ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಸಿಎಂ ಬಾಗೀನ ಅರ್ಪಣೆ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ

ವಿಜಯಪುರ: ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಎಸ್. ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಆಲಮಟ್ಟಿ ಆಗಮಿಸಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ.

ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಆಲಮಟ್ಟಿ ಹೆಲಿಪ್ಯಾಡ್ ನಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಅನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಗೌರವ ಸಲ್ಲಿಸಿದರು.  ಗೌರವ ವಂದನೆ ಸ್ವೀಕರಿಸಿ ರಸ್ತೆ ಮಾರ್ಗವಾಗಿ ಡ್ಯಾಂ ಅವರಣಕ್ಕೆ ಆಗಮಿಸಿದ ಸಿಎಂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ನ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವೇರಿಸಿದರು.  ಗೋಪಾಲಾಚಾರ್ಯ ಹಿಪ್ಪರಗಿ ಮತ್ತು ಇತರ ಅರ್ಚಕರು ಪೂಜಾ‌ ಕೈಂಕರ್ಯ ಕೈಗೊಂಡರು.  ಗಂಗಾಪೂಜೆ ಬಳಿಕ ಮುಖ್ಯಮಂತ್ರಿಗಳು ಕೃಷ್ಣ ನದಿಗೆ ಬಾಗೀನ ಅರ್ಪಿಸಿದರು.

ಈ ಸಂದರ್ಭದಲ್ಲಿ ಡಿಸಿಎಂ ಮತ್ತು ಜಲ‌ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಸಚಿವರಾದ ಶಿವಾನಂದ ಪಾಟೀಲ, ಕೃಷ್ಣ ಭೈರೇಗೌಡ, ಆರ್. ಬಿ. ತಿಮ್ಮಾಪೂರ, ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆಗಳ ಶಾಸಕರು ಹಾಗೂ ವಿಧಾನ ಪರಿಷತ ಸದಸ್ಯರು ಉಪಸ್ಥಿತರಿದ್ದರು. ಸಂಸದ ಪಿಸಿ ಗದ್ದುಗೌಡರ ಉಪಸ್ಥಿತರಿದ್ದರು.

ಆಲಮಟ್ಟಿಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ, ಸಚಿವ ಎಂ. ಬಿ. ಪಾಟೀಲ ಗಂಗಾಪೂಜೆ ಸಲ್ಲಿಸಿದರು

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ.  ಹೀಗಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಇರಲ್ಲ.  ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿಯೂ ಮಳೆ‌ ಕಡಿಮೆಯಾಗಿದೆ.  ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 113 ತಾಲೂಕುಗಳನ್ನು ಬರಗಾಲ ಎಂದು ಘೋಷಿಸಲಾಗಿದೆ.  ಬಳಿಕ 73ತಾಲೂಕು ಬರಗಾಲ ಎಂದು ಘೋಷಿಸಲಾಗಿದೆ.  ಸೆ. 4 ರಂದು ಒಟ್ಟು ಎಷ್ಟು ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು.  ಯಾವ ಯಾವ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ ಅವುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು.  ಬಳಿಕ ಕೇಂದ್ರ ಸರಕಾರಕ್ಕೆ ಬರ ಪರಿಹಾರ ಘೋಷಣೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಎನ್. ಡಿ. ಆರ್. ಎಫ್ ನಿಯಮಗಳನ್ನು 2020ರಿಂದ ಬದಲಾವಣೆ ಮಾಡಿಲ್ಲ.  ಅದನ್ನು ಹೆಚ್ಚಿಗೆ ಮಾಡಲು ಪತ್ರದಲ್ಲಿ ಬರೆಯುತ್ತೇನೆ ಎಂದು ತಿಳಿಸಿದ ಅವರು, ಕೃಷ್ಣಾ ಯೋಜನೆಗಳಿಗೆ ಹಿಂದಿನ ಸರಕಾರದವರು ಇಟ್ಟಿದ್ದ ರೂ. 21000 ಕೋ. ಹಣವನ್ನು ನಾವು ಮುಂದಿವರೆಸಿದ್ದೇವೆ.  ತುಂಗಭದ್ರಾ ಯೋಜನೆಗೆ ಕೇಂದ್ರದಿಂದ ರೂ. 5000 ಕೋ. ಬರಲಿದೆ ಎಂದು ಹಿಂದಿನ ಸರಕಾರದವರು ಹೇಳಿದ್ದರು.  ಅದು ಬಂತಾ? ಬಂದಿಲ್ಲವಲ್ಲ.  ಕೃಷ್ಣಾ ಯೋಜನೆಗೆ ನಾವು ಯಾವುದೇ ಹಣ ಕಡಿಮೆ ಮಾಡಿಲ್ಲ.  ಈಗ 130 ಟಿಎಂಸಿ ನೀರು ಸಂಗ್ರಹ ಇದೆ.  ಡ್ಯಾಂ ಎತ್ತರ 519 ಇದೆ.  ಇದನ್ನು 524 ಮೀಟರ್ ಎತ್ತರಕ್ಕೆ ಹೆಚ್ಚಳವಾದಾಗ ಆಂಧ್ರ ಮತ್ತು ಕರ್ನಾಟಕಕ್ಕೆ ಅಗತ್ಯವಿರುವ ನೀರಿನ ಹಂಚಿಕೆಯಾಗಲಿದೆ.  ಕೃಷ್ಣಾ ಯೋಜನೆಗೆ ರೂ. 83000 ಕೋ. ಬೇಕಾಗಬಹುದು.  ಆದರೆ, ಇನ್ನು ಗೆಜೆಟ್ ನೋಟಿಫಿಕೇಷನ್ ಆಗಬೇಕಿದೆ ಎಂದು ಸಿಎಂ ಹೇಳಿದರು.

ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರ

ನಮ್ಮ ಹತ್ತಿರ ನೀರಿಲ್ಲ.  ಆದರೂ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡಬೇಕು ಎಂದು ಆರ್ಡರ್ ಆಗಿದೆ.  ತಮಿಳುನಾಡಿನವರು ಪ್ರತಿದಿನ 24000 ಕ್ಯೂಸೆಕ್ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.  ನಮ್ಮಲ್ಲಿ ಅಷ್ಟು ನೀರು ಇಲ್ಲ.  ಬಿಡಲು ಆಗುವುದಿಲ್ಲ.  ನೀರು ಸಂರಕ್ಷಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇಸ್ರೋದಿಂದ ಆದಿತ್ಯ-1 ರಾಕೆಟ್ ಉಡಾವಣೆ ವಿಚಾರ

ನಾವು ಈಗಾಗಲೇ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ್ದೇವೆ.  ಇವತ್ತು ಲಾಂಚ್ ಆಗಿರುವ ರಾಕೆಟ್ ಯಶಸ್ವಿಯಾಗಲಿ ಎಂದು ಸಿಎಂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ, ಕೃಷ್ಣೆಗೆ ಬಾಗೀನ ಅರ್ಪಣೆ ಮಾಡಲಾಗಿದೆ.  ಇದೀಗ ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಲಾಗುವುದು.  ಕೇಂದ್ರದಿಂದ ರೂ. 21000 ಕೋ. ನಲ್ಲಿ ಇನ್ನೂ ರೂ. 5000 ಕೋ. ಕೇಂದ್ರದಿಂದ ಹಣ ಬಂದಿಲ್ಲ.  ಶೀಘ್ರದಲ್ಲಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಕಾಗುವುದು.  ಕಾವೇರಿ ವಿಚಾರದಲ್ಲಿ ಯಾರೂ ಆತಂಕ ಪಡಬೇಕಿಲ್ಲ.  ಮೊದಲು ಕುಡಿಯುವ ನೀರಿಗೆ ಆಧ್ಯತೆ ಕೊಡಬೇಕಿದೆ.  ಅದನ್ನು ನಮ್ಮ ಅಧಿಕಾರಿಗಳ ತಂಡ, ತಾಂತ್ರಿಕ ತಂಡ ನಿರ್ವಹಿಸಲಿದೆ.  ಕಂದಾಯ ಸಚಿವರು, ಶಾಸಕರ ಸಭೆ ಕರೆಯಲಾಗಿದೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಳಿಕ ಸಿಎಂ, ಡಿಸಿಎಂ ಮತ್ತು ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ, ಸಚಿವರಾದ ಎಂ. ಬಿ. ಪಾಟೀಲ, ಆರ್. ಬಿ. ತಿಮ್ಮಾಪುರ, ಶಿವಾನಂದ ಪಾಟೀಲ, ಕೃಷ್ಣ ಭೈರೇಗೌಡ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌