ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಧನಾತ್ಮಕ ಚಿಂತನೆಗೆ ಸಹಕಾರಿಯಾಗಿವೆ- ರಾಜಶೇಖರ ಧೈವಾಡಿ

ವಿಜಯಪುರ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಾಂತಿ, ಸಹಬಾಳ್ವೆ, ಸಾಂಘಿಕ ಜೀವನ ಹಾಗೂ ಸಂತೃಪ್ತ ಬದುಕಿಗೆ ಸಹಕಾರಿಯಾಗುತ್ತವೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ಧೈವಾಡಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿವೃತ್ತ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಗರದ ಡಾ. ಬಿ. ಆರ್. ಅಂಬೇಡ್ಕರ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ಯ ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯ ನಾಗರಿಕರ ಸ್ಥಿತಿ ಸ್ಥಾಪಕತ್ವ ಎಂಬ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿರಿಯರು ಹಿರಿಯರನ್ನು ಗೌರವ ಪೂರ್ವಕವಾಗಿ ಹಾಗೂ ಹಿರಿಯರು ಕಿರಿಯರನ್ನು ಪ್ರೀತಿಯಿಂದ ಕಾಣಬೇಕು. ಈಗಿನ ಯುವ ಜನಾಂಗ ಹಿರಿಯರ ರೀತಿ ನೀತಿಗಳನ್ನು ಅನುಸರಿಸಿ ನಡೆಯುಲು ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಕಾರ್ಯಕ್ರಮ ಉದ್ಘಾಟಿಸಿದರು.

ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಪಿ.‌‌‌ ಬಿರಾದಾರ (ಕಡ್ಲೇವಾಡ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಐದು ತಾಲೂಕಿನ ಎಂ. ಆರ್. ಡಬ್ಲ್ಯೂಗಳಾದ ರವಿ ರಾಠೋಡ, ಮುತ್ತುರಾಜ ಸಾತಿಹಾಳ, ಎಸ್. ಕೆ. ಘಾಟಿ, ಪರಶುರಾಮ ಬೋಸಲೆ, ಶಿವಲೀಲಾ ಬಿರಾದಾರ, ಜಿಲ್ಲೆಯ ನಿವೃತ್ತ ಹಿರಿಯರು, ವೃದ್ಧರು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌