ತಾಯಿಗಿಂತಲೂ ಮಿಗಿಲಾದ ದೇವರಿಲ್ಲ-ಎಲ್ಲ ಪದಗಳ ಮೂರ್ತರೂಪವೇ ತಾಯಿ- ಎಂ. ಬಿ. ಪಾಟೀಲ ಭಾವನಾತ್ಮಕ ಟ್ವೀಟ್

ವಿಜಯಪುರ: ಮೂರನೇ ಬಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ತಾಯಿ ಕಮಲಾಬಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ತಾಯಿಗಿಂತಲೂ ಮಿಗಿಲಾದ ದೇವರಿಲ್ಲ.  ಮಮತೆ, ಪ್ರೀತಿ-ವಾತ್ಸಲ್ಯ ತ್ಯಾಗ, ಅನುಕಂಪ ಹೀಗೆ ಎಲ್ಲ ಪದಗಳ ಮೂರ್ತರೂಪವೇ ತಾಯಿ.  ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು-ಯಶಸ್ಸು ಎಲ್ಲಕ್ಕೂ ನನ್ನ ತಾಯಿಯೇ ಕಾರಣ.  ತಾಯಿಯ ಆಶೀರ್ವಾದ ಪಡೆದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  ಈ ಭಾವನಾತ್ಮಕ ಟ್ವೀಟ್ ಎಂ. ಬಿ. ಪಾಟೀಲರು ತಮ್ಮ ತಾಯಿಯ ಕುರಿತು ಹೊಂದಿರುವ ಭಾವನಾತ್ಮಕ ಸಂಬಂಧಕ್ಕೆ ಇತರರಿಗೆ ಸ್ಪೂರ್ತಿ ನೀಡುವಂತಿದೆ.

ರಾಜಕೀಯ ಮತ್ತು ಸಾಮಾಜಿಕವಾಗಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಎಂ. ಬಿ. ಪಾಟೀಲರು ತಮ್ಮ ಈ ಸಾಧನೆಗಳಿಗೆ ಕಾರಣರಾದವರನ್ನು ಸದಾ ಸ್ಮರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ತಾವು ಆಯ್ಕೆಯಾಗಲು ಕಾರಣರಾದ ಮತದಾರರು, ಜಲಸಂಪನ್ಮೂಲ ಸಚಿವರಾಗಿ ಜನಮೆಚ್ಚುವ ಕೆಲಸ ಮಾಡಲು ಮಾರ್ಗದರ್ಶನ ನೀಡಿ ಆಶೀರ್ವದಿಸಿದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಉತ್ತಮ ಸಂಸ್ಕಾರ ಪಡೆಯಲು ಹಾಗೂ ರಾಜಕೀಯವಾಗಿ ಸಾಧನೆ ಮಾಡಲು ಸ್ಪೂರ್ತಿಯಾಗಿರುವ ತಮ್ಮ ತಂದೆ ಬಿ. ಎಂ. ಪಾಟೀಲ ಅವರ ಬಗ್ಗೆ ಎಂ. ಬಿ. ಪಾಟೀಲರು ಸಮಯ ಸಿಕ್ಕಾಗಲೆಲ್ಲ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ.

ಈಗಲೂ ಅಷ್ಟೇ, ಸಚಿವರಾದ ನಂತರ ವಿಜಯಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು, ನಾನಾ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.  ಅಲ್ಲದೇ, ತಮ್ಮ ತಾಯಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ.  ಈ ಸಂದರ್ಭದಲ್ಲಿ ಅವರ ಸಹೋದರ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಕುಟುಂಬ ಸದಸ್ಯರು ಕೂಡ ಉಪಸ್ಥಿತರಿದ್ದರು.

ಮಾಜಿ ಸಚಿವ ದಿ. ಬಿ. ಎಂ. ಪಾಟೀಲರ ಪತ್ನಿಯಾಗಿದ್ದರೂ ಮೊದಲಿನಿಂದಲೂ ಕಮಲಾಬಾಯಿ ಪಾಟೀಲ ಅವರು ಜನಸಾಮಾನ್ಯರೊಂದಿಗೆ ಸರಳವಾಗಿ ಬೆರೆಯುತ್ತ ಮನೆಗೆ ಬಂದವರನ್ನು ಅತಿಥಿಗಳೆಂದು ಪ್ರೀತಿ ಮತ್ತು ಆದರದಿಂದ ಅತಿಥಿ ಸತ್ಕಾರ ಮಾಡುತ್ತ ಗೌರವ ತೋರಿಸುತ್ತಿದ್ದಾರೆ.  ಈಗಲೂ ಕೂಡ ಅದೇ ರೀತಿ ಸರಳ ಜೀವನ ನಡೆಸುವ ಮೂಲಕ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಈ ಮಧ್ಯೆ, ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ವಿಜಯಪುರಕ್ಕೆ ಬಂದಾಗ ಎಂ. ಬಿ. ಪಾಟೀಲ ಅವರು ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ.  ತಾವು ಮಾಡುತ್ತಿರುವ ಜನಪರ ಕೆಲಸ ಕಾರ್ಯಗಳು, ಜನರ ಕಲ್ಯಾಣಕ್ಕಾಗಿ ಹೊಂದಿರುವ ಕನಸುಗಳ ಕುರಿತು ಮಾಹಿತಿ ನೀಡಿ ತಾಯಿಯಿಂದ ಸಲಹೆಯನ್ನು ಪಡೆಯುವುದು ವಾಡಿಕೆಯಾಗಿದೆ.  ಹೀಗಾಗಿಯೇ ತಮ್ಮ ಕೆಲಸ ಕಾರ್ಯಗಳ ಕುರಿತು ಯಾರೇ ಕೇಳಿದರೂ ತಮಗೆ ಉತ್ತಮ ಸಂಸ್ಕಾರ ನೀಡಿ ಆಶೀರ್ವದಿಸುತ್ತಿರುವ ತಾಯಿ ಕಮಲಾಬಾಯಿ, ತಮ್ಮನ್ನು ಏಳಿಗೆಗೆ ಕಾರಣರಾದ ತಂದೆ ದಿ. ಬಿ. ಎಂ. ಪಾಟೀಲ, ಜನಸೇವೆಗೆ ಸ್ಪೂರ್ತಿಯಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಸಚಿವರು ಸ್ಮರಿಸುತ್ತಿರುವುದು ಗಮನಾರ್ಹವಾಗಿದೆ.  ಅಷ್ಟೇ ಅಲ್ಲ, ವಿಜಯಪುರದಿಂದ ಹೊರಗಿದ್ದರೂ ಪ್ರತಿನಿತ್ಯ ದೂರವಾಣಿ ಮೂಲಕ ತಾಯಿಯ ಜೊತೆ ಸಂಪರ್ಕದಲ್ಲಿರುತ್ತಾರೆ.

ಈಗ ವಿಜಯಪುರಕ್ಕೆ ಬಂದ ನಂತರ ಸಚಿವರು ತಾಯಿಯ ದರ್ಶನದ ಬಳಿಕ ಬಿ. ಎಲ್. ಡಿ. ಇ ಸಂಸ್ಥೆಯ ಆವರಣದಲ್ಲಿರುವ ದಿ. ಬಿ. ಎಂ. ಪಾಟೀಲ ಅವರ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದರು.  ಅಲ್ಲದೇ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಹಾಗೂ ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೆ ತೆರಳಿ ನಮಸ್ಕರಿಸಿದರು.  ನಂತರ ಜ್ಞಾನಯೋಗಾಶ್ರಮಕ್ಕೆ ತೆರಳಿ ನಮಸ್ಕರಿಸಿ ಆಶೀರ್ವಾದ ಪಡೆದರು.

Leave a Reply

ಹೊಸ ಪೋಸ್ಟ್‌