ವೃತ್ತಿಯಿಂದ ಗಳಿಸಿದ ರೂ. 2 ಕೋ. ಖರ್ಚು ಮಾಡಿ ಶ್ರೀಶೈಲದಲ್ಲಿ ವಸತಿ ನಿಲಯ ಕಟ್ಟಿದ ಮಲ್ಲಯ್ಯನ ಭಕ್ತ ಡಾ. ಸಾರ್ವಭೌಮ ಬಗಲಿ

ವಿಜಯಪುರ: ಪ್ರತಿ ವರ್ಷ ಲಕ್ಷಾಂತರ ಜನ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ತೆರಳುತ್ತಾರೆ.  ಯುಗಾದಿ ಸಂದರ್ಭದಲ್ಲಿ ಅಲ್ಲಿ ನಡೆಯುವ ಮಲ್ಲಯ್ಯನ ಜಾತ್ರೆಗೆ ಬಹುತೇಕ ಜನರು ಪಾದಯಾತ್ರೆ ಮೂಲಕ ತೆರಳಿದರೆ, ಲಕ್ಷಾಂತರ ಜನರು ಸರಕಾರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿಯೂ ಪ್ರಯಾಣ ಮಾಡುತ್ತಾರೆ.

ಹೀಗೆ ಶ್ರೀಶೈಲಕ್ಕೆ ತೆರಳು ಭಕ್ತರಿಗೆ ಅಲ್ಲಿ ತಂಗಲು ಎಷ್ಟೇ ವಸತಿ ಗೃಹ ನಿರ್ಮಿಸಿದರೂ ಕಡಿಮೆಯೇ.  ಮಲ್ಲಯ್ಯನ ಭಕ್ತರ ಈ ಸಮಸ್ಯೆಯನ್ನು ಅರಿತ ಮಾಜಿ ಶಾಸಕ ಮತ್ತ ವೃತ್ತಿಯಿಂದ ವೈದ್ಯರಾಗಿರುವ ಹಾಗೂ ಈಗಲೂ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿರುವ ಡಾ. ಸಾರ್ವಭೌಮ ಬಗಲಿ ವಸತಿ ನಿಲಯ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ.

ಶ್ರೀಶೈಲದಲ್ಲಿ ನೂತನ ವಸತಿ ನಿಲಯದಲ್ಲಿ ಹೋಮ ನಡೆಸಿದ ಡಾ. ಸಾರ್ವಭೌಮ ಬಗಲಿ ಕುಟುಂಬ ಸದಸ್ಯರು

ವೃತ್ತಿಯಿಂದ ಗಳಿಸಿದ ರೂ. 2 ಕೋ. ಖರ್ಚು ಮಾಡಿ ವಸತಿ ನಿಲಯ ನಿರ್ಮಿಸಿದ ಮಾಜಿ ಶಾಸಕ

ವೃತ್ತಿಯಿಂದ ವೈದ್ಯ ಮತ್ತು ಪ್ರವೃತ್ತಿಯಿಂದ ರಾಜಕಾರಣಿಯೂ ಆಗಿರುವ ಡಾ. ಸಾರ್ವಭೌಮ ಬಗಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇಂಡಿಯ ಶಾಸಕಾಗಿದ್ದರು.  ಆಂದು ತಮ್ಮ ರಾಜಕೀಯ ಚಟುವಟಿಕೆಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದರು.  ನಂತರ ರಾಜಕೀಯದಿಂದ ದೂರ ಉಳಿದರೂ ತಮ್ಮ ವೈದ್ಯ ವೃತ್ತಿಯನ್ನು ಅವರು ಕೈಬಿಡದೆ ಇಂಡಿ ಪಟ್ಟಣದಲ್ಲಿರುವ ತಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮುಂದುವರೆಸಿದ್ದಾರೆ.  ಮುಂಚೆಯಿಂದಲೂ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಇವರು, ವೈದ್ಯವೃತ್ತಿಯಿಂದ ಗಳಿಸಿದ ಹಣದಲ್ಲಿ ರೂ. 2 ಕೋ. ಖರ್ಚು ಮಾಡಿ ಶ್ರೀಶೈಲದಲ್ಲಿ ಡಾ. ಸಾರ್ವಭೌಮ ಬಗಲಿ ಹೆಸರಿನಲ್ಲಿ ವಸತಿ ನಿಲಯ ಕಟ್ಟಿದ್ದಾರೆ.  50×80 ಚದುರ ಅಡಿ ಪ್ರದೇಶದಲ್ಲಿ ಎರಡು ಅಂತಸ್ತಿನ ವಸತಿ ನಿಲಯ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಸಾಗವಾನಿ ಫರ್ನಿಚರ್ಸ್, ಅತ್ಯುತ್ತಮ ಗುಣಮಟ್ಟದ ಸಲಕರಣೆ ಮತ್ತು ವಸ್ತುಗಳನ್ನು ಬಳಸಿ ಸಕಲ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.  ಈ ವಸತಿ ನಿಲಯದಲ್ಲಿ ಇಂಡಿಯಿಂದ ಬರುವ ಮಲ್ಲಯ್ಯನ ಭಕ್ತರಿಗೆ ಮಾತ್ರ ನೀಡುವಂತೆ ಶ್ರೀಶೈಲದಲ್ಲಿರುವ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮನವಿ ಮಾಡಿದ್ದಾರೆ.

 

ಮೊದಲ ಮಹಡಿಯಲ್ಲಿ ಡಾರ್ಮೆಟರಿ ಅಂದರೆ ಸುಮಾರು 10 ಜನ ತಂಗಲು ವ್ಯವಸ್ಥೆ ಮಾಡಲಾಗಿದೆ.  ಎರಡನೇ ಮಹಡಿಯಲ್ಲಿ ಮೂರು ಬೆಡ್ ರೂಂ ಕೋಣೆಗಳು, ಹಾಲ್ ಮತ್ತು ಅಡುಗೆ ಮನೆ ನಿರ್ಮಿಸಲಾಗಿದೆ.  ಎರಡನೇ ಮಹಡಿಯಲ್ಲಿಯೂ ಭಕ್ತರು ತಂಗಲು ವ್ಯವಸ್ಥೆ ಮಾಡಲಾಗಿದೆ.

 

ಇದೀಗ ಕಟ್ಟಡ ನಿರ್ಮಾಣ ಪೂರ್ಣಗೊಂಡಿರುವ ಹಿನ್ನೆಲೆಯೆಲ್ಲಿ ಡಾ. ಸಾರ್ವಭೌಮ ಬಗಲಿ ಅವರು ತಮ್ಮ ಪತ್ನಿ ಭಾಗೀರಥಿ ಬಗಲಿ, ಪುತ್ರಿ ಡಾ. ಶಿಲ್ಪಾ ವಡಕನ್ನವರ, ಪುತ್ರರಾದ ಸತೋಷ ಮತ್ತು ಸಂಕೇತ, ಸೊಸೆಯಂದಿರಾದ ಡಾ. ಕವಿತಾ ಹಾಗೂ ಜಯಲಕ್ಷ್ಮಿ ಅವರ ಜೊತೆ ಶ್ರೀಶೈಲಕ್ಕೆ ತೆರಳಿ ನೂತನ ವಸತಿ ನಿಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

 

 

ಮಾಜಿ ಶಾಸಕರಾದರೂ ಭ್ರಷ್ಟಾಚಾರ, ಕಾನೂನು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುತ್ತ ಸದಾ ಚಟುವಟಿಕೆಗಳಿಂದ ಇರುವ ಡಾ. ಸಾರ್ವಭೌಮ ಬಗಲಿ ಇಳಿ ವಯಸ್ಸಿನಲ್ಲಿಯೂ ವೈದ್ಯ ವೃತ್ತಿ ಮುಂದುವರೆಸಿಕೊಂಡು ಬಂದಿದ್ದು, ಅದೇ ಹಣದಲ್ಲಿ ಶ್ರೀಶೈಲದಲ್ಲಿ ವೈಯಕ್ತಿಕವಾಗಿ ವಸತಿ ನಿಲಯ ನಿರ್ಮಿಸುವ ಮೂಲಕ ಸಿರಿಗಿರಿ ಮಲ್ಲಯ್ಯನ ಭಕ್ತಿಗೆ ಪಾತ್ರರಾಗಿದ್ದಾರೆ.

Leave a Reply

ಹೊಸ ಪೋಸ್ಟ್‌