ತುಬಚಿ- ಬಬಲೇಶ್ವರ ಏತನೀರಾವರಿ ಹೊಲಗಾಲುವೆ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ- ಸಚಿವ ಎಂ. ಬಿ. ಪಾಟೀಲ ಭರವಸೆ

ವಿಜಯಪುರ: ತುಬಚಿ- ಬಬಲೇಶ್ವರ ಏತನೀರಾವರಿ ಹೊಲಗಾಲುವೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ರೂ. 1.25 ಕೋಟಿ ವೆಚ್ಚದ ಅಲ್ಲಿಸಾಬ ವಸ್ತಿಯಿಂದ ಗುಂಡು ಸತ್ಯಪ್ಪ ಮಾಳಿ ವಸ್ತಿ(ಕರೆಮ್ಮ ದೇವಸ್ಥಾನದ ಹತ್ತಿರ) ವರೆಗೆ 3 ಕಿ. ಮೀ. ರಸ್ತೆ ಸುಧಾರಣೆ ಕಾಮಗಾರಿ ಮತ್ತು ರೂ. 1.50 ಕೋ. ವೆಚ್ಚದ ಕನಮಡಿ- ತೆಲಸಂಗ 4 ಕಿ. ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಿಕೋಟಾ ಹೋಬಳಿ ಕುಡಿಯಲು ನೀರು ಕೊಡಲೂ ಕಷ್ಟಸಾಧ್ಯ ಎಂದು ಕೆಲವರು ಹೇಳಿದ್ದರು. ಆದರೆ, 2013-18ರ ವರೆಗೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಅಸಾಧ್ಯ ಎಂಬುದನ್ನು ಸಾಧ್ಯ ಮಾಡಿ ತೋರಿಸಿದ್ದೇನೆ. ಧರಿದೇವರು, ಸಿದ್ಧೇಶ್ವರ ಸ್ವಾಮಿ, ನಮ್ಮ ತಂದೆ, ತಮ್ಮೆಲ್ಲರ ಆಶೀರ್ವಾದದಿಂದ ಇಡೀ ದೇಶದಲ್ಲಿಯೇ ಹೋಬಳಿಯೊಂದಕ್ಕೆ ಅತೀ ಹೆಚ್ಚು ಅಂದರೆ ರೂ. 3600 ಕೋಟಿ ವೆಚ್ಚದಲ್ಲಿ ನೀರಾವರಿ ಮಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಒಂಬತ್ತು ಮುಖ್ಯ ಸ್ಥಾವರ ನಿರ್ಮಿಸಿ 1000 ಕಿ. ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕನಮಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಂ. ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು

ಆದರೆ, ಕಳೆದ ಐದು ವರ್ಷಗಳಲ್ಲಿ ಸರಕಾರ ತುಬಚಿ- ಬಬಲೇಶ್ವರ ಏತನೀರಾವರಿಗೆ ಸಂಬಂಧಿಸಿದಂತೆ ಹೊಲಗಾಲುವೆ ನಿರ್ಮಿಸದೇ ರೈತರಿಗೆ ಅನ್ಯಾಯ ಮಾಡಿದೆ. 40 ಪರ್ಸೆಂಟ್ ಕಮೀಷನ್ ಆಸೆಗಾಗಿ ಪ್ಯಾಕೆಜ್ ಮಾಡಿ ಕಾಮಗಾರಿ ನನೆಗುದಿಗೆ ಬೀಳುವಂತೆ ಮಾಡಿದೆ. ಈಗ ಮತ್ತೆ ನಮ್ಮ ಸರಕಾರ ಅಧಿಕಾರದಲ್ಲಿದ್ದು, ನಾವು ಪ್ರಾರಂಭಿಸಿರುವ ಈ ಯೋಜನೆಯ ಹೊಲಗಾಲುವೆಗಳ ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ನಮ್ಮ ಅವಧಿಯಲ್ಲಾದ ನೀರಾವರಿ ಯೋಜನೆಗಳಿಂದಾಗಿ ನೆರೆಯ ಮಹಾರಾಷ್ಟ್ರದ ಹಲವಾರು ಗ್ರಾಮಗಳಿಗೂ ಉಪಯೋಗವಾಗಿದೆ. ಅಲ್ಲಿರುವ ಕನ್ನಡಿಗರು ನಮ್ಮ ಉಪಕಾರವನ್ನು ಸ್ಮರಿಸುತ್ತಿದ್ದಾರೆ. ಹಲವಾರು ಜನ ಯುವಕರು ಈಗಲೂ ಬೆಂಗಳೂರಿಗೆ ಬಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಹಳ್ಳಗಳ ಒತ್ತುವರಿ ಸಮೀಕ್ಷೆಗೆ ಸೂಚನೆ

ಇದೇ ವೇಳೆ, ಹಳ್ಳಗಳಲ್ಲಿ ಒತ್ತುವರಿಯಿಂದಾಗಿ ಜಮೀನುಗಳಿಗೆ ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ಅಲ್ಲದೇ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆಗ ಕೂಡಲೇ ಸ್ಪಂದಿಸಿದ ಸಚಿವರು, ಕಾರ್ಯಕ್ರಮದ ವೇದಿಕೆಯಲ್ಲಿಯೇ ಉಪಸ್ಥಿತರಿದ್ದ ತಿಕೋಟಾ ತಹಸೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಹಳ್ಳಗಳ ಒತ್ತುವರಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದರು.
ಪ್ರಾಣಿ ಪಕ್ಷಿಗಳೂ ಉಪಕಾರ ಸ್ಮರಿಸುತ್ತವೆ. ಜಲಸಂಪನ್ಮೂಲ ಸಚಿವನಾಗಿ ನೀವಷ್ಟೇ ಅಲ್ಲ, ನಿಮ್ಮ ಮುಂದಿನ ಪೀಳಿಗೆಯೂ ನೆಮ್ಮದಿಯಿಂದ ಬಾಳುವಂತಾಗಲು ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕುಟುಂಬಗಳ ತಲಾದಾಯ ಹೆಚ್ಚಿಸಲು ಶ್ರಮಿಸಿದ್ದೇನೆ. ಅನ್ನದಾತರು ತಾವೆಲ್ಲರೂ ರೈತರ ಜಾತಿ ಎಂಬಂತಾಗಬೇಗು. ಯಾರೂ ಜಾತಿ ಮಾಡುವಂತಾಗಬಾರದು. ಉಪಕಾರ ಸ್ಮರಿಸಬೇಕು ಎಂದು ಸಚಿವ ಎಂ. ಬಿ. ಪಾಟೀಲ ಕಿವಿಮಾತು ಹೇಳಿದರು.

ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಕನಮಡಿಗೆ ಆಗಮಿಸಿದ ಎಂ. ಬಿ. ಪಾಟೀಲ ಅವರನ್ನು ಕನಮಡಿ ಗ್ರಾಮಸ್ಥರು, ನಾನಾ ಸಂಘಟನೆಗಳು ಹಾಗೂ ತೆಲಸಂಗ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರೈತರ ಮುಖಂಡ ಸೋಮನಾಥ ಬಾಗಲಕೋಟ, ಕರ್ನಾಟಕ ನೀರಾವರಿ ನಿಗಮದ ಎಇಇ ರಾಜೇಂದ್ರ ರೂಢಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮಾನಿಂಗ ಜವನರ, ಶಿವಪುತ್ರ ಅವಟಿ, ಬಾಬುಗೌಡ ಬಿರಾದಾರ, ಸಿದ್ದು ಗೌಡನವರ, ಮಲ್ಲಿಕಾರ್ಜುನ ಬಸಗೊಂಡವರ, ಶಂಕರಗೌಡ ಬಿರಾದಾರ, ಸುರೇಶ್ ಬಾಬಾನಗರ, ಎಂ. ಸಿ. ತಳವಾರ, ಪಿ. ಡಿ. ಪಾಟೀಲ, ಶಂಕರ ಹಾಮಗೋಳ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ ಚನ್ನಯ್ಯ ಮಠಪತಿ ಸ್ವಾಗತಿಸಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌