಂಚಾಯತ ಅಭಿವೃದ್ಧಿ ಅಧಿಕಾರಿ ನಿಂಗಣ್ಣ ದೊಡಮನಿ ಅವರು ಮಾತನಾಡಿ, ಮೇ 10ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಮತ ಅಮೂಲ್ಯವಾಗಿದ್ದು, ಯಾರೂ ಸಹ ಮತದಾನದಿಂದ ಹೊರಗುಳಿಯಬಾರದು.ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಮಲಕಪ್ಪ ಬಿ.ಎಮ್, ಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನ, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ವಿಎಎಫ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌