ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಸರಕಾರದ ನಿರ್ಧಾರಕ್ಕೆ ವಿರೋಧ- ವಿ ಎಚ್ ಪಿ ಕಾರ್ಯಕರ್ತರಿಂದ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ

ವಿಜಯಪುರ: ರಾಜ್ಯ ಸರಕಾರ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ನಿರ್ಧರಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.  ಅಲ್ಲದೇ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಸಾರ ಪ್ರಮುಖ ಸುನೀಲ ಭೈರವಾಡಗಿ, ಭಾರತವು ಹಿಂದೂ ರಾಷ್ಟ್ರವಾಗಿದ್ದು ಇಲ್ಲಿ ಹಿಂದುಗಳೊಡನೆ ಅನ್ಯ ಧರ್ಮೀಯರೂ ಸಹ ಸಹಬಾಳ್ವೆಯನ್ನು ಮಾಡಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ.  ಅದರಂತೆ ಕರ್ನಾಟಕದಲ್ಲಿಯೂ ಹಿಂದೂಗಳೊಡನೆ, ಅನ್ಯ ಧರ್ಮೀಯರೂ ಸಹ ತಮ್ಮ ಧರ್ಮ, ಮತಾಚರಣೆ ಮಾಡಲು ಅವಕಾಶವಿದೆ.  ಇದನ್ನು ನಾವು ಒಪ್ಪುತ್ತೇವೆ ಮತ್ತು ಪ್ರಶ್ನಿಸುವುದಿಲ್ಲ.  ಆದರೆ ಹಿಂದೂಗಳಿಗೆ ಆಮಿಷ ತೋರಿಸಿ ಅಥವಾ ಹೆದರಿಸಿ ಬಲವಂತವಾಗಿ ಮತಾಂತರಿಸುವುದನ್ನು ಅಥವಾ ಮರುಳು ಮಾಡಿ ಮತಾಂತರ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ ಮುಖಂಡರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು

ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾಗಿದ್ದು, ಕರ್ನಾಟಕ ದೇಶದ ಒಂದು ಭಾಗವಾಗಿದೆ.  ಇಲ್ಲಿನ ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ.  ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳೂ ಸಹ ಹೆಚ್ಚಿಗೆ ಮತ ಹಾಕಿದ್ದು, ಅವರ ಮತಗಳಿಂದಲೇ ಕಾಂಗ್ರೆಸ್, ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಅಲ್ಪಸಂಖ್ಯಾತರಿಂದ ಅಲ್ಲ.  ಇದು ಕಾಂಗ್ರೆಸ್ ತನಗೆ ಮತ ನೀಡಿದ ಸಮಸ್ತ ಹಿಂದೂ ಸಮಾಜಕ್ಕೆ ದ್ರೋಹ ಬಗೆದಂತಾಗಿದೆ.  ಕರ್ನಾಟಕದ ಹಿಂದುಗಳು ಇದನ್ನು ಖಂಡಿಸುವುದರೊಂದಿಗೆ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಹ ಕಾರ್ಯದರ್ಶಿ ಸುನೀಲ ಜಮಖಂಡಿ, ಶೇಖರಗೌಡ ಹರನಾಳ ಮಾತನಾಡಿ, ಈ ಹಿಂದಿನ ಸರಕಾರ ಶಾಲಾ ಪಠ್ಯದಲ್ಲಿ ರಾಷ್ಟ್ರ ಪುರುಷರ ಪರಿಚಯವನ್ನು ಸೇರಿಸಿತ್ತು.  ಇದನ್ನೂ ಸಹ ಸಂಕುಚಿತ ಭಾವನೆಯಿಂದ ಮತ್ತು ಅಲ್ಪ ಸಂಖ್ಯಾತರನ್ನು ತುಷ್ಟಿಕರಿಸುವ ಸಲುವಾಗಿ ಸಾವರ್ಕರ ಅವರಂಥ ಅಪ್ರತಿಮ ದೇಶಭಕ್ತರ ಪರಿಚಯದ ಪಾಠಗಳನ್ನು ತೆಗೆಯಲು ನಿರ್ಧರಿಸಿದೆ.  ಇದನ್ನೂ ಕೂಡ ನಾವು ಖಂಡಿಸುತ್ತೇವೆ.  ಈ ರೀತಿ ಸಮಾಜದಲ್ಲಿ ಶಾಂತಿಯನ್ನು ಕದಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನೀಡಬೇಕು ಎಂದು ಸರಕಾರವನ್ನು ವಿನಂತಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ ಮುಖಂಡರಾದ ಸುರೇಶ ಚವ್ಹಾಣ, ಪ್ರಕಾಶ ಬಿರಾದಾರ, ಸೋಮ ಹುಣಸಗಿ, ಸುರೇಶ ಕುಂಬಾರ, ಸಿದ್ದುರೂಡಿ ಬೋರಣ್ಣ, ಈರಯ್ಯ ಹಿರೇಮಠ, ಹಣಮಗೌಡ ಹೆಬ್ಬಾಳ, ಪ್ರಕಾಶ ಬಗಲಿ, ಕಲ್ಮೇಶ ಮೇಟಿ, ಶ್ರೀಧರ ಭಜಂತ್ರಿ, ನಿಖಿಲ ಬಿರಾದಾರ, ಶಿವಯೋಗೆಪ್ಪ ರಾಂಪುರ, ಶರಣು ಜೋಗೂರು, ಶವಿನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌