ಮೀರಜ್, ಸೋಲಾಪುರ ವೈದ್ಯರು ನಿರಾಕರಿಸಿದ ರೋಗಿಗೆ ಬಸವ ನಾಡಿನ ಡಾಕ್ಟರ್ ರಿಂದ ಸ್ಪಂದನೆ- 9 ತಿಂಗಳಿಂದ ಹಾಸಿಗೆಯಲ್ಲಿದ್ದ 85 ವರ್ಷದ ಅಜ್ಜ ನಡೆದಾಡುವಂತೆ ಮಾಡಿದ ವೈದ್ಯರು

ವಿಜಯಪುರ: ಮಹಾರಾಷ್ಟ್ರದ ಮೀರಜ್ ಮತ್ತು ಸೋಲಾಪುರಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಮತ್ತು ಕಳೆದ ಒಂಬತ್ತು ತಿಂಗಳಿಂದ ನಡೆಯಲಾಗದೇ ಹಾಸಿಗೆ ಹಿಡಿದಿದ್ದ ರೋಗಿಗೆ ಶಸ್ತ್ರಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಗಮನ ಸೆಳೆದಿದ್ದಾರೆ.

ಇಂಡಿ ತಾಲೂಕಿನ 85 ವರ್ಷದ ವೃದ್ದರೊಬ್ಬರು ಬಿದ್ದು ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು.  ಎಡ ಚಪ್ಪೆ ಮುರಿದ ಕಾರಣ ನಡೆಯಲೂ ಅವರಿಗೆ ಆಗುತ್ತಿರಲಿಲ್ಲ.  ಅಲ್ಲದೇ, ಹಾಸಿಗೆಯಲ್ಲಿಯೇ ಇದ್ದ ಕಾರಣ ಬಲಗಾಲಿನ ಚರ್ಮಕ್ಕೂ ಗಂಭೀರ ಗಾಯವಾಗಿತ್ತು.  ಮೇಲಾಗಿ ಈ ರೋಗಿ ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು.  ಮೇಲಾಗಿ ನಡೆದಾಡಲೂ ಆಗದೆ ರೋಗಿಯ ಗೋಳು ಹೇಳತೀರದಾಗಿತ್ತು.

ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮೀರಜ್ ಮತ್ತು ಸೋಲಾಪುರಗಳಲ್ಲಿ ವೈದ್ಯರನ್ನು ಸಂಪರ್ಕಿಸಿದರೂ ವಯಸ್ಸು ಹಾಗೂ ರೋಗಿಯ ಆರೋಗ್ಯ ಪರಿಸ್ಥಿತಿ ನೋಡಿ ಶಸ್ತ್ರಚಿಕಿತ್ಸೆ ನಡೆಸಲು ನಿರಾಕರಿಸಿದ್ದರು.  ಆಗ, ರೋಗಿಯ ಸಂಬಂಧಿಕರು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕ ಮಾಡಿದರು.  ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯ ಮತ್ತು ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಹಾಗೂ ದಯಾನಂದ ಬಿರಾದಾರ ಹಾಗೂ ಎಲಬು ಮತ್ತು ಮತ್ತು ಕೀಲು ತಜ್ಞ ಡಾ. ರವಿಕುಮಾರ ಬಿರಾದಾರ ಶಸ್ತ್ರಚಿಕಿತ್ಸೆ ನಡೆಸಿ ರೋಗಿ ಮತ್ತೆ ನಡೆದಾಡುವಂತೆ ಮಾಡಿದ್ದಾರೆ.

ಡಾ. ಎಂ. ಬಿ. ಪಾಟೀಲ ಮತ್ತು ದಯಾನಂದ ಬಿರಾದಾರ ಅವರು ಈ ರೋಗಿಯ ಬಲಗಾಲಿಗ ಉಂಟಾಗಿದ್ದ ಗಾಯವನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗುಣಪಡಿಸಿದ್ದು, ಸುಮಾರು ಒಂದೂವರೆ ತಿಂಗಳಲ್ಲಿ ಈ ಗಾಯ ವಾಸಿಯಾಗಿದೆ.

ನಂತರ ಈ ರೋಗಿಗೆ ಕ್ಲಿಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ರವಿಕುಮಾರ ಬಿರಾದಾರ ಸುಮಾರು ಒಂದೂವರೆ ಗಂಟೆಗಳ ಕಾಲ ಆಪರೇಶನ್ ಮಾಡಿ ರೋಗಿಯ ಎಡಚಪ್ಪೆಯನ್ನು ಮರು ಜೋಡಿಸಿದ್ದಾರೆ.  ಅಲ್ಲದೇ, ಈ ಶಸ್ತ್ರಚಿಕಿತ್ಸೆ ನಡೆದ ಕೇವಲ ಎರಡು ದಿನಗಳಲ್ಲಿ ರೋಗಿ ನಡೆದಾಡುವಂತೆ ಮಾಡಿದ್ದಾರೆ.  ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ರೋಗಿ ಗುಣಮುಖರಾಗಿದ್ದು, ತಮ್ಮ ಮನೆಗೆ ಮರಳಿದ್ದಾರೆ.

ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರ ಈ ಕಾರ್ಯಕ್ಕೆ ರೋಗಿ ಮತ್ತು ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದು, ಚಿಕಿತ್ಸೆಗಾಗಿ ಮಹಾರಾಷ್ಟ್ರ ಮತ್ತೀತರ ಕಡೆ ಅಲೆದಾಡಿ ಹಣವನ್ನೂ ಖರ್ಚು ಮಾಡಿ ಹೈರಾಣಾಗಿದ್ದೇವು.  ಅಲ್ಲದೇ, ತಮ್ಮ ಕುಟುಂಬದ ಹಿರಿಯ ವ್ಯಕ್ತಿ ಗುಣಮುಖರಾಗುವ ಬಗ್ಗೆ ಆತಂಕ ಉಂಟಾಗಿತ್ತು.  ಆದರೆ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ನಮ್ಮ ಮನೆಯ ಮುಖ್ಯಸ್ಥನ್ನು ಗುಣಮುಖರನ್ನಾಗಿ ಮಾಡುವ ಮೂಲಕ ನಮ್ಮೆಲ್ಲರ ಮೊಗದಲ್ಲಿ ಮಂದಹಾಸ ಮೂಡಲು ಕಾರಣರಾಗಿದ್ದಾರೆ.  ಇದಕ್ಕಾಗಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಒಂಬತ್ತು ತಿಂಗಳಿಂದ ಹಾಸಿಗೆ ಹಿಡಿದು ನರಳಾಟ ನಡೆಸಿದ್ದ 85 ವರ್ಷದ ರೋಗಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ಕಾರ್ಯವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ವಿವಿಯ ರಜಿಸ್ಚ್ರಾರ್ ಡಾ. ಆರ್. ವಿ. ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಶ್ಲಾಘಿಸಿದ್ದಾರೆ..

ವಿಜಯಪುರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಎಲುಬು, ಕೀಲು ಹಾಗೂ ಬೆನ್ನೆಲುಬಿನ ಯಾವುದೇ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದೆ.  ಅಲ್ಲದೇ, ಶೀಘ್ರದಲ್ಲಿಯೇ ಟ್ರಾಮಾ ಸೆಂಟರ್ ಕೂಡ ಪ್ರಾರಂಭಿಸಲಿದ್ದೇವೆ.  ರೋಗಿಗಳು ನಮ್ಮ ಆಸ್ಪತ್ರೆಯಲ್ಲಿ ಆರೋಗ್ಯ ವಿಮೆ ಯೋಜನೆಗಳಡಿಯೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕುಲಪತಿ ಡಾ. ಆರ್. ಎಸ್. ಮುಧೋಳ ಮಾಧ್ಯಮ ಪ್ರಕಟಣೆಯೆಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌