ಕೇಂದ್ರ ಪುರಸ್ಕೃತ ಅನುದಾನ ಸಮರ್ಪಕವಾಗಿ ಬಳಸಿ- ಗುಣಮಟ್ಟದ ಕಾಮಗಾರಿ ಕೈಗೊಳ್ಳಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೃಷಿ, ಗ್ರಾಮೀಣಾಭಿವೃದ್ದಿ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಕೇಂದ್ರ ಪುರಸ್ಕøತ ಯೋಜನೆಯಡಿಯ  ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡುವ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚನೆ ನೀಡಿದ್ದಾರೆ. 

ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ಕೇಂದ್ರ ಸರಕಾರದ ನಾನಾ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಪುರಸ್ಕøತ ಯೋಜನೆಗಳನ್ನು ನಿಗದಿತ  ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ಜಲಜೀವನ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ಕಾಮಗಾರಿ ಪೂರ್ಣಗೊಂಡ ನಂತರ ಹಾಗೆ ಬಿಡದೇ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಂದಲೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಟೆಂಡರ್‍ದಾರರಿಗೆ ಹಣ ಪಾವತಿಸಲು ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪಡಿಸುವ ಸಂದರ್ಭದಲ್ಲಿ ಹಳ್ಳಿಗಳಲ್ಲಿನ ರಸ್ತೆ ಬದಿಯ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಗ್ರಾ. ಪಂ. ಮೂಲಕ ಅಥವಾ ನಗರ ಪ್ರದೇಶದ ಯೋಜನೆಯಡಿ ಮನೆ ನಿರ್ಮಿಸಿ ಕೊಡಬೇಕು.  ಜಲಧಾರೆ ಯೋಜನೆ ಕಾಮಾಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬಹುಹಳ್ಳಿ ಕುಡಿಯುವ ನೀರಿನ ಯೊಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆಗಳಲ್ಲಿ ಬೊರವೆಲ್‍ಗಳ ಅವಶ್ಯಕತೆ ಇದ್ದಲ್ಲಿ ಬೊರವೆಲ್ ಕೊರೆಯಿಸಲು ಕ್ರಮ ವಹಿಸಿ, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ಜಲ ಜೀವನ ಮಿಷನ್ ಯೋಜನೆಯಡಿಯ 848 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ.  234 ಕಾಮಗಾರಿಗಳು ಪ್ರಗತಿಯಲ್ಲಿದ್ದು, 471 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ.58.82 ರಷ್ಟು ಪ್ರಗತಿ ಸಾಧಿಸಲಾಗಿದ್ದು, 266.86 ಲಕ್ಷ ರೂ. ವೆಚ್ಚ ಮಾಡಲಾಗಿದೆ. 2024ನೇ ಡಿಸೆಂಬರ್ ಒಳಗಾಗಿ ಬಾಕಿ ಉಳಿದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಳೆದ ಮೂರು ತಿಂಗಳಲ್ಲಿ ವಿಜಯಪುರ ತಾಲೂಕಿನ 12, ತಿಕೋಟ ತಾಲೂಕಿನ 78, ಬಸವನಬಾಗೇವಾಡಿ ತಾಲೂಕಿನ 106, ಕೊಲ್ಹಾರ ತಾಲೂಕಿನ 9, ನಿಡಗುಂದಿ ತಾಲೂಕಿನ 14, ಇಂಡಿ ತಾಲೂಕಿನ 87, ಮುದ್ದೇಬಿಹಾಳ ತಾಲೂಕಿನ 5, ತಾಳಿಕೋಟೆ ಹಾಗೂ ಸಿಂದಗಿ  ತಾಲೂಕಿನ ತಲಾ 23, ದೇವರಹಿಪ್ಪರಗಿ ತಾಲೂಕಿನ 24 ಹಾಗೂ ಆಲಮೇಲ ತಾಲೂಕಿನ 47 ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಬಾಕಿ ಉಳಿದ 6545 ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶವನ್ನು ಪಂಚತಂತ್ರ ತಂತ್ರಾಂಶ 2.0ದಲ್ಲಿ ಇಂದೀಕರಿಸಲು ಸಂಬಂಧಪಟ್ಟ ಗ್ರಾ. ಪಂ. ಗಳಿಗೆ ಸೂಚಿಸಿದ ಅವರು ಅವರು, ಯೋಜನೆಯಡಿ ಯಾವುದೇ ಮಿತಿ ಇಲ್ಲದೇ  ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಅವರು ಹೇಳಿದರು.

ಜಿ. ಪಂ. ಸಿಇಓ ರಾಹುಲ್ ಶಿಂಧೆ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ ಯೋಜನೆಯಡಿ 761 ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಈ ಪೈಕಿ 138 ಹೃದಯ ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದು, ಮೆದುಳು ಶಸ್ತ್ರ ಚಿಕಿತ್ಸೆ ಪ್ರಕರಣಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಲಾದ 6556 ಗುರಿ ಎದುರು 5141 ಮನೆಗಳನ್ನು ಮಂಜೂರಿಸಲಾಗಿದೆ. 1ನೇ ಕಂತು 1652.66 ಲಕ್ಷ ರೂ. ಫಲಾನುಭವಿಗಳಿಗೆ ಬಿಡುಡೆ ಮಾಡಲಾಗಿದ್ದು, ಈ ಪೈಕಿ ದೇವರಹಿಪ್ಪರಗಿ ತಾಲೂಕಿನ 13, ಇಂಡಿ ತಾಲೂಕಿನ 1, ಸಿಂದಗಿ ತಾಲೂಕಿನ 8, ತಾಳಿಕೋಟೆ ತಾಲೂಕಿನ 1 ಸೇರಿದಂತೆ 13 ಮನೆಗಳು ಪೂರ್ಣಗೊಂಡಿದ್ದು, 1415 ಫಲಾನುಭವಿಗಳ ಜಿಯೋ ಟ್ಯಾಗ್ ಬಾಕಿ ಇದೆ. ನಿಗದಿತ ಗುರಿಯಂತೆ ಪ್ರಗತಿ ಸಾಧಿಸಲಾಗಿದ್ದು, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಲಜೀವನ ಮಿಷನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸೇರಿದಂತೆ ವಿವಿಧ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌