ಹದಿಹರೆಯದಲ್ಲಿ ಪೋಷಕರ ಬೆಂಬಲ ಅಗತ್ಯ: ಡಾ.ವಿಶ್ವನಾಥ ಜಾಲವಾದಿ

ವಿಜಯಪುರ: ಹದಿಹರೆಯ ಎನ್ನುವದು ಜೀವನದ ಅತ್ಯಂತ ವಿಶಿಷ್ಠವಾದ ಬೆಳವಣಿಗೆ ಹಂತವಾಗಿರುವುದರಿಂದ ಈ ಸಂದರ್ಭದಲ್ಲಿ ಪೋಷಕರ ಮತ್ತು ಕುಟುಂಬ ಸದಸ್ಯರ ಬೆಂಬಲ ಅಗತ್ಯವಿದೆ ಎಂದು ವಿಜಯಪುರ ಜಾಲವಾದಿ ಆಸ್ಪತ್ರೆಯ ಹೃದಯ ಮತ್ತು ಮಧುಮೇಹ ತಜ್ಞ ಡಾ. ವಿಶ್ವನಾಥ ಜಾಲವಾದಿ ಹೇಳಿದ್ದಾರೆ.

ಕೊಲ್ಹಾರ ತಾಲೂಕಿನ ಕೂಡಗಿ ಸರಕಾರಿ ಪಿಯು ಕಾಲೇಜಿನಲ್ಲಿ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹರೆಯದ ವಯಸ್ಸಿನಲ್ಲಿ ಪೋಷಕರು ಮತ್ತು ಕುಟುಂಬ ಸದಸ್ಯರ ಬೆಂಬಲ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ವಯಸ್ಸಿನಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಉಂಟಾಗುವ ಏರಿಳಿತಗಳ ಸಂದರ್ಭದಲ್ಲಿ ಮಾರ್ಗದರ್ಶನ ಅಗತ್ಯ.  ಬಾಲ್ಯದ ಸುರಕ್ಷಿತ ಹಿಡಿತದಿಂದ ಪ್ರೌಢಿಮೆಯ ಕಡೆಗೆ ಹೆಜ್ಜೆ ಇಡುವುದಿರಂದ ನೂತನ ಭಾವನೆ, ದೈಹಿಕ ಬದಲಾವಣೆ, ಸಂಘರ್ಷ ಭಾವನೆಗಳ ತಾಕಲಾಟದಿಂದ ಕೂಡಿರುವುದರಿಂದ ಪಾಲಕರ, ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಅವರು ಹೇಳಿದರು.

ಕೂಡಗಿ ಸರಕಾರಿ ಪಿಯು ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು

ಕಾಲೇಜಿನ ಪ್ರಾಚಾರ್ಯ ಕೆ. ಜಿ. ಲಮಾಣಿ ಮಾತನಾಡಿ, ನಮ್ಮ ದೇಹದಲ್ಲಿ ಏನಾದರೂ ಆಗುವ ಮೊದಲು ಅದು ಸೂಚನೆ ಕೊಡುತ್ತಿರುತ್ತದೆ.  ನಮ್ಮ ದೇಹದ ರಚನೆ ಆ ರೀತಿ ಇದೆ.  ಈ ಪ್ರಕೃತಿ ಕೊಟ್ಟು ಕಳುಹಿಸಿದ ಕಾರ್ಮೋಡಗಳು ಕೇವಲ ನಾಲ್ಕಾರು.  ಆದರೆ ನಾವಾಗಿಯೇ ಸೃಷ್ಟಿಮಾಡಿಕೊಂಡಿರುವುದು ಸಾವಿರಾರು.  ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉತ್ತಮ ಆರೋಗ್ಯವಿಟ್ಟುಕೊಂಡು ಗುರಿ ಮುಟ್ಟಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಸವರಾಜ ಜಾಲವಾದಿ, ಶಾಂತಾಬಾಯಿ ಕಾಮನಕೇರಿ, ಶ್ರವಣ ಹೂಗಾರ, ಐಶ್ವರ್ಯ ಇವಣಗಿ, ನೌಶಿನ ಮಕಾಂದಾರ ಮುಂತಾದವರು ಉಪಸ್ಥಿತರಿದ್ದರು.

ಜಾಲವಾದಿ ಹಾಸ್ಪಿಟಲ್‌ನ ಶಂಕರ ಸಂಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಎಸ್. ಬಿ. ದೇಸಾಯಿ ಸ್ವಾಗತಿಸಿದರು.  ವಿ. ಜಿ. ಕಿವುಡಜಾಡರ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌