ಕೊಲ್ಹಾರ ನೀರು ಶುದ್ಧೀಕರಣ ಘಟಕ ಸೇರಿ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣ ಮತ್ತು ಕೊಲ್ಹಾರ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮನಗೂಳಿ ಸೇರಿದಂತೆ 35 ಗ್ರಾಮಗಳ ಬಹು ಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ತೆಲಗಿ ಗ್ರಾಮದ ಹತ್ತಿರ ಇರುವ ನೀರು ಶುದ್ಧೀಕರಣ ಘಟಕದ ವೀಕ್ಷಣೆ ಮಾಡಿದ ಅವರು, ಘಟಕದಲ್ಲಿ ನೀರು ಶುದ್ಧಿಕರಣದ ಬಗ್ಗೆ ಮಾಹಿತಿ ಪಡೆದರು.  ಘಟಕ ನಿರ್ವಹಿಸುವ ಅಧಿಕಾರಿಗಳು ಮಾಹಿತಿ ನೀಡಿದರು.  ಇದೇ ಯೋಜನೆಗೆ ಸಂಬಂಧಪಟ್ಟ ಬಳೂತಿ ಗ್ರಾಮದ ಬಳಿ ಇರುವ ಜಾಕವೆಲ್ ಗೆ ಕೃಷ್ಣಾ ನದಿ ನೀರಿನ ಮಟ್ಟ ಕಡಿಮೆ ಆಗಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗುವುದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದುರ.

ಕೊಲ್ಹಾರ ತಾಲೂಕಿನ ಕೊಲ್ಹಾರ ಮತ್ತು ಇತರೆ ಎಂಟು ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು.  ಈ ಘಟಕದಲ್ಲಿ ನಿರ್ವಹಿಸುತ್ತಿರುವ ನೀರು ತಪಾಸಣಾ ವಹಿ, ಹಾಜರಾತಿ ಪುಸ್ತಕ ಮತ್ತು ವೀಕ್ಷಕರ ವಹಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅವರು ಸೂಚನೆ ನೀಡಿದರು.

ರು ಶುದ್ಧೀಕರಣ ಘಟಕದಲ್ಲಿ ನಿಯಮಾನುಸಾರ ಶುದ್ಧಗೊಳಿಸಿ ತದನಂತರ ಮತ್ತೆ ನೀರು ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು.  ಗ್ರಾಮದ ಜನರಿಗೆ ಶುದ್ಧ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಸರಬರಾಜು ಮಾಡುವಂತೆಯೂ ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಹೆಸ್ಕಾಂ ಅಧಿಕಾರಿಗಳಿಗೆ ಸಮರ್ಪಕವಾಗಿ ಹಾಗೂ ನಿರಂತರವಾಗಿ ನಿಗದಿತ ವಿದ್ಯುತ್ತನ್ನು ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗ ಸೂಚನೆ ನೀಡಿದರು.

ದೇವರ ಗೆಣ್ಣೂರ ಗ್ರಾಮದ ಹತ್ತಿರ ಪ್ರಗತಿಯಲ್ಲಿರುವ ತಿಕೋಟಾ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಜಾಕವೆಲ್ ನ ಪುಟ್ ಬ್ರಿಜ್ ಕಾಮಗಾರಿಯನ್ನು ವೀಕ್ಷಣೆ ಮಾಡಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಅವರು ಸೂಚನೆ ನೀಡಿದರು.

ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು

ಕುಡಿಯುವ ನೀರು ಶೇಖರಣಾ ಘಟಕದಲ್ಲಿ ಮತ್ತು ಘಟಕದ ಸುತ್ತ-ಮುತ್ತ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನೀರನ್ನೂ ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಸರಬರಾಜು ಮಾಡಬೇಕು ಎಂದು ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಕೊಲ್ಹಾರ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಎಫ್. ಎಚ್. ಪಠಾಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್. ಬಿ. ಪಾಟೀಲ, ಕೊಲ್ಹಾರ ತಾ. ಪಂ. ಸಹಾಯಕ ನಿರ್ದೇಶಕ (ನರೇಗಾ) ವಿ. ಎಸ್. ಹಿರೇಮಠ ಹಾಗೂ ಬಸವನ ಬಾಗೇವಾಡಿಯ ಸಹಾಯಕ ಎಂಜಿನಿಯರ ವಿ. ಬಿ. ಗುಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌