ಅಳುವುದರಿಂದ ಮತಗಳು ಬರುತ್ತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು- ವಿಪ ಮಾಜಿ ಸದಸ್ಯ ಜಿ. ಕೆ. ಪಾಟೀಲ

ವಿಜಯಪುರ: ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಜಿ. ಕೆ. ಪಾಟೀಲ ಹೇಳಿದ್ದಾರೆ.

ತಿಕೋಟಾ ಪಟ್ಟಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಈ ಸಂದರ್ಭಲ್ಲಿ ಮತಯಾಚಿಸುವ ಕೆಲವರು ಅಳುತ್ತಾರೆ.  ಅಡ್ಡ ಬೀಳುತ್ತಾರೆ.  ಅಂಗಲಾಚುತ್ತಾರೆ.  ಈ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ.  ಆದರೆ, ಇದು ಅರ್ಹತೆಯಾಗಬಾರದು. ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಸಿಎಂ ಆಗುತ್ತಿದ್ದರು ಎಂದು ಅವರು ಹೇಳಿದರು.

ಮತದ ಮಹತ್ವವನ್ನು ಪ್ರತಿಯೊಬ್ಬ ಮತದಾರರು ಅರಿತುಕೊಳ್ಳಬೇಕು. ಸದಾ ತಮ್ಮ ಶ್ರೇಯಸ್ಸು ಬಯಸುವ ಹಿತಚಿಂತಕರ ಪರ ಮತ ಚಲಾವಣೆಯಾಗಬೇಕು.  ಮತದಾರರು ತಮ್ಮ ಮತ ಅಪಮೌಲ್ಯ ಆಗಬಾರದು ಎಂಬ ಪ್ರಜ್ಞೆ ಇಟ್ಟುಕೊಂಡು ಅರ್ಹರಿಗೆ ಮತ ಹಾಕಬೇಕು.  ಒಬ್ಬ ಜನಪ್ರತಿನಿಧಿ ಮತ್ತು ಜನನಾಯಕನಿಗೆ ಇರಬೇಕಾದ ಎಲ್ಲ ಅರ್ಹತೆಗಳು ಎಂ. ಬಿ. ಪಾಟೀಲರಿಗೆ ಇವೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಜಿ. ಕೆ. ಪಾಟೀಲ ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ತಿಕೋಟಾ ನಮ್ಮೂರು. ಚುನಾವಣೆ ಅಭಿವೃದ್ಧಿ ಪರ್ವದ ಚುನಾವಣೆಯಾಗಬೇಕು. ಈ ಪಟ್ಟಣದಲ್ಲಿ ಎಲ್ಲ ಕೆಲಸಗಳಾಗಿವೆ.  ಮಿನಿ ವಿಧಾನಸೌಧಗಳಾಗಿವೆ.  ಸಬ್ ರಜಿಸ್ಚ್ರಾರ್ ಕಚೇರಿಯಾಗಿದೆ ಎಂದು ಹೇಳಿದರು.

ವಿರೋಧಿಗಳ ಬಳಿ ಹೇಳಿಕೊಳ್ಳಲು ಯಾವುದೇ ವಿಷಯದ ಬಂಡವಾಳವಿಲ್ಲ. ಹೀಗಾಗಿ ಅನುಕಂಪ ಗಿಟ್ಟಿಸಲು ಮೊಸಳೆ ಕಣ್ಣೀರು, ಅಡ್ಡಲಾಗಿ ಬೀಳುವುದು ಮಾಡುತ್ತಿದ್ದಾರೆ. ಅಂಥವರ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೀಲಿ ಹಾಕಿವೆ. 40% ಲಂಚ ಈ ಸರಕಾರದ ಬಹುದೊಡ್ಡ ಸಾಧನೆ. ಬೆಲೆಯೇರಿಕೆ, ಉದ್ಯಮಿಗಳ ಸಾಲಮನ್ನಾ ಕೇಂದ್ರ ಸರಕಾರದ ದೊಡ್ಡ ಸಾಧನೆಯಾಗಿದೆ.  ಡಬಲ್ ಎಂಜೀನ್ ಸರಕಾರದ ಎರಡೂ ಎಂಜಿನ್ ಫೇಲ್ ಆಗಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಜಲಸಂಪನ್ಮೂಲ ಸಚಿವನಾಗಿ ಯಾವುದೇ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಒಳಪಡದ ತಿಕೋಟಾ ಹೋಬಳಿಗೆ ಛಲದಿಂದ ನೀರು ತಂದು ಕೊಟ್ಟಿದ್ದೇನೆ. ರೂ. 3600 ಕೋ. ಖರ್ಚು ಮಾಡಿ 6.80 ನೀರಾವರಿ ಯೋಜನೆ ಜಾರಿ ಮಾಡಿದ್ದೇನೆ.  ಈಗ ನೀರು ಬಂದಿದೆ.  ಈ ಭಾಗದಲ್ಲಿ ಸಮೃದ್ಧಿಯಾಗಿದೆ.  ಆದರೆ, ಭಾಗದಲ್ಲಿ ಅನುμÁ್ಠನವಾಗಬೇಕಿದ್ದ ಎಫ್.ಐ.ಸಿ. ಕಾಮಗಾರಿಯನ್ನು ವಿರೋಧಿಗಳು ಪ್ಯಾಕೇಜ್ ಮೂಲಕ ಲಂಚ ಪಡೆಯುವ ಸಲುವಾಗಿ ಬಂದ್ ಇರಿಸಿದ್ದಾರೆ.  ಜನ ಮತ್ತು ರೈತ ವಿರೋಧಿಯಾಗಿರುವ ಇಂಥವರ ಪರ ಇರುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು.  ಅಂಥ ಮತದಾರರ ಮನವೊಲಿಸಿ ಕಾಂಗ್ರೆಸ್ಸಿಗೆ ಮತ ಹಾಕಿಸಬೇಕು ಎಂದು ಹೇಳಿದರು.

ತಿಕೋಟಾ ಪಟ್ಟಣದಲ್ಲಿ ಪ್ರತ್ಯೇಕವಾಗಿ ನಡೆದ ಸಭೆಗಳಲ್ಲಿ ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ತಮ್ಮಣ್ಣ ಹಂಗರಗಿ, ಬಸಯ್ಯ ವಿಭೂತಿ, ರಾಮು ದೇಸಾಯಿ, ಎಚ್. ಎಂ. ಬಾಗವಾನ, ಜಗದೀಶ ಪಾಟೀಲ, ವಿಜುಗೌಡ ಪಾಟೀಲ, ಮಲ್ಕು ಹಂಜಗಿ, ಗಂಗಪ್ಪ ಕರಜಗಿ, ಭೀಮು ನಾಟಿಕಾರ, ಹಾಜಿಸಾಬ ಕೊಟ್ಟಲಗಿ, ಲೇಪು ಕೊಣ್ಣೂರ, ತಿಪ್ಪಣ್ಣ ಕೊಣ್ಣೂರ, ಮಾಳು ಗುಗದಡ್ಡಿ, ಪ್ರಕಾಶ ಸೊನ್ನದ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌