ಶೇ.90 ಮತದಾನ ಮಾಡಿದರೆ, 40 ಸಾವಿರ ಮತಗಳಿಂದ ಗೆಲುವು- ಯತ್ನಾಳ

ವಿಜಯಪುರ: ಕಳೆದ ಬಾರಿ ಮುಸ್ಲಿಂ ಸಮುದಾಯ ಪ್ರದೇಶಗಳಲ್ಲಿ ಸಾವಿರಕ್ಕೆ ಒಂದೇರಡು ಮತಗಳು ಮಾತ್ರ ನಮಗೆ ಬಿದ್ದಿವೆ.  ಅದೇ ರೀತಿ ನಮ್ಮ ಹಿಂದೂಗಳು ಕೂಡ ಜಾಗೃತರಾಗಿ ಒಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನನಗೆ ಮತ ನೀಡಬೇಕು ಎಂದು ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದ ವಾರ್ಡ ನಂ. 29 ಮತ್ತು 30ರ ಕಾಸಗೇರಿ ಓಣಿ, ಗೌಡರ ಓಣಿ, ರಾಮನಗರ, ರಾಜಾಜಿನಗರದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಬಾರಿ ನಮ್ಮವರು ಶೇ. 58 ರಷ್ಟು ಮಾತ್ರ ಮತದಾನ ಮಾಡಿದರೆ, ಅವರು ಶೇ. 85 ರಷ್ಟು ಮತದಾನ ಮಾಡಿದ್ದರು.  ಈ ಬಾರಿ ನಾವು ಶೇ. 90 ರಷ್ಟು ಮತದಾನ ಮಾಡಿದರೆ, ಕನಿಷ್ಠ 40 ಸಾವಿರ ಮತಗಳಿಂದ ಗೆದ್ದು, ಮತ್ತೆ ಕೇಸರಿ ಗುಲಾಲ ಹಾರುವುದು ನಿಶ್ಚಿತ ಎಂದು ಹೇಳಿದು.

ಮತದಾನ ಸಮಯದಲ್ಲಿ ಎಲ್ಲಿಯೂ ಕೂಡ ದಾಂಧಲೆ ಆಗಲು ಸಾಧ್ಯವಿಲ್ಲ. ಮಿಲಿಟರಿ ನಿಯೋಜನೆ ಇರುತ್ತದೆ.  ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿದೆ.  ಎಲ್ಲರೂ ಮನೆಯಿಂದ ಹೊರ ಬಂದು ಮತ ಚಲಾಯಿಸಿ ದಾಖಲೆಯ ಶೇ. 90 ರಷ್ಟು ಮತದಾನ ಮಾಡಿದರೆ, ಅದೇ ದಿನ ಸಂಜೆ ಗುಲಾಲ ಹಾರಿಸೋಣ ಎಂದು ಅವರು ಹೇಳಿದರು.

ನಗರದಲ್ಲಿ ಗೂಂಡಾಗಿರಿ, ದಬ್ಬಾಳಿಕೆ ನಿಲ್ಲಿಸಲಾಗಿದೆ.  ಧೂಳಾಪುರ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ನಗರದ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ.  ಪಾಕಿಸ್ತಾನದಂತಾಗಿದ್ದ ನೆಹರು ಮಾರುಕಟ್ಟೆ ಬಳಿ ಸಂಪೂರ್ಣ ಬದಲಾಯಿಸಿ, ಸುರಕ್ಷಿತ ನಗರವನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ನಮ್ಮ ಜಿಲ್ಲೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿಯನ್ನು ಹೊರ ದೇಶದಲ್ಲಿ ಇಲ್ಲಿಯೇ ಕುಳಿತು ಮಾರಾಟ ಮಾಡುವ ವ್ಯವಸ್ಥೆ ವೈನ್ ಪಾರ್ಕದಿಂದ ಆಗುತ್ತದೆ.  ಈಗಾಗಲೇ ರೂ. 140 ಕೋ. ಅನುದಾನ ಮಂಜೂರಾಗಿದೆ.  ಅಲ್ಲದೇ, ಜವಳಿ ಪಾರ್ಕ, ಜಿಟಿಟಿಸಿ ಕಾಲೇಜು ಸಹ ಮಂಜೂರು ಮಾಡಿಸಿದ್ದೇನೆ.  ನಾನು ವಿಧಾನಸೌಧದಲ್ಲಿ ಧ್ವನಿ ಎತ್ತಿದ ಕಾರಣ ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ರೂ. 250 ಕೋ. ಬಂದಿದೆ ಎಂದು ಅವರು ತಿಳಿಸಿದರು.

ನಮ್ಮ ಹೋರಾಟದ ಫಲವಾಗಿ ಸಮಸ್ತ ಲಿಂಗಾಯತ ಸಮುದಾಯಕ್ಕೆ ಹೆಚ್ಚುವರಿ ಶೇ. 2 ರಷ್ಟು ಮೀಸಲಾತಿ ದೊರಕಿತು.  ಇದರಿಂದ ಉದ್ಯೋಗ, ಶಿಕ್ಷಣದಲ್ಲಿ ಅನುಕೂಲವಾಗಲಿದೆ.  2ಎ ದಲ್ಲಿರುವ ಸಮಾಜಕ್ಕೆ ಅನ್ಯಾಯವಾಗದಂತೆ, ಎರಡು ಕಡೆ ಮೀಸಲಾತಿ ಪಡೆಯುವುದು ರದ್ದುಪಡಿಸಿ, 2ಡಿ ವರ್ಗ ಸೃಜಿಸಿ ಲಿಂಗಾಯತರಿಗೆ, ಒಕ್ಕಲಿಗರಿಗೆ ತಲಾ ಶೇ. 2 ಮೀಸಲಾತಿ ನೀಡಲಾಗಿದೆ.  ಅದನ್ನು ತೆಗೆಯುತ್ತೇವೆ ಎನ್ನುವ ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ನಾನಾ ಕಾಲೊನಿ ಮತ್ತು ಬಡಾವಣೆಗಳ ಹಿರಿಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌