80 ವರ್ಷ ಮೇಲ್ಪಟ್ಟ ಮತದಾರರ ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭೆ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 38727 ಮತದಾರರು, 20273 ವಿಶೇಷಚೇತನ ಮತದಾರರಿಗೆ ಏ. 29 ರಿಂದ ಮೇ 1ರ ವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಈ ಪೈಕಿ 80 ವರ್ಷ ಮೇಲ್ಪಟ್ಟ 3574 ವಿಶೇಷ ಚೇತನ 1078 ಮತದಾರರು ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ.

ವಿಧಾನಸಭಾವಾರು ವಿವರದಂತೆ 80 ವರ್ಷ ಮೇಲ್ಪಟ್ಟ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 280, ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ 441, ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 372, ಬಬಲೇಶ್ವರ ಮತಕ್ಷೇತ್ರದಲ್ಲಿ 502, ವಿಜಯಪುರ ಮತಕ್ಷೇತ್ರದಲ್ಲಿ 295, ನಾಗಠಾಣ ಮತಕ್ಷೇತ್ರದಲ್ಲಿ 293, ಇಂಡಿ ಮತಕ್ಷೇತ್ರದಲ್ಲಿ 656 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 735 ಮತದಾರರು ಸೇರಿದಂತೆ 80 ವರ್ಷ ಮೇಲ್ಪಟ್ಟ ಒಟ್ಟು 3574 ಮತದಾರರು ಮನೆಯಿಂದ ಮತ ಚಲಾಯಿಸಲಿದ್ದಾರೆ.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ 80 ವರ್ಷ ಮೇಲ್ಪಟ್ಟ, ವಿಶೇಷ ಚೇತನ ಮತದಾರರ ಅಂಚೆ ಮತದಾನ ಪ್ರಕ್ರಿಯೆ ಪರಿಶೀಲಿಸಿದರು

ಅದರಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 142, ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ 95, ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 141, ಬಬಲೇಶ್ವರ ಮತಕ್ಷೇತ್ರದಲ್ಲಿ 123, ವಿಜಯಪುರ ಮತಕ್ಷೇತ್ರದಲ್ಲಿ 30, ನಾಗಠಾಣ ಮತಕ್ಷೇತ್ರದಲ್ಲಿ 45, ಇಂಡಿ ಮತಕ್ಷೇತ್ರದಲ್ಲಿ 371 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 131 ಮತದಾರರು ಸೇರಿದಂತೆ ಒಟ್ಟು 1078 ವಿಶೇಷ ಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಒಪ್ಪಿಗೆ ಸೂಚಿಸಿದ್ದು, ಈ ಮತದಾರರಿಗೆ ಮತದಾನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ 80ಡಿ ಅಡಿ ಅರ್ಜಿ ನೀಡಿರುವ ಜಿಲ್ಲೆಯ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಜಾಪೂರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕರ ಮನೆಗೆ ಶನಿವಾರ  ಭೇಟಿ ನೀಡಿ, 80 ವರ್ಷ ಮೇಲ್ಪಟ್ಟ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದ ಅವರು, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಅನುಮಾನ ಬಂದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿ, ಮೈಕ್ರೋ ಆಬ್ಜರ್ವರ್, ಮತಗಟ್ಟೆ ಅಧಿಕಾರಿ, ಪೋಲಿಸ್ ಸಿಬ್ಬಂದಿ, ವಿಡಿಯೋಗ್ರಾಫರ್, ಬಿಎಲ್‌ಎಗಳು ಉಪಸ್ಥಿತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿವೆ.

ಸಾಮಾನ್ಯ ವೀಕ್ಷಕರ ಭೇಟಿ

ಬಿಜಾಪುರ ನಗರ ವಿಧಾನಸಭೆ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಉದಿತ ಪ್ರಕಾಶ ರಾಯ ಅವರು 80 ವರ್ಷ ಮೇಲ್ಪಟ್ಟ ಮತದಾರರ ಮನೆಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿ, ಸಿಬ್ಬಂದಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಮತ್ತು ದ ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌