ವಿಜಯಪುರ ನಗರದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಚಿಂತನೆ- ಪ್ರಸ್ತಾವನೆ ಸಿದ್ಧಪಡಿಸಲು ಸಚಿವ ಎಂ. ಬಿ. ಪಾಟೀಲ ಸೂಚನೆ

ವಿಜಯಪುರ: ವಿಜಯಪುರ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್ ನಿರ್ಮಾಣದ ಚಿಂತನೆ ನಡೆಯುತ್ತಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ದಿನಿವಿಡೀ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದ ಅವರು, ಇದೇ ವೇಳೆ ತಮ್ಮನ್ನು ಅಧಿಕಾರಿಗಳಿಗೆ ನಾನಾ ಅಭಿವೃದ್ಧಿ ಕಾಮಗಾರಿಗಳ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಜಯಪುರ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕಾಗಿ ಶಿವಾಜಿ ಸರ್ಕಲ್ ನಿಂದ ಜಿಲ್ಲಾ ಕ್ರೀಡಾಂಗಣದವರೆಗೆ 1 ಕಿ. ಮೀ. ವರೆಗೆ ಫ್ಲೈ ಓವರ್ ನಿರ್ಮಿಸುವ ಚಿಂತನೆ ಇದೆ. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುಬೇಕು. ಇದರ ಸಾಧಕ ಬಾಧಕ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳೋಣ ಎಂದು ಸಚಿವರು ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್. ಕೆ. ಮುಜುಂದಾರ ಮತ್ತು ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ. ಎಂ. ಪಾಟೀಲ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ದಶರಥ ಭೋಸ್ಲೆ ಉಪಸ್ಥಿತರಿದ್ದರು.

ತುಬಚಿ- ಬಬಲೇಶ್ವರ ಏತನೀರಾವರಿ ಕಾಮಗಾರಿ ಪೂರ್ಣಗೂಳಿಸಲು ಸೂಚನೆ

ಇದೇ ವೇಳೆ, ಸೋಮದೇವರಹಟ್ಟಿ ಮತ್ತು ಜಾಲಗೇರಿ ಗ್ರಾಮಸ್ಥರು ಸಚಿವರನ್ನು ಭೇಟಿ ಮಾಡಿ ಕುಂಟುತ್ತ ಸಾಗಿರುವ ನೀರಾವರಿ ಯೋಜನೆಗಳ ಕುರಿತು ಸಚಿವರ ಗಮನ ಸೆಳದರು. ಕೂಡಲೇ ಕರ್ನಾಟಕ ನೀರಾವರಿ ನಿಗಮದ ಎಂಡಿಗೆ ಕರೆ ಮಾಡಿದ ಸಚಿವರು, ಈ ಯೋಜನೆಯಡಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವ ಕುರಿತು ಚರ್ಚಿಸಲು ಮತ್ತು ಮುಂದೆ ಕೈಗೊಳ್ಳಬೇಕಾಗ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆಯುವಂತೆ ಸೂಚನೆ ನೀಡಿದರು.

ಜಾಲಗೇರಿ ಕೆರೆಗೆ ನೀರು ತುಂಬಿಸುವ ಕುರಿತು ಇರುವ ತಾಂತ್ರಿಕ ಸಮಸ್ಯೆ ಪರಿಹರಿಸುವಂತೆ ಸಚಿವ ಎಂ. ಬಿ. ಪಾಟೀಲ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು

ಸಚಿವರನ್ನು ಭೇಟಿ ಮಾಡಿದ ಬಾಬಾನಗರ ಗ್ರಾಮಸ್ಖರು, ಒಣದ್ರಾಕ್ಷಿ ಬೆಲೆ ಕುಸಿದಿದ್ದು, ಗ್ರಾಮದ 600 ಜನ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಾನಾ ಬ್ಯಾಂಕುಗಳು ಕೃಷಿ ಸಾಲ ಮರುಪಾವತಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿವೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣ ಸ್ಪಂದಿಸಿದ ಎಂ. ಬಿ. ಪಾಟೀಲರು, ಜಿಲ್ಲಾಧಿಕಾರಿ ಟಿ. ಭೂಬಾಲನ ಅವರಿಗೆ ಮೊಬೈಲ್ ಕರೆ ಮಾಡಿ, ಕೂಡಲೇ ಬ್ಯಾಂಕರ್ಸ್ ಸಭೆ ಕರೆದು ರೈತರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ತೊಂದರೆಯಾಗದಂತೆ ಮತ್ತು ಒಣದ್ರಾಕ್ಷಿ ಬೆಲೆ ಹೆಚ್ಚಳವಾದ ನಂತರ ಕೃಷಿ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು.

ಕಾರಜೋಳ ಗ್ರಾಮಸ್ಥರ ಅಳಲಿಗೆ ಸ್ಪಂದಿಸಿದ ಸಚಿವರು, ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರಿಗೆ ಕರೆ ಮಾಡಿ ಕಾರಜೋಳ ಏತ ನೀರಾವರಿ ಯೋಜನೆಯಡಿ ಕಾಲುವೆಗಳಿಗೆ ನೀರು ಹರಿಸುವಂತೆ ನಿರ್ದೇಶನ ನೀಡಿದರು. ಈ ಭಾಗದ ಕಾಲುವೆಗಳಿಗೆ ನೀರು ಹರಿಸುವುದರಿಂದ ಬಬಲೇಶ್ವರ ತಾಲೂಕಿನ ಕಾರಜೋಳ ಮತ್ತು ದೂಡಿಹಾಳ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಸ್ವಲ್ಪಭಾಗ ಸೇರಿದಂತೆ ಒಟ್ಟು 5000 ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ. ಹೀಗಾಗಿ ಕೂಡಲೇ ಸ್ಪಂದಿಸುವಂತೆ ಎಂ. ಬಿ. ಪಾಟೀಲ ಸೂಚನೆ ನೀಡಿದರು.

ದೇವಣ ಗೆಣ್ಣೂರ ಪುನರ್ವಸತಿ ಕೇಂದ್ರದಲ್ಲಿ ಮಸೀದಿ ನಿರ್ಮಾಣಕ್ಕೆ ನಿವೇಳನ ಒದಗಿಸುವಂತೆ ಯುಕೆಪಿ ಪುನರ್ವಸತಿ ವಿಭಾಗದ ಪ್ರಧಾನ ವ್ಯವಸ್ಥಾಪಕರು ಸೂಚನೆ ನೀಡಿದ ಸಚಿವರು, ವಿಜಯಪುರ ನಗರದಲ್ಲಿ ಸುಮಾರು 15 ರಿಂದ 20 ಸರ್ವೆಗಳ ನಂಬರಿಗೆ ಸಂಂಧಿಸಿದಂತೆ ನಿವೇಶನಗಳ ಖರೀದಿ ಮತ್ತು ಮಾರಾಟಕ್ಕೆ ನೋಂದಣಿ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಬೇಕು ಎಂದು ಉಪನೋಂದಣಾಧಿಕಾರಿಗಳು ಹಾಗೂ ಮಮದಾಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಮಂಜೂರು ಮಾಡಲು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ಸಮಯ್ಯಾಗದಂತೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕು. ಬರಟಗಿ ಎಲ್.ಟಿ.5 ರಲ್ಲಿ ಜೆಜೆಎಂ ಕಾಮಗಾರಿ ಪೈಪಲೈನ್ ಗುಣಮಟ್ಟದ ಕೆಲಸ ಮಾಡಬೇಕು. ತೊರವಿ, ಅತಾಲಟ್ಟಿ, ಕಣಮುಚನಾಳ, ತಾಜಪುರ, ಧನ್ಯಾರ ಗ್ರಾಮಗಳಿಗೆ ಜಲಧಾರೆ ಯೋಜನೆಯಡಿ ಸಮರ್ಪಕವಾಗಿ ಕುಡಿಯುವ ನೀರು ಯೋಜನೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು, ಕೆ ಕೆ ಆರ್ ಟಿ ಸಿ ಡಿಸಿ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಮೊಬೈಲ್ ಕರೆ ಮಾಡಿ ಸೂಚನೆ ನೀಡಿದರು.
ಸಿಂದಗಿಯಲ್ಲಿ ಖಾಸಗಿ ಬದಲು ಸರಕಾರಿ ಕಾಲೇಜುಗಳನ್ನು ಚುನಾವಾಣೆ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಸಚಿವರನ್ನು ಭೇಟಿ ಮಾಡಿ ಆಗ್ರಹಿಸಿದರು. ಕೂಡಲೇ ಸ್ಪಂದಿಸಿದ ಸಚಿವರು, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ದಿನವಿಡೀ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದಷ್ಟೇ ಅಲ್ಲ, ಅದಕ್ಕೆ ಕೂಡಲೇ ಸ್ಪಂದಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

Leave a Reply

ಹೊಸ ಪೋಸ್ಟ್‌