ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ: ಎನ್ಇಪಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ- ಗುಲ್ನಾದ್ ಕೌರ್

ವಿಜಯಪುರ: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಳೆದ ಮೂರು ವರ್ಷಗಳಲ್ಲಿ ಪರಿಣಾಮಕಾರಿ ಅನುಷ್ಠಾನ ಮಾಡಲಾಗಿದೆ ಎಂದು ವಿಜಯಪುರ ಕೇಂದ್ರೀಯ ವಿದ್ಯಾಲಯದ ಕಾರ್ಯ ನಿರ್ವಾಹಕ ಪ್ರಾಂಶುಪಾಲ ಗುಲ್ನಾಜ್ ಕೌರ್ ಹೇಳಿದ್ದಾರೆ.

ನಗರದ ಅಫಜಲಪೂರ ಟಕ್ಕೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸರಕಾರ 2020 ರಲ್ಲಿ ಜಾರಿಗೊಳಿಸಿದ ಎನ್‌ಇಪಿ 3ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ಪರಿಚಯಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ರಾಷ್ಟ್ರದ ಪರಿಣಾಮಕಾರಿಯಾದ ಶೈಕ್ಷಣಿಕ ಗುರಿ ಹೊಂದಿದೆ. ಇದು ವಿದ್ಯಾರ್ಥಿಗಳ ವಿವಿಧ ಕೌಶಲ್ಯ ಬಳಸಿಕೊಂಡು ಅವರ ಕಲಿಕಾ ಅಗತ್ಯಗಳನ್ನು ಪರಿಹರಿಸಲು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಉತ್ತೇಜನ ನೀಡುವುದಾಗಿದೆ. ವಿನೂತನ ಬೋಧನಾ ವಿಧಾನಗಳ ಪರಿಚಯ, ತರಗತಿಗಳಲ್ಲಿ ತಂತ್ರಜ್ಞಾನದ ಬಳಕೆ, ಆಟ ಆಧಾರಿತ ಶಿಕ್ಷಣ ಮತ್ತು ಅನುಭವ ಕಲಿಕೆಗೆ ಒತ್ತು ನೀಡುವಂತಹ ನೀತಿಗೆ ಅನುಗುಣವಾಗಿ ಶಾಲಾ ಶಿಕ್ಷಣದಲ್ಲಿ ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಎನ್ ಇಪಿ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ವಿಜಯಪುರದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಸಸಿ ಇ. ಕೆ. ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆಯ ವಾತಾವರಣ ಸೃಷ್ಟಿಸಲು ಮಾರ್ಗಸೂಚಿ ಒದಗಿಸಿದೆ. ಕೇಂದ್ರೀಯ ವಿದ್ಯಾಲಯ ವಿಜಯಪುರ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ತತ್ವಗಳನ್ನು ಅಳವಡಿಸಿಕೊಂಡಿದೆ. ಅದರಂತೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಶೈಕ್ಷಣಿಕ ಬೆಳವಣಿಗೆಯ ವಿಷಯದಲ್ಲಿ ಗಮನಾರ್ಹ ಫಲಿತಾಂಶ ಬಂದಿದೆ ಎಂದು ಹೇಳಿದರು.

ಅಲಮಟ್ಟಿಯ ಜವಾಹರ್ ನವೋದಯ ವಿದ್ಯಾಲಯ, ಪ್ರಾಂಶುಪಾಲ ಶಾಂತಿ ಪೌಲ್ ತಮ್ಮ ವಿದ್ಯಾಲಯದಲ್ಲಿ ಜಾರಿಯ ಕುರಿತು ವಿವರಿಸಿದರು.  ಅಲ್ಲದೇ, ಸಾಮರ್ಥ್ಯ ಮತ್ತು ಶೈಕ್ಷಣಿಕ ದೃಢತೆಯನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳ ಒಳಗೊಳ್ಳುವಿಕೆಯ ಅಗತ್ಯ ಮತ್ತು ಪ್ರಾಮುಖ್ಯತೆ ಕುರಿತು ಹೇಳಿದರು.

ವಿಜಯಪುರದ ಸಂಗನಬಸವ ವಸತಿ ಶಾಲೆಯ ಪ್ರಾಂಶುಪಾಲರು ಖ್ಯಾತ ಶಿಕ್ಷಣ ತಜ್ಞೆ ಶರ್ಮಿಳಾ ಹೇಮಂತ್ ಅವರು, ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಎನ್‌ಇಪಿ- 2020ರ ಮಹತ್ವದ ಕುರಿತು ಚರ್ಚಿಸಿದರು. ನೀತಿಯ ಯಶಸ್ವಿ ಅನುಷ್ಠಾನಗೊಳಿಸಲು ಶಾಲೆಗಳು, ಶಿಕ್ಷಕರು, ಪೋಷಕರು ಸಹಯೋಗದ ಅವಶ್ಯಕತೆ ಇದೆ ಎಂದು ಹೇಳಿದರು.

ಅಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ದ್ಯಾನೇಶ್ವರ ತಾಯಡೆ ಅವರು ಮಾತಾಡಿ, ವಿದ್ಯಾರ್ಥಿಗಳ ಮೇಲೆ ಎನ್‌ಇಪಿಯ ಪ್ರಭಾವದ ಕುರಿತು ತಮ್ಮ ಅಭಿಪ್ರಾಯಗಳನ್ನು ಮತ್ತು ವಿಚಾರಗಳನ್ನು ತಿಳಿಸಿದರು.

Leave a Reply

ಹೊಸ ಪೋಸ್ಟ್‌