ಕಾಖಂಡಕಿ ಶ್ರೀ ಮಹಿಪತಿದಾಸರು ಸಿನೇಮಾ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ

ವಿಜಯಪುರ: ನಾಡಿನ ಹೆಸರಾಂತ ದಾಸವರೇಣ್ಯರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿರಾಯರ ಕುರಿತು ತೆರೆಗೆ ಬರುತ್ತಿರುವ ಕಾಖಂಡಕಿ ಶ್ರೀ ಮಹಿಪತಿದಾಸರು ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.

ಬೆಂಗಳೂರಿನ ಕೆ ಆರ್ ಪುರಂ ನಲ್ಲಿರುವ ಮೊವೀಸ್ ಫಿಲ್ಮ್ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ಡಾ. ಮಧಸೂಧನ ಹವಾಲ್ದಾರ, ಯುವ ಧುರೀಣ ಪ್ರಕಾಶ ಅಕ್ಕಲಕೋಟ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು.

ಬೆಂಗಳೂರಿನ ಬ್ರೆನ್ಸ್ ಫೌಂಡೇಶನ್ ಮುಖ್ಯ ನ್ಯೂರೋ ಸರ್ಜನ್ ಹಾಗೂ ಸಂಸ್ಥಾಪಕ ಡಾ. ವೆಂಕಟರಮಣ ಎನ್. ಕೆ. ಬೆಂಗಳೂರಿನ ಉನ್ನತಿ ಫೌಂಡೇಶನ್ನಿನ ರಮೇಶ್ ಸ್ವಾಮಿ, ವಿಜಯಪುರದ ಸಮಾಜ ಸೇವಕ ಹಿರಿಯ ಪತ್ರಕರ್ತ ಸುಶೀಲೇಂದ್ರ ನಾಯಕ ಹಾಗೂ ಕಲಾವಿದ ಸಮಾಜ ಸೇವಕ ಅಂಬಾದಾಸ ಜೋಶಿ, ಅಮೇರಿಕದಿಂದ ಆಗಮಿಸಿದ್ದ ವಾಸುದೇವ ಮೂರ್ತಿ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಕಾಖಂಡಕಿ ಹರಿದಾಸರ ವಂಶಸ್ಥ ಡಾ. ಹರಿದಾಸ, ರಾಯಚೂರಿನ ಹಿರಿಯ ಪತ್ರಕರ್ತ ತ್ರಿವಿಕ್ರಮ ಜೋಶಿ, ಸಾಹಿತಿ ಶ್ರೀನಿವಾಸ ಜಾಲವಾದಿ, ಬಿಜೆಪಿ ಮುಖಂಡ ವಿಜಯ ಜೋಶಿ, ವಿಕಾಸ ಪದಕಿ, ವೆಂಕಟೇಶ ಗುಡಿ ಮೊದಲಾದವರು ಉಪಸ್ಥಿತರಿದ್ದರು.

ಈ ಚಲನಚಿತ್ರದಲ್ಲಿ ವಿಜಯಾನಂದ ನಾಯಕ ಮುಖ್ಯ ಪಾತ್ರದಾರಿಯಾಗಿ ನಟನೆ ಮಾಡುತ್ತಿದ್ದು, ಇತರ ಪಾತ್ರಗಳಲ್ಲಿ ಶರತಕುಮಾರ ದಂಡಿನ, ನವೀನಕುಮಾರ ಏರಿ, ಲಕ್ಷ್ಮಣ ಶ್ರೇಯಾಂಶಿ, ಶಾರದ ವಜಕರೂರ, ಸರಸ್ವತಿ ಪಾಟೀಲ, ವಿಜಯಪುರದ ಗೋವಿಂದರಾಜ ದೇಶಪಾಂಡೆ, ಪುರುಷೋತ್ತಮ ರೆಡ್ಡಿ, ಇಂಗಳಗಿ ನಾಗರಾಜ ಸೇರಿದಂತೆ ನಾನಾ ಕಲಾವಿದರು ನಟನೆ ಮಾಡುತ್ತಿದ್ದಾರೆ.

ರಾಮಾಂಬುಜಾ ಮೂವೀಸ್ ನಿರ್ಮಿಸುತ್ತಿರುವ ಈ ಚಲನಚಿತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಈ ಚಲನಚಿತ್ರದ ಮುಂದಿನ ಚಿತ್ರೀಕರಣವನ್ನು ವಿಜಯಪುರ ನಗರ ಸೇರಿದಂತೆ ಮಹಿಪತಿರಾಯರ ಕರ್ಮಭೂಮಿ ಕಾಖಂಡಕಿಯಲ್ಲಿ ನಡೆಸಲಾಗುವದು ಎಂದು ನಿರ್ದೇಶಕ ಡಾ. ಮಧುಸೂದನ ಹವಾಲ್ದಾರ ತಿಳಿಸಿದರು.

Leave a Reply

ಹೊಸ ಪೋಸ್ಟ್‌