ವಂದೇ ಭಾರತ ರೈಲು ಸೇವೆ ಸೋಲಾಪುರದಿಂದ ವಿಜಯಪುರದವರೆಗೆ ವಿಸ್ತರಿಸಲು ಪ್ರಯತ್ನ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಮಹಾರಾಷ್ಟ್ರದ ಸೋಲಾಪುರವರೆಗೆ ಸಂಚರಿಸುವ ವಂದೆ ಭಾರತ ರೈಲು ಸೇವೆಯನ್ನು ಬಸವನಾಡು ವಿಜಯಪುರದವರೆಗೆ ವಿಸ್ತರಿಸಲು ಪ್ರಯತ್ನಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ವಿಜಯಪುರ ತಾಲೂಕಿನ ಅಲಿಯಾಬಾದ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೇಲ್ವೆ ಗೂಡ್ಸಶೆಡ್ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ರೈಲ್ವೆ ನಿಲ್ದಾಣದ  ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ನಿಲ್ದಾಣದಲ್ಲಿ ಪ್ಯಾಸೆಂಜರ್ ಹಾಗೂ ಎಕ್ಸಪ್ರೆಸ್ ರೈಲುಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತಡೆಯಲು ಪ್ರತ್ಯೇಕವಾದ ಗೂಡ್ಸಶೆಡ್ ಸೌಲಭ್ಯವನ್ನು ಕಲ್ಪಿಸಲು ಅಲಿಯಾಬಾದ್‌ನಲ್ಲಿ ಗೂಡ್ಸ್ ಟರ್ಮಿನಲ್‌ ಅಭಿವೃದ್ದಿ ಪಡಿಸಲಾಗಿದೆ.  ವಿಜಯಪುರ ನಗರದ ಮಧ್ಯ ಭಾಗದಲ್ಲಿ ಗೂಡ್ಸಶೆಡ್‌ ಇರುವುದರಿಂದ ಸರಕು ಸಾಗಾಣಿಕೆ, ಸಂಚಾರಕ್ಕೆ ತೊಂದರೆಯಾಗುತ್ತಿತ್ತು.  ಇದನ್ನು ಗಮನಿಸಿ, ಹೊರ ವಲಯದ ಅಲಿಯಾಬಾದ್‌ಗೆ ಸ್ಥಳಾಂತರ ಮಾಡುವಂತೆ ಕೇಂದ್ರ ರೈಲ್ವೆ ಖಾತೆ ಸಚಿವರು ಮತ್ತು ರೇಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೆ.  ಈ ಹಿನ್ನಲೆಯಲ್ಲಿ ಅಲಿಯಾಬಾದನಲ್ಲಿ ಸುಸಜ್ಜಿತ ಗೂಡ್ಸಶೆಡ್ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಇಲ್ಲಿ ಎರಡು ಅಂತಸ್ತಿನ ಗೂಡ್ಸಶೆಡ್ ಕಟ್ಟಡವನ್ನು ನಿರ್ಮಿಸಲಾಗಿದೆ.  ಕಾರ್ಯಾಲಯ, ಎಫ್‌ಓಐಎಸ್ ಕೊಠಡಿ, ಆರ್‌ಪಿಎಫ್ ಕೊಠಡಿ, ವಿಶ್ರಾಂತಿ ಕೊಠಡಿ, ಟಿಎಕ್ಸ್ಆರ್ ಕೊಠಡಿ, ವರ್ತಕರ ಕೊಠಡಿ, ಕಾರ್ಮಿಕರ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ವಿಜಯಪುರದಿಂದ ಅಲಿಯಾಬಾದ್‌ಗೆ ಗೂಡ್ಸಶೆಡ್ ಸ್ಥಳಾಂತರಿಸುವುದರಿxದ ವಿಜಯಪುರ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ.  ಅಲ್ಲದೇ, ಹೆಚ್ಚುವರಿ ಲೂಪ್ ಲೈನ್‌ಗಳು, ಪಿಟ್‌ಲೈನ್, ಸ್ಟೇಬಲಿಂಗ್ ಸೇರಿದಂತೆ ನಾನಾ ಕೋಚಿಂಗ್ ಸೌಲಭ್ಯವನ್ನು ಒದಗಿಸಲು ಅನುಕೂಲವಾಗಲಿದೆ.  ಅಲಿಯಾಬಾದ್ ಗೂಡ್ಸಶೆಡ್‌ನಲ್ಲಿ ದಿನಕ್ಕೆ 20 ರಿಂದ 30 ರೇಕುಗಳ್ನು ಲೋಡಿಂಗ್ ಮತ್ತು ಅನಲೋಡಿಂಗ್ ಮಾಡಲು ಅನುಕೂಲವಾಗಲಿದೆ.  ಇದರಿಂದ ಜಿಲ್ಲೆಯ ವ್ಯಾಪಾರ ವಹಿವಾಟಕ್ಕೂ ಸುಗಮವಾಗಲಿದೆ ಎಂದು ಸಂಸದರು ತಿಳಿಸಿದರು.

ವಿಜಯಪುರ ತಾಲೂಕಿನ ಅಲಿಯಾಬಾದ ಬಳಿ ರೇಲ್ವೆ ಗೂಡ್ಸಶೆಡ್ ನೂತನ ಕಟ್ಟಡವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು

ಇಂಡಿ ತಾಲೂಕಿನ ಪಡನೂರ ಗ್ರಾಮದ ಹತ್ತಿರ ನದಿಗೆ ರೈಲ್ವೆ ಕೆಳಸೇತುವೆ ನಿರ್ಮಾಣ ಮಾಡಲಾಗಿದೆ.  ಜಿಲ್ಲೆಯಲ್ಲಿ 16 ಅಂಡರ್‌ ಪಾಸ್‌ಗಳಿಗೆ ಮಂಜೂರಾತಿ ನೀಡಲಾಗಿದೆ.  ರೈಲ್ವೆ ಇಲಾಖೆಯಿಂದ ಜಿಲ್ಲೆಯಲ್ಲಿ 6 ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.  ಹೊಸ ರೈಲುಗಳು ವಿಜಯಪುರ ಮಾರ್ಗವಾಗಿ ಸಂಚರಿಸುತ್ತಿವೆ.  ವಂದೇ ಭಾರತ ರೈಲನ್ನು ಸಹ ಸೋಲಾಪುರದಿಂದ ವಿಜಯಪುರದವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು.  ಜಿಲ್ಲೆಯಲ್ಲಿ ದಿನಕ್ಕೆ 22 ರಿಂದ 23 ರೈಲುಗಳ ಓಡಾಟ ಇರುವುದರಿಂದ ಜಿಲ್ಲೆಯ ಅಭಿವೃದ್ದಿಗೆ ಅನೂಕೂಲವಾಗಿದೆ ಎಂದು ಅವರು ಹೇಳಿದರು.

ವಿಜಯಪುರ ಮಾರ್ಗವಾಗಿ ಸಂಚರಿಸುವ ಮೈಸೂರು- ಸೋಲಾಪುರ ರೈಲು ಈಗ ಫಂಡರಪುರದವರೆಗೂ ವಿಸ್ತರಣೆಯಾಗಿದೆ.  ಹುಬ್ಬಳ್ಳಿ- ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು ವಾರದಲ್ಲಿ ಒಂದು ದಿನ ವಿಜಯಪುರ ಮಾರ್ಗವಾಗಿ ಸಂಚರಿಸುತ್ತಿದೆ.  ಈ ರೈಲನ್ನು ವಾರದಲ್ಲಿ ಮೂರು ದಿನ ಸಂಚರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಮೇಶ ಜಿಗಜಿಣಗಿ ತಿಳಿಸಿದರು.

ರೈಲ್ವೆ ಇಲಾಖೆಯ ವಿಭಾಗೀಯ ಹಿರಿಯ ವಾಣಿಜ್ಯ ವಿಭಾಗದ ವ್ಯವಸ್ಥಾಪಕರಾದ ಸಂತೋಷ ಹೆಗಡೆ ಮಾತನಾಡಿ, ಅಂದಾಜು ರೂ. 23.02 ಕೋ. ವೆಚ್ಚದಲ್ಲಿ ಅಲಿಯಾಬಾದ್‌ನಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಗೂಡ್ಸಶೆಡ್‌ನಲ್ಲಿ ಅಹಾರ ಪದಾರ್ಥಗಳು, ರಸಗೊಬ್ಬರ, ಪೂರೈಕೆಗೆ ಅನುಕೂಲ ಕಲ್ಪಿಸಲಾಗಿದೆ.  ಈ ಭಾಗದ ಜನರ ಬೇಡಿಕೆಯಂತೆ ಅಲಿಯಾಬಾದನಲ್ಲಿ ನಿರ್ಮಿಸಲಾದ ಗೂಡ್ಸಶೆಡ್‌ನಲ್ಲಿ ಏಕಕಾಲದಲ್ಲಿ ಎರಡು ರೈಲುಗಳಿಂದ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಮಾಡಬಹುದುದಾಗಿದೆ.  ಇದರಿಂದ ಸಮಯವೂ ಉಳಿತಾಯವಾಗಿ, ಸರಕು ಸಾಗಾಣಿಕೆಗೆ ಅನುಕೂಲವಾಗಿದೆ.  ಅಲ್ಲದೇ, ಆರ್ಥಿಕತೆಗೆ ಇಂಬು ಸಿಗಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ, ನೈರುತ್ಯ ರೇಲ್ವೆ ಮುಖ್ಯ ಅಭಿಯಂತರ ಸಧರ್ಮ ದೇವರಾಯಲ, ಎಡಿಆರ್‌ಎಂ ಸಂಜಯ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌