ನನ್ನ ವಿರುದ್ಧ ಬೇನಾಮಿ ಮೊಬೈಲ್ ನಂಬರ ಬಳಸಿ ಅಪಪ್ರಚಾರ- ಇದಾವುದೂ ಪರಿಣಾಮ ಬೀರಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಕೆಲವು ದುಷ್ಠರು ನನ್ನ ವಿರುದ್ಧ ಅನಾಮಿಕ ಮೊಬೈಲ್ ನಂಬರ್ ಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧ ದೂರು ನೀಡಲು ಕ್ರಮ ಕೈಗೊಂಡಿರುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ಮೊಬೈಲ್ ನಂಬರುಗಳಿಂದ ಜಿಲ್ಲೆಯಲ್ಲಿ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಕರೆ ಮಾಡುತ್ತಿದ್ದಾರೆ.  ಅಲ್ಲದೇ, ನನ್ನ ಬಗ್ಗೆ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ನೇರವಾಗಿ ನನ್ನನ್ನು ಎದುರಿಸಲು ಹಿಂಜರಿಯುತ್ತಿರುವ ದುರುಳರು ನಡೆಸುತ್ತಿರುವ ಈ ತಂತ್ರಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಈ ರೀತಿ ಮೊಬೈಲ್ ಕರೆ ಬಂದಿವೆ ಎಂದು ಜಿಲ್ಲೆಯ ನಾನಾ ಭಾಗಗಳಿಂದ ಬಿಜೆಪಿ ಮತ್ತು ಇತರ ಪಕ್ಷಗಳ ಜನಪ್ರತಿನಿಧಿಗಳೂ ನನಗೆ ಮಾಹಿತಿ ನೀಡಿದ್ದಾರೆ.  ಇಂಥ ಚಿಲ್ಲರೆ ರಾಜಕಾರಣ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೇನಾಮಿ ಹೆಸರಿನಲ್ಲಿ ಸಮೀಕ್ಷೆ ಮತ್ತೀತರ ಚಟುವಟಕಿಗೆಳ ನೆಪದಲ್ಲಿ ಇವರು ಮಾಡುತ್ತಿರುವ ಇಂಥ ನಾಟಕಗಳಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿರುವ ನನ್ನ ಹೆಸರಿಗೆ ಮಸಿ ಬಳಿಯುವ ಇವರ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ. ಇಂಥ ಕುತಂತ್ರಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಸವನಾಡು ವಿಜಯಪುರ ಜಿಲ್ಲೆಯ ಜನ ಯಾವತ್ತೂ ದುರುಳರ ತಂತ್ರಗಳಿಗೆ ಮರಳಾಗುವುದಿಲ್ಲ. ಇಂಥ ಸವಾಲುಗಳು ನನಗೆ ಹೊಸದಲ್ಲ. ಯಾರು ಏನೇ ಮಾಡಿದರೂ ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು, ನನ್ನ ಅಭಿಮಾನಿಗಳು, ನನ್ನ ಹಿತೈಷಿಗಳು ಸದಾ ನನ್ನೊಂದಿಗಿದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ. ಅಣ್ಣ ಬಸವಣ್ಣ, ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಅಣ್ಣ ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಡಿ ಈ ಹಿಂದೆ, ಈಗ ಮತ್ತು ಮುಂದೆಯೂ ಜನಸೇವೆ ಮುಂದುವರೆಸುತ್ತೇನೆ. ಯಾರೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌