ಡೆಂಗ್ಯೂ ರಥ ಅಭಿಯಾನ- ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ

ವಿಜಯಪುರ:: ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾದಿಕಾರಿಗಳ ಕಾರ್ಯಾಲಯ ವಿಜಯಪುರ ವತಿಯಿಂದ ಆಯೊಜಿಸಲಾಗಿರುವ ಡೆಂಗ್ಯೂ ರಥ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡೆಂಗೀ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದೆ. ಸಾರ್ವಜನಿಕರೂ ಸಹ ತಮ್ಮ ಅಕ್ಕ-ಪಕ್ಕದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ಡೆಂಗೀ ರೋಗ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು  ಕೈಗೊಳ್ಳಬೇಕು ರೋಗ ಕುರಿತು  ಜಾಗೃತಿ ಮೂಡಿಸಲು ರಥ ಅಭಿಯಾನ ಆಯೋಜಿಸಿದ್ದು, ಜಿಲ್ಲಾದ್ಯಂತ ಸಂಚರಿಸಿ ಈ ರಥ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಮಾತನಾಡಿ, ಡೆಂಗ್ಯೂ ಜಾಗೃತಿ ರಥವು ಜಿಲ್ಲೆಯ ಎಲ್ಲ ಕಡೆ ಸಂಚರಿಸಿ ರೋಗದ ಲಕ್ಷಣಗಳು, ರೋಗ ತಡೆಗಟ್ಟುವಿಕೆ ಮುಂಜಾಗೃತೆ ಕ್ರಮಗಳ ಕುರಿತು ಮಾಹಿತಿ ನೀಡಲಿದೆ.  ಸಾರ್ವಜನಿಕರು ಈ ಕುರಿತು ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.

ವಿಜಯಪುರದಲ್ಲಿ ಡೆಂಗ್ಯೂ ರಥ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ ಚಾಲನೆ ನೀಡಿದರು

ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾದಿಕಾರಿ ಜೈಬುನ್ನಿಸಾಬೇಗಂ ಬೀಳಗಿ ಮಾತನಾಡಿ, ಡೆಂಗ್ಯೂ ರಥ ಅಭಿಯಾನ ಜಿಲ್ಲಾದ್ಯಂತ ಸಂಚರಿಸಿ ಆರೋಗ್ಯ ಶಿಕ್ಷಣ ನೀಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ.  ಸಾರ್ವಜನಿಕರು ಮನೆ ಮತ್ತು ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಡಬೇಕು.  ನೀರಿನ ಸಂಗ್ರಹಕಾರಕಗಳ ಮೇಲೆ ಸೊಳ್ಳೆಗಳು ಮೊಟ್ಟಯಿಡದಂತೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು.  ವಾರಕ್ಕೊಮ್ಮೆ ನೀರಿನ ಸಂಗ್ರಹಕಾರಕಗಳನ್ನು ಸ್ವಚ್ಛವಾಗಿ ತಿಕ್ಕಿ ತೊಳೆದು ನೀರನ್ನು ತುಂಬುವ ಮೂಲಕ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಆರ್. ಸಿ. ಎಚ್ ಅಧಿಕಾರಿ ಕೆ. ಡಿ. ಗುಂಡಬಾವಡಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಕವಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೊಲಗೆರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಸಂಪತ್ ಗುಣಾರಿ, ತಾಲೂಕು ಆರೋಗ್ಯಾಧಿಕಾರಿ ಪಿ. ಎ. ಹಿಟ್ನಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೊಲೂರ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌