ಪ್ರಕೃತಿ ಎರಡನೇ ತಾಯಿ ಇದ್ದಂತೆ- ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ- ಡಾ. ಆರ್. ಎಂ. ಮಿರ್ದೆ

ವಿಜಯಪುರ: ಪ್ರಕೃತಿ ಎರಡನೇ ತಾಯಿ ಇದ್ದಂತೆ.  ಸುಂದರವಾದ ಪರಿಸರವನ್ನು ಕಾಳಜಿ ವಹಿಸಿ ಸಂರಕ್ಷಿಸುವುದು ನಮ್ಮೆಲ್ಲಹ ಹೊಣೆಯಾಗಿದೆ ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಬಿ. ಆರ್ಟ್ಸ್ ಮತ್ತು ಕೆಸಿಪಿ ಸಾಯಿನ್ಸ್ ಕಾಲೇಜಿನ ಪ್ರಾಚಾರ್ಯೆ ಡಾ. ಆರ್. ಎಂ. ಮಿರ್ದೇ ಹೇಳಿದ್ದಾರೆ.

ಕಾಲೇಜಿನಲ್ಲಿ ಎಸ್. ಬಿ. ಆರ್ಟ್ಸ್ ಮತ್ತು ಕೆಸಿಪಿ ಸಾಯಿನ್ಸ್, ಐಕ್ಯೂಎಸಿ, ಇಕೋ ಕ್ಲಬ್ ಹಾಗೂ ಸಸ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಸಸ್ಯಶಾಸ್ತ್ರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಅವಶ್ಯಕವಾಗಿದೆ.   ಮನೆಗೊಂದು ಮರ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಗಿಡ ನೆಡುವ ಸಂಕಲ್ಪ ರೂಡಿಸಿಕೊಳ್ಳಬೇಕು.  ಪರಿಸರವನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ.  ಸಸ್ಯಗಳನ್ನು ನೆಡುವುದು ಮತ್ತು ಅವುಗಳನ್ನು ಸಂರಕ್ಷಿಸುವ ಕರ್ತವ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಹೊಂದಬೇಕು.  ನಮ್ಮ ಸುತ್ತಮುತ್ತಲಿನ ಪರಿಸರ, ಉದ್ಯಾನ ವನಗಳಲ್ಲಿ ಸೌಂದರ್ಯವರ್ಧಕ ಗಿಡಗಳನ್ನು ನೆಡಬೇಕು.  ಅಲ್ಲದೆ ಪರಿಸರದಲ್ಲಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಢು ಉಪಯುಕ್ತ ವಸ್ತುಗಳನ್ನಾಗಿ ಮಾಡುವ ಸೃಜನಶೀಲ ಮನೋಭಾವ ಬೆಳೆಸಿಕೊಳ್ಳಬೇಕು.  ಇಂಥ ಇಕೋ ಕ್ಲಬ್ ನ ಸಸ್ಯಶಾಸ್ತ ಹಬ್ಬ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ತುಂಬಾ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಸಸ್ಯಶಾಸ್ತ್ರ ವಿಭಾಗದ, ಇಕೋ ಕ್ಲಬ್ ಮುಖ್ಯಸ್ಥ ಪ್ರೊ. ಕೃಷ್ಣಾ ಮಂಡ್ಲಾ ಮಾತನಾಡಿ, ಕಸದಿಂದ ರಸ ಎಂಬ ಮಾತಿನಂತೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಾಟಲ್, ನಾನಾ ಮರಗಳ ಗಡಿಗೆಗಳನ್ನು ಸಿದ್ದತೆ ಮಾಡಿ ಅವುಗಳನ್ನು ಪಕ್ಕಾ ವಸ್ತುಗಳನ್ನಾಗಿ ಹೊಸ ರೂಪ ನೀಡಿದ್ದಾರೆ.  ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ, ಸಂರಕ್ಷಣೆಗೆ ಈ ಸಸ್ಯಶಾಸ್ತ್ರ ಹಬ್ಬ ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ನಮ್ಮ ಪರಿಸರದಲ್ಲಿ ಹೇರಳವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಪಕ್ಕಾ ವಸ್ತುಗಳನ್ನಾಗಿ ಮಾರ್ಪಡಿಸುವ ಕೌಶಲ್ಯ ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಪ್ರೊ. ಎ. ಬಿ. ಪಾಟೀಲ, ಐಕ್ಯೂಎಸಿ ಡಾ. ಪಿ. ಎಸ್. ಪಾಟೀಲ, ಸಂಯೋಜಕ ಡಾ. ಮಹೇಶಕುಮಾರ, ಡಾ. ತರನ್ನುಮ್ ಜಬೀನಖಾನ್, ಪ್ರೊ. ಶ್ರೀಧರ ಜೋಶಿ, ಪ್ರೊ. ಎಸ್. ಡಿ. ಪಾಟೀಲ, ಪ್ರೊ. ಅಕ್ಷತಾ ಕನ್ನೂರ, ಪ್ರೊ. ಮಂಜುಳಾ ದಾಶ್ಯಾಳ, ಪ್ರೊ. ಅನುರಾಧಾ ಪವಾರ, ಶಿಲ್ಪಾ ವಿಜಾಪುರ, ಪ್ರೊ. ರೋಜಾ ಪಾಟೀಲ, ಡಾ. ಶ್ರೀನಿವಾಸ ದೊಡ್ಡಮನಿ, ಮಹಾವಿದ್ಯಾಲಯದ ಬೊಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೆಳೆಸಿದ ನಾನಾ ಸಸ್ಯಗಳು ಮತ್ತು ಕಚ್ಚಾ ವಸ್ತುಗಳನ್ನು ಬಳಸಿ ಪಕ್ಕಾ ವಸ್ತುಗಳನ್ನಾಗಿ ಮಾರ್ಪಡಿಸಿದ ನಾನಾ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿತ್ತು.

Leave a Reply

ಹೊಸ ಪೋಸ್ಟ್‌