ವಿಶ್ವ ಹಾಲು ದಿನಾಚರಣೆ: ಹೈನೋದ್ಯಮ ರೈತರ ಪಾಲಿಗೆ ವರದಾನ- ಡಾ. ಸಂಗಣ್ಣ ಎಲ್. ಲಕ್ಕಣ್ಣವರ

ವಿಜಯಪುರ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು,  ರೈತರ ಪಾಲಿಗೆ ಹೈನೋದ್ಯಮ ವರದಾನವಾಗಿದೆ. ರೈತರ ಹಾಲಿಗೆ ಯೋಗ್ಯ ದರದ ಮಾರುಕಟ್ಟೆಯನ್ನು ವರ್ಷವಿಡಿ ಒದಗಿಸಿ, ಜೀವನೋಪಾಯ ಕಲ್ಪಿಸುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಣ್ಣ ಎಲ್. ಲಕ್ಕಣ್ಣವರ ಹೇಳಿದರು.

ವಿಜಯಪುರು ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಆಯೋಜಿಸಿದ ವಿಶ್ವ ಹಾಲು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಹಾಲು ಒಂದು ಸಂಪೂರ್ಣ ಆಹಾರ, ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಬೇಕಾಗಿರುವಂತಹ ಬಹುತೇಕ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ.  ಪ್ರತಿದಿನ ಒಂದು ಲೋಟ ಹಾಲು ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

 

ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಮತ್ತು ಒಕ್ಕೂಟದ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಭೀ. ಪಾಟೀಲ ನಿಡೋಣಿ ಮಾತನಾಡಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಯೋಗ್ಯ ದರದಲ್ಲಿ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವುದಲ್ಲದೇ, ಉಭಯ ಜಿಲ್ಲೆಯಲ್ಲಿ ಸಹಕಾರಿ ಹೈನು ಉದ್ಯಮ ಪ್ರಗತಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕರ್ನಾಟಕ ಹಾಲು ಮಹಾಂಡಳ ಮತ್ತು ಹಾಲು ಒಕ್ಕೂಟವು ಒದಗಿಸುತ್ತಿದೆ.  ಈ ಸೌಲಭ್ಯ ಬಳಸಿಕೊಂಡು ಹೆಚ್ಚು ಹೆಚ್ಚು ರೈತರು ಸಹಕಾರಿ ಹೈನು ಉದ್ಯಮದಲ್ಲಿ ತೊಡಗಬೇಕೆಂದು ಕರೆ ನೀಡಿದರು.

 

ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ನಂದಿನಿ ಹರ್ಬಲ್ ಸುವಾಸಿತ ಹಾಲನ್ನು ವಿತರಿಸಲಾಯಿತು.  ಗ್ರಾಹಕರ ಜಾಗೃತಿಗಾಗಿ ಗಾಂಧಿ ಚೌಕದಿಂದ ಜಿಲ್ಲಾ ಆಸ್ಪತ್ರೆಯವರೆಗೆ ಜಾಥಾ ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಡಾ. ಸಂಜೀವ ದೀಕ್ಷಿತ ಮಾತನಾಡಿದರು.  ಈ ಸಂದರ್ಭದಲ್ಲಿ ಡಾ. ಎ. ಜಿ. ಬಿರಾದಾರ ಆರ್. ಎಂ. ಓ ಡಾ. ಮಹೇಶ ಮೋರೆ ಮತ್ತು ಡಾ. ಗುಂಡಪ್ಪ ಎಂ. ಎಸ್. ಕೌಲಾಪೂರ, ಕೆ. ಆರ್. ಪಲ್ಲೇದ, ಕೆ. ವಿ. ದೇಸಾಯಿ, ಡಾ. ಸಿದ್ದಲಿಂಗಪ್ಪ ಜಾಡರ, ಎಸ್. ಬಿ. ಅಥಣಿ, ಎಸ್. ಕೆ. ಹಡಪದ ಮುಂತಾದವರು ಉಪಸ್ಥಿತರಿದ್ದರು.

 

ಹೇಮಂತ ಬಂಕಾಪೂರ ಸ್ವಾಗತಿಸಿದರು. ವಿಕ್ರಮ ಮಾಲಿಬಾನ್ ನಿರೂಪಿಸಿದರು ತುಕಾರಾಮ ವಂದಿಸಿದರು.

Leave a Reply

ಹೊಸ ಪೋಸ್ಟ್‌