ಸದಾಶಿವ ಮೂಲ ಮಹಾಸಂಸ್ಥಾನಮಠದ ಹೆಸರಿನಲ್ಲಿ ಯಾರೂ ದೇಣಿಗೆ ಕೇಳುತ್ತಿಲ್ಲ- ಯಾರಿಗೂ ಹಣ ನೀಡಬೇಡಿ- ಬಬಲಾದಿ ಶ್ರೀ ಸಿದ್ಧರಾಮಯ್ಯ ಮುತ್ಯಾ ಖಡಕ್ ಎಚ್ಚರಿಕೆ

ವಿಜಯಪುರ: ಕಾಲಜ್ಞಾನಕ್ಕೆ ಹೆಸರಾಗಿರುವ ಬಸವ ನಾಡಿನ ಬಬಲಾದಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂಲ ಮಹಾಸಂಸ್ಥಾನ ಮಠದ ಹೆಸರಿನಲ್ಲಿ ಕೆಲವು ಜನರು ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮಠದ ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಮುತ್ಯಾ ನೀಡುವ ಹೇಳಿಕೆ ಜಗತ್ಪ್ರಸಿದ್ಧವಾಗಿದೆ.  ಇವರು ನುಡಿಯುವ ಭವಿಷ್ಯ ಎಲ್ಲವೂ ನಿಜವಾಗುತ್ತಿದೆ.  ಹೀಗಾಗಿ ಈ ಮಠದ ಮೇಲೆ ಕರ್ನಾಟಕವಷ್ಟೇ ಅಲ್ಲ, ದೇಶದ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ.  ಇಲ್ಲಿನ ಮಠಾಧೀಶರ ಬಾಯಿಯಿಂದ ಬರುವ ಮಾತುಗಳು ನಿಜವಾಗುವ ಕಾರಣ ಎಲ್ಲರಿಗೂ ಭಕ್ತಿಯ ಜೊತೆಗೆ ಭಯವೂ ಇದೆ.

ಆದರೇ, ಇದೇ ಮಠದ ಹೆಸರಿನಲ್ಲಿ ಕೆಲವು ಜನರು ಶ್ರೀಮಠದ ಅಭಿವೃದ್ಧಿ, ಜಾತ್ರೆ ಮತ್ತೀತರ ಹೆಸರಿನಲ್ಲಿ ಅಲ್ಲಲ್ಲಿ ಸುತ್ತಾಡಿ ಹಣ ಸಂಗ್ರಹಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.  ಇದರಿಂದ ಬೇಸರಗೊಂಡಿರುವ ಮಠದ ಶ್ರೀ ಸಿದ್ಧರಾಮಯ್ಯ ಮುತ್ಯಾ ಉರ್ಫ್ ಸಿದ್ದು ಮುತ್ಯಾ ಅವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ತೆರಳಿ, ಇಂಥದ್ದೆ ಚಂದಾ ಹಣ ಸಂಗ್ರಹದಲ್ಲಿ ತೊಡಗಿದ್ದ ಮತ್ತೋಂದು ಮಠದ ಸ್ವಾಮೀಜಿಯೊಬ್ಬರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.  ಇನ್ನು ಮುಂದೆ ಯಾವುದೇ ರೀತಿಯಲ್ಲಿ ಮಠದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸದಂತೆ ತಾಕೀತು ಮಾಡಿದ್ದಾರೆ.  ಶ್ರೀಗಳ ಜೊತೆಗೆ ತೆರಳಿದ್ದ ಭಕ್ತರೂ ಕೂಡ ಆ ಸ್ವಾಮೀಜಿಗಳಿಗೆ ಭಕ್ತರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ಬಬಲಾದಿ ಮೂಲ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಸಿದ್ಧರಾಮಯ್ಯ ಮತ್ಯಾ, ನುಡಿದಿದ್ದ ಕೊರೊನಾ, ಅತೀವೃಷ್ಠಿ ಮತ್ತು ಅನಾಷಶ್ಠಿ, ದುರಂತಗಳು, ಭೂಕಂಪನ, ಪ್ರವಾಹ ದಂಥ ವಿಚಾರಗಳು ಈಗಾಗಲೇ ನಿಜವಾಗಿವೆ.  ಇವರ ಪೂರ್ವಜರ ಕಾಲದಿಂದಲೂ ಕಾಲಜ್ಞಾನದ ಹೊತ್ತಿಗೆಯಲ್ಲಿರುವ ಪುಟಗಳಲ್ಲಿ ಪ್ರತಿ ವರ್ಷ ಒಂದು ಪುಟವನ್ನು ಓದುವ ಸಂಪ್ರದಾಯ ಇಟ್ಟುಕೊಂಡಿರುವ ಇವರು ನುಡಿಯುವ ಕಾಲಜ್ಞಾನದ ಭವಿಷ್ಯ ನಿಜವಾಗುತ್ತಿವೆ.  ಹೀಗಾಗಿ, ಈ ಮಠಕ್ಕೆ ಅಪಾರ ಭಕ್ತರಿದ್ದು, ಈ ಭಕ್ತರಿಂದ ಕೆಲವರು ಹಣ ಸಂಗ್ರಹಿಸುತ್ತಿರುವುದು ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಬಲಾದಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂಲ ಮಹಾಸಂಸ್ಥಾನ ಮಠ

ಈ ಕುರಿತು ಮಾತನಾಡಿರುವ ಸಿದ್ದು ಮುತ್ಯಾ, ಶ್ರೀಗುರು ಸದಾಶಿವ ಮೂಲಮಹಾ ಸಂಸ್ಥಾನ ಮಠ ಬಬಲಾದಿ, ಶ್ರೀಮಠದ ಗುರುಗಳಾಗಿ ಹೇಳುತ್ತಿದ್ದೇನೆ.  ಸಾಕಷ್ಟು ಹಳ್ಳಿಗಳಲ್ಲಿ ಬಬಲಾದಿ ಸದಾಶಿವಪ್ಪ ಹೆಸರನ್ನು ಹೇಳಿಕೊಂಡು, ಆ ಹೆಸರನ್ನು ದುರುಪಯೋಗ ಮಾಡಿಕೊಂಡು ಆ ಮಠಕ್ಕೆ ಕಳಂಕ ತರುವ ಕೆಲಸವನ್ನು ಕೆಲವೊಂದು ಅವಿವೇಕಿಗಳು ಮಾಡುತ್ತಿದ್ದಾರೆ.  ಮಠದ ಹೆಸರನ್ನು ಹೇಳಿಕೊಂಡು ಯಾರಾದರೂ ನಿಮ್ಮ ಬಳಿಗೆ ಬಂದು ರೊಕ್ಕ, ರೂಪಾಯಿ, ಬಣ್ಣ ಹಚ್ಚುತ್ತೇನೆ, ದಾಸೋಹ ಮಾಡುತ್ತೇನೆ ಎಂದು ಹೇಳಿಕೊಂಡು ಯಾರಾದರೂ ನಿಮ್ಮ ಬಳಿಗೆ ಬಂದರೆ ಯಾರೂ ಒಂದು ರೂಪಾಯಿ ಕೊಡಬೇಡಿ.  ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಭಕ್ತರು ಕಾಣಿಕೆ ನೀಡಲು ಬಯಸಿದರೆ, ನೇರವಾಗಿ ಬಬಲಾದಿ ಸದಾಶಿವಪ್ಪನ ಮಠಕ್ಕೆ ಹೋಗಿ ಹಣೆ ಹಚ್ಚಿ ಬೇಡಿಕೊಳ್ಳಿ.  ನಿಮ್ಮ ಭಕ್ತಿ ನಿಮ್ಮ ಜೊತೆಗೆ ಇರುತ್ತದೆ.  ಯಾರಾದರೂ ಬಂದು ಬಬಲಾದಿಯ ಹೆಸರನ್ನು ಹೇಳಿಕೊಂಡು ಬಂದರೆ ಪಟ್ಟಿ ಕೊಡಲು ಹೋಗಬೇಡಿ.  ಸದಾಶಿವಪ್ಪನ ಹೆಸರು ಹೇಳಿಕೊಂಡು ಬಂದರೆ ಸ್ಪಂದಿಸಬೇಡಿ.  ನಿಮ್ಮ ಭಕ್ತಿ ಬಬಲಾದಿ ಮೂಲ ಮಹಾಸಂಸ್ಥಾನ ಮಠದ ಜೊತೆಗಿರಲಿ.  ಅಲ್ಲಿ ನಿಮ್ಮ ಹರಕೆ ತೀರಿಸಿ ಎಂದು ಸೂಚನೆ ನೀಡಿದ್ದಾರೆ.

ದಯವಿಟ್ಟು ಈ ಮಠದ ಹೆಸರು ಹೇಳಿಕೊಂಡು ಬರುವ ಕೆಲವೊಂದು ನಾವು ಮಠ ಕಟ್ಟುತ್ತಿದ್ದೇವೆ.  ದಾಸೋಹ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.  ಇದೆಲ್ಲ ಸುಳ್ಳು ವದಂತಿ.  ಇಂಥವರಿಗೆ ತಾವು ಯಾರೂ ಬಬಲಾದಿ ಸದಾಶಿವ ಮುತ್ಯಾನ ಹೆಸರಿನಲ್ಲಿ ಒಂದೂ ರೂಪಾಯಿ ನೀಡಬೇಡಿ ಎಂದೂ ಸಿದ್ದು ಮುತ್ಯಾ ಭಕ್ತರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಬಲಾದಿ ಗ್ರಾಮದವರೇ ಆದ ಮತ್ತು ಈವರೆಗೆ ಮೂಲ ಮಹಾಸಂಸ್ಥಾನ ಮಠದ ಹೆಸರಿಲನಲ್ಲಿ ಹಣ ಸಂಗ್ರಹ ಮಾಡಿರುವ ಆರೋಪ ಎದುರಿಸುತ್ತಿರುವ ಚಂದ್ರಯ್ಯ ಮಠದ ಸ್ವಾಮೀಜಿ, ನಮ್ಮದು ಚಂದ್ರಯ್ಯ ಮುತ್ಯಾನ ಮಠ, ಬಬಲಾದಿ ಗ್ರಾಮದಲ್ಲಿರುವ ಮಠ.  ಇನ್ನು ಮುಂದೆ ಬಬಲಾದಿ ಮೂಲ ಮಹಾಸಂಸ್ಥಾನ ಮಠದ ಹೆಸರು ಹೇಳಿ ನಾವು ಪಟ್ಟಿ ಕೇಳುವುದಿಲ್ಲ.  ಒಂದು ವೇಳೆ ಮಾಡಿದರೂ ಆ ಹಣವನ್ನು ಅವರಿಗೆ ನೀಡುತ್ತೇವೆ.  ಆ ಮಠದ ಭಕ್ತರು ನಮ್ಮ ಮಠಕ್ಕೆ ಬಂದರೂ ನಾವು ಅದನ್ನು ಆ ಮಠಕ್ಕೆ ನೀಡುತ್ತೇವೆ.  ಈವರೆಗೆ ಸಂಗ್ರಹಿಸಿದ ಹಣವನ್ನೂ ಅವರಿಗೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನ ಅಥವಾ ಮಠದ ಹೆಸರಿನಲ್ಲಿ ಹಣ ಪಡೆಯುವ ಘಟನೆಗಳು ಆಗಾಗ ನಡೆಯುತ್ತವೆಯಾದರೂ, ಖಡಕ್ ಮಠ ಎಂದೇ ಖ್ಯಾತಿಯಾಗಿರುವ ಮತ್ತು ಬಬಲಾದಿ ಮುತ್ಯಾನ ಹೇಳಿಕೆ ಕರಿ ಕಲ್ಲಿನ ಮೇಲೆ ಬಿಳಿ ಗೆರಿ ಇದ್ದಂತೆ ಎಂಬ ಮಾತು ಈಗಲೂ ಪ್ರಚಲಿತದಲ್ಲಿರುವಾಗ ಮೂಲ ಮಹಾಸಂಸ್ಥಾನದ ಮಠದ ಹೆಸರಿನಲ್ಲಿ ಹಣ ಸಂಗ್ರಹ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.  ಈ ರೀತಿ ವರ್ತನೆ ಮಾಡುತ್ತಿರುವವರು ತಮ್ಮ ನಡವಳಿಕೆ ತಿದ್ದುಕೊಳ್ಳದಿದ್ದರೆ ಸದಾಶಿವ ಮುತ್ಯಾನೇ ಅವರಿಗೆ ತಕ್ಕಪಾಠ ಕಲಿಸುತ್ತಾನೆ ಎಂದು ಭಕ್ತರು ಅಭಿಪ್ರಾಯ ಪಡುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌