ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಪಡೆದು ವಿಜೃಂಭಣೆಯಿಂದ ಆಚರಣೆ ಮಾಡಿ- ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರವಿರಲಿದೆ- ಸಚಿವ ಎಂ ಬಿ ಪಾಟೀಲ

ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಪೊಲೀಸರ ಅನುಮತಿ ಪಡೆಯಬೇಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೂ ಕಾನೂನಿಗಿಂತ ಮೇಲಲ್ಲ.  ಕಾನೂನು ರಚನೆ ಮಾಡುವವರೇ ನಾವು.  ಶಾಸಕರು ಕಾನೂನನ್ನು ಪಾಲಿಸಬೇಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ.  ಇವತ್ತು ಅಹಿತಕರ ಘಟನೆಗಳು ಆಗಬಾರದು.  ಗಣೇಶೋತ್ಸವ ಆಚರಣೆ ವ್ಯವಸ್ಥಿತ ರೀತಿಯಲ್ಲಿ ಆಗಬೇಕು.  ಕಾರ್ಯಕ್ರಮ ಘನತೆ ಮತ್ತು ಗೌರವದಿಂದ ಆಗಬೇಕು.  ಶ್ರದ್ಧೆಯಿಂದ ಆಗಬೇಕು.  ಇದು ನಮ್ಮ ಸರಕಾರದ ಮತ್ತು ಜಿಲ್ಲಾಡಳಿತದ ಆಶಯ.  ಅದಕ್ಕೆ ಇವತ್ತು ಶಾಂತ ರೀತಿಯಿಂದ, ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾಡಲಾಗುವು ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾದ ನಾನೂ ಜೊತೆಗಿರುತ್ತೇನೆ ಎಂದು ಹೇಳಿದರು.

ಮಾಡಬೇಕಿರುವ ಕಾನೂನನ್ನು ಪಾಲನೆ ಮಾಡಿ.  ಆದರೆ, ಸುಮ್ಮಸುಮ್ಮನೆ ಗೊಂದಲ ಸೃಷ್ಠಿ ಮಾಡುವ ಕೆಲಸ ಆಗಬಾರದು.  ಯಾರು ಅನುಮತೆ ಕೇಳುತ್ತಾರೋ ಅವರಿಗೆ ತಕ್ಷಣ ಅನುಮತಿ ಕೊಡುವಂತೆ ಅಧಿಕಾರಿಗಳಿಗೆ ನಾನು ಸೂಚನೆ ಕೊಡುತ್ತೇನೆ ಎಂದು ಅವರು ತಿಳಿಸಿದರು.

ತಾಜ ಬಾವಡಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವಿಚಾರ

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಸುಮಾರು ರೂ. 9 ರಿಂದ ರೂ. 10 ಕೋ. ಖರ್ಚು ಮಾಡಿ ಖಾಸಗಿಯವರಿಂದಲೂ ದೇಣಿಗೆ ಪಡೆದು ಪುರಾತನ ಬಾವಡಿಗಳನ್ನು ಸ್ವಚ್ಛ ಮಾಡಿಸಿದ್ದೇನೆ.  ಆ ಬಾವಡಿಗಳ ನೀರನ್ನು ವಿಜಯಪುರ ನಗರದ ದಿನನಿತ್ಯದ ಬಳಕೆಗೆ ಪೂರೈಸಲು ಕ್ರಮ ಕೈಗೊಂಡಿದ್ದೇನೆ.  ಇದರಿಂದ ಬಟ್ಟೆ ತೊಳೆಯಲು, ಸ್ನಾನ ಮಾಡಲು, ಪಾತ್ರೆ ತೊಳೆಯಲು ಬಳಸಬಹುದಾಗಿದೆ.  ಅಷ್ಟೇ ಅಲ್ಲ, ತಾಜಬಾವಡಿಯಿಂದ ಜಿಲ್ಲಾಸ್ಪತ್ರೆಗೆ ನೀರು ಪೂರೈಸಲು ಸರಕಾರಿ ಆಸ್ಪತ್ರೆ ಕನೆಕ್ಷನ್ ಕೊಡಲಾಗುತ್ತಿದೆ.  ಹೀಗಿದ್ದಾಗ ನೀವು ಸ್ಚಚ್ಛ ಮಾಡಿರುವ ಬಾವಡಿಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡುವುದು ಎಷ್ಟು ಸರಿ? ನಿಮ್ಮ ಉದ್ದೇಶವಾದರೂ ಏನು? ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದರು.

ನಾವು ಪ್ರತಿ ಸಲದಂತೆ ಕಲ್ಯಾಣಿ ಮಾಡಿ ಕೊಡುತ್ತೇವೆ.  ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕ್ ಬಳಿ ಕಲ್ಯಾಣಿ ಮಾಡಿದ್ದಾರೆ.  ಅಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ.  ಇದು ನಮ್ಮ ಸರಕಾರದಲ್ಲಿ ಅಲ್ಲ, ಹಿಂದಿನ ಸರಕಾರದಲ್ಲಿಯೂ ಅದೇ ಪದ್ಧತಿ ಇತ್ತು.  ಕಳೆದ ನಾಲ್ಕು ವರ್ಷಗಳ ಕಾಲ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಸ್ಯಾಂಕಿ ಟ್ಯಾಂಕ್ ಬಳಿ ನಿರ್ಮಿಸಾದ ಕಲ್ಯಾಣಿಯಲ್ಲಿಯೇ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತಿದೆ.  ಈಗ ಗೊಂದಲ ಸೃಷ್ಠಿ ಮಾಡಿರುವುದರ ಹಿಂದೆ ಬೇರೆಯೇ ಉದ್ದೇಶವಿದೆ.  ಇದಾವುದಕ್ಕೂ ನಾವು ಆಸ್ಪದ ಕೊಡುವುದಿಲ್ಲ ಎಂದು ಸಚಿವರು ಹೇಳಿದರು.

ನಿಮಗೆ ಎಲ್ಲ ಅನುಮತಿ ಕೊಡುತ್ತೇವೆ.  ಆದರೆ, ವಿಜೃಂಭಣೆಯಿಂದ ನಿರಾಳವಾಗಿ ಶಾಂತ ರೀತಿಯಲ್ಲಿ ಆಚರಣೆ ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ.  ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಿಮ್ಮ ಜನತೆಯ ಜೊತೆಗಿದ್ದೇನೆ.  ದಯವಿಟ್ಟು ಪರವಾನಗಿ ತೆಗೆದುಕೊಳ್ಳಿ.  ನೀವು ಯಾವುದೇ ಆತಂಕವಿಲ್ಲದೇ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡಲು ಸಹಕಾರ ನೀಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌