ಬಸವನಾಡಿಗೆ ಬಂದ ಫ್ರಾನ್ಸ್ ವಿದ್ಯಾರ್ಥಿಗಳ ತಂಡ- ಸ್ಮಾರಕ ವಿಕ್ಷಣೆಗಲ್ಲ- ಮತ್ಯಾಕೆ ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರವೆಂದರೆ ಸಾಕು ರಾಜ್ಯವಷ್ಟೇ ಏಕೆ ದೇಶದ ಬಹುತೇಕರು ಬರಪೀಡಿತ ಜಿಲ್ಲೆ, ಹಿಂದುಳಿದ ಪ್ರದೇಶ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.  ಈವರೆಗೆ ಕೇವಲ ಪ್ರಾಚೀನ ಸ್ಮಾರಕಗಳ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು.  ಆದರೆ, ಈಗ ಬಸವನಾಡಿನ ಚಿತ್ರಣವೇ ಬದಲಾಗುತ್ತಿದೆ.

ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಬಸವನಾಡು ವಿಜಯಪುರಕ್ಕೆ ಬಂದಿರುವ ಫ್ರಾನ್ಸ್ ದೇಶದ ಆಡೆನ್ನಿಯಾ ಬ್ಯೂಸಿನೆಸ್ ಸ್ಕೂಲ್ 12 ವಿದ್ಯಾರ್ಥಿಗಳ‌ ತಂಡ.  ಈ ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಯ ಪರಿಸರ, ಜಲಸಂಪನ್ಮೂಲ, ಪ್ರಾಣಿ, ಪಕ್ಷಿ ಸಂಕುಲ, ಕೃಷಿ, ತೋಟಗಾರಿಕೆ, ಐತಿಹಾಸಿಕ ಕೆರೆಗಳು, ತೆರೆದ ಭಾವಿಗಳು, ಕೋಟಿ ವೃಕ್ಷ ಅಭಿಯಾನದಿಂದ ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ಫ್ರಾನ್ಸ್ ದೇಶದ ಆಡೆನ್ನಿಯಾ ಬ್ಯೂಸಿನೆಸ್ ಸ್ಕೂಲ್ ಈ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಭಾಗವಾಗಿರುವ ಸಮಾಜ ಸೇವೆ ಮತ್ತು ಅಧ್ಯಯನಕ್ಕೆ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ.

ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವ ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಪಾಟೀಲ

 

ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಕೋಟಿ ವೃಕ್ಷ ಅಭಿಯಾನ ಮತ್ತು ಕೆರೆಗಳಿಗೆ ನೀರು ತುಂಬುವ ಯೋಜನೆ, ಇಲ್ಲಿರುವ ಕೃಷ್ಣ ಮೃಗಗಳು, ಫ್ಲೆಮಿಂಗೊ ಪಕ್ಷಿಗಳು, ಆಲಮಟ್ಟಿ ಹಿನ್ನೀರು ಮತ್ತು ಭೂತನಾಳ ಕೆರೆಯಗೆ ಸಂತಾನೋತ್ಪತ್ತಿಗೆ ಆಗಮಿಸುವ ವಿದೇಶಿ ಪಕ್ಷಗಳ ಜೀವನ ಶೈಲಿ ಕುರಿತೂ ಈ ತಂಡದ ವಿದ್ಯಾರ್ಥಿಗಳು ಅದ್ಯಯನ ಮಾಡಲಿದೆ.

ಎಸ್.ಪಿ.ಪಿ.ಎ ಸಹಯೋಗದಲ್ಲಿ ನಡೆಯುತ್ತಿರುವ ಅಧ್ಯಯನ

ಎಸ್.ಪಿ.ಪಿ.ಎ ಅಂದರೆ ಸೊಸಾಯಿಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್ ಈ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಿದ್ದು, ಅವರಿಗೆ ಅಗತ್ಯವಾಗಿರುವ ಮಾಹಿತಿ, ಮಾರ್ಗದರ್ಶನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ.  ಎಸ್‌ಪಿಪಿಎ ಸಂಸ್ಥಾಪಕ ಧ್ರುವ ಪಾಟೀಲ ಮತ್ತು ಬಿ. ಡಿ. ಜತ್ತಿ ಫೌಂಡೇಶನ್ ನ ಧ್ರುವ ಜತ್ತಿ ಹಾಗೂ ಫ್ರಾನ್ಸ್ ದೇಶದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವ ಸೂರಜ ಈ ತಂಡದ ಜೊತೆಗಿದ್ದು ಈ ಭಾಗದ ವಿಶೇಷತೆ ಬಗ್ಗೆ ಮಾಹಿತಿ ವಿನಿಮಯ ಮಾಡುತ್ತಿದ್ದಾರೆ.

ಧ್ರುವ ಪಾಟೀಲ ಬಾಲ್ಯದಿಂದಲೇ ಪರಿಸರ ಪ್ರೇಮಿಯಾಗಿದ್ದು, ಪರಿಸರ ಮತ್ತು ವನ್ಯಜೀವಿಯ ಖ್ಯಾತ ಫೋಟೋಗ್ರಾಫರ್ ಕೂಡ ಆಗಿದ್ದಾರೆ.  ಕೊರೊನಾ ಸಂದರ್ಭದಲ್ಲಿ ಇವರು ಆರಂಭಿಸಿರುವ ಎಸ್.ಪಿ.ಪಿ.ಎ ಸಂಘಟನೆ ವಿಶ್ವಾದ್ಯಂತ 8000 ಬೀದಿ ನಾಯಿಗಳಿಗೆ ಆಹಾರ ಹಂಚುವ ಮೂಲಕ ಗಮನ ಸೆಳೆದಿತ್ತು.  ಈಗ ಫ್ರಾನ್ಸ್ ವಿದ್ಯಾರ್ಥಿಗಳ ಜೊತೆಗೂಡಿ ಮಂಗಳವಾರ ಬೀದಿ ನಾಯಿಗಳಿಗೆ 50 ಕ್ವಿಂಟಾಲ್ ಅನ್ನ ಮತ್ತು ಅದರ ಜೊತೆ ಮೊಟ್ಟೆಗಳನ್ನು ವಿತರಿಸಲು ವಿನೂತನ ಕಾರ್ಯಕ್ರಮ ಕೂಡ ನಡೆಸುತ್ತಿದ್ದಾರೆ.

ವೃದ್ಧಿಸಿದ ಅರಣ್ಯ, ಕೃಷ್ಣ ಮೃಗಗಳ ಆವಾಸ ಸ್ಥಾನ, ರಾಜಹಂಸ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ತಾಣ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧ್ರುವ ಪಾಟೀಲ ವಿಜಯಪುರ ಎಂದರೆ ಕೇವಲ ಹಿಂದುಳಿದ ಮತ್ತು ಬರಪೀಡಿತ ಜಿಲ್ಲೆ ಅಲ್ಲ.  ಇಲ್ಲಿ ವನ್ಯಜೀವಿಗಳಲ್ಲಿಯೇ ಅಪರೂಪ ಮತ್ತು ವಿಶ್ವದ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ವಾಸಿಸುತ್ತಿವೆ.  ಈ ಹಿಂದೆ ಜಿಲ್ಲೆಯಲ್ಲಿ ಕೇವಲ ಶೇ. 0.17ರಷ್ಟು ಮಾತ್ರ ಅರಣ್ಯ ಪ್ರದೇಶವಿತ್ತು.  ಆದರೆ, ಕೋಟಿ ವೃಕ್ಷ ಅಭಿಯಾನದ ನಂತರ ಅರಣ್ಯ ಪ್ರದೇಶ ಶೇ. 0.24ಕ್ಕೆ ಹೆಚ್ಚಳವಾಗಿದೆ.  ಫ್ಲೆಮಿಂಗೊ ಅಂದರೆ ರಾಜಹಂಸ ದಂಥ ಅಪರೂಪದ ಪಕ್ಷಿಗಳಿಗೂ ವಾಸಸ್ಥಾನವಾಗಿದೆ.  ಅಪರೂಪದ ಮತ್ತು ಸಾವಿರಾರು ವರ್ಷ ಬದಕುವ ಅಪರೂಪದ ಮರಗಳು ಇಲ್ಲಿವೆ.  ಈಗ ಫ್ರಾನ್ಸ್ ನಿಂದ ಬಂದಿರುವ ವಿದ್ಯಾರ್ಥಿಗಳು ವಿಶ್ವ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಈ ಅಧ್ಯನದ ಬಳಿಕ ವರದಿ ಸಿದ್ಧಪಡಿಸಿ ಸಲ್ಲಿಸಲಿದ್ದಾರೆ.  ಇದರಿಂದ ಜಾಗತಿಕವಾಗಿಯೂ ಬಸವನಾಡಿನ ಹಿರಿಮಗೆ ಮತ್ತೋಂದು ಗರಿ ಮೂಡಲಿದೆ ಎಂದು ಸಂಸತ ವ್ಯಕ್ತಪಡಿಸಿದರು.

ಮಾಹಿತಿ ವಿನಿಮಯ ಕಾರ್ಯಕ್ರಮ

ಬಿ. ಡಿ. ಜತ್ತಿ ಫೌಂಡೇಶನ ಮುಖ್ಯಸ್ಥ ಧ್ರುವ ಜತ್ತಿ ಮಾತನಾಡಿ, ಈಗಾಗಲೇ ಈ ತಂಡ ರಾಜ್ಯದ ಮೂರ್ನಾಲ್ಕು ಕಡೆ ಪ್ರವಾಸ ಕೈಗೊಂಡಿದ್ದು, ಈಗ ವಿಜಯಪುರಕ್ಕೆ ಆಗಮಿಸಿದೆ.  ಈ ಪ್ರವಾಸ ಫ್ರಾನ್ಸ್ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗವಾಗಿದ್ದರೂ, ಅವರು ಕರ್ನಾಟಕ ಮತ್ತು ಅದರಲ್ಲೂ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.  ಮುಂದಿನ ವರ್ಷ ಮತ್ತೆ ಬೇರೆ ಬೇರೆ ರಾಷ್ಟ್ರಗಳ ವಿಶ್ವವಿದ್ಯಾಲಯ ಮತ್ತು ಇತರ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿನ ವಿದ್ಯಾರ್ಥಿಗಳು ಇಲ್ಲಿನ ಪರಿಸರ, ಸಾಂಸ್ಕೃತಿಕ ಸೇರಿದಂತೆ ಇತರ ವಿಚಾರಗಳನ್ನು ತಿಳಿದುಕೊಳ್ಳಲು ಮತ್ತು ವಿದೇಶಗಳಲ್ಲಿ ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಫ್ರಾನ್ಸ್ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಪ್ರಮುಖ ಪಾತ್ರ ವಹಿಸಿರುವ ಸೂರಜ ಅವರೂ ಕೂಡ ಫ್ರಾನ್ಸ್ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮುಂದಿನ ವರ್ಷದಿಂದ ಆ ದೇಶದ ಮತ್ತು ಬೇರೆ ದೇಶಗಳ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಹ್ವಾನಿಸುವುದಾಗಿ ತಿಳಿಸಿದರು.

ಫ್ರಾನ್ಸ್ ವಿದ್ಯಾರ್ಥಿ ಲೂಯಿ ಮಾತನಾಡಿ, ಈ ಅಧ್ಯಯನ ಪ್ರವಾಸ ನಮಗೆ ಸಾಕಷ್ಟು ಜ್ಞಾನ ಒದಗಿಸಿದೆ.  ಅರಣ್ಯೀಕರಣ, ವನ್ಯಜೀವಿಗಳು, ಕೆರೆಗಳು, ತೆರೆದ ಭಾವಿಗಳು, ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೆರವಾಗಿದೆ ಎಂದು ತಿಳಿಸಿದರು.

ಭೇಟಿಯ ನೆನಪಿಗಾಗಿ ಸಸಿನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

ಫ್ರಾನ್ಸ್ ದೇಶದ ವಿದ್ಯಾರ್ಥಿಗಳಾದ ಫೆಲಿಕ್ಸ್, ಡೀಗೊ, ಮ್ಯಾರಿ, ಲೌರಾ, ಲೂಯಿಸ್, ಚಾರ್ಲಿನ್, ಮೊರ್ಗನ್, ಮಾಟಿಡ್, ಕ್ಯಾಮಿಲಿ, ಜ್ಯೂಲಿ, ಲೂಯಿ, ಮಿಶಾಂಕಾ ಅವರು ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆ ಬಳಿಯ ಟ್ರಿ ಪಾರ್ಕ್ ಗೆ ಭೇಟಿ ನೀಡಿದರು.  ಅಲ್ಲದೇ, ಅಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪರಿಸರ ಪ್ರೇಮಿ ಮುರುಗೇಶ ಪಟ್ಟಣಶೆಟ್ಟಿ ಅವರ ಸಹಯೋಗದಲ್ಲಿ ಸಸಿ ನೆಟ್ಟರು.  ವಿಹಾರ ಕೈಗೊಂಡು ಅಧ್ಯಯನ ಮಾಡಿ ಸಂತಸ ಪಟ್ಟರು.

 

ಒಟ್ಟಾರೆ, ಈವರೆಗೆ ಕೇವಲ ಗೋಳಗುಮ್ಮಟ, ಬಾರಾ ಕಮಾನ ದಂಥ ಪ್ರಾಚೀನ ಸ್ಮಾರಕಗಳ ವೀಕ್ಷಣೆಗೆ ಮಾತ್ರ ಪ್ರವಾಸಿಗರು ಬರುತ್ತಿದ್ದರು.  ಆದರೆ, ಈಗ ವಿದೇಶಗಳ ವಿದ್ಯಾರ್ಥಿಗಳು ಇಲ್ಲಿನ ಪರಿಸರ, ಅರಣ್ಯ ಮತ್ತು ಜಲಸಂಪತ್ತಿನಿಂದಾಗಿರುವ ಬದಲಾವಣೆಯ ಅಧ್ಯನಯಕ್ಕೆ ಆಗಮಿಸುತ್ತಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌