ಜಿಲ್ಲೆಯ ಎಲ್ಲ 9 ಸಕ್ಕರೆ ಕಾರ್ಖಾನೆಗಳು ನ. 1ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಸರಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಒಂಬತ್ತು ಸಕ್ಕರೆ ಕಾರ್ಖಾನೆಗಳು ನವೆಂಬರ್ 1ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ನುರಿಸಿದ 14 ದಿನಗಳಲ್ಲಿ ನಿಗದಿ ಪಡಿಸಿದ ಎಫ್. ಆರ್. ಪಿ ದರದಂತೆ ಕಬ್ಬಿನ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾದರು.

ಪ್ರಸಕ್ತ 2023-24 ನೇ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕರು, ನಿರ್ದೇಶಕರುಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರವು ನವೆಂಬರ್ 1ರಿಂದ ನ. 15ರೊಳಗೆ ಏಕಕಾಲದಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಪ್ರಸಕ್ತ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು.  ಅಲ್ಲದೇ, ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲು ವಿಳಂಬ ಮಾಡದೇ ಎಫ್. ಆರ್. ಪಿ ದರದಂತೆ ನಿಗದಿತ ಅವದಿಯಲ್ಲಿಯೇ ಬಿಲ್ ಪಾವತಿಸಬೇಕು ಎಂದು ಅವರು ಸೂಚನೆ ನೀಡಿದರು.

ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಕಬ್ಬು ನುರಿಸಲು ಪ್ರಾರಂಭಿಸುವ ಕುರಿತು ಡಿಸಿ ಟಿ. ಭೂಬಾಲನ ಅಧಿಕಾರಿಗಳು, ಕಾರ್ಖಾನೆಗಳ ಮಾಲಿಕರು ಮತ್ತೀತರರ ಜೊತೆ ಸಭೆ ನಡೆಸಿದರು

ರೈತರಿಗೆ ಪಾವತಿಸಲಾಗುವ ಎಫ್. ಆರ್. ಪಿ ದರ, ಕಬ್ಬು ಕಟಾವು ಹಾಗೂ ಸರಕು ಸಾಗಾಣಿಕೆ ಮೊತ್ತದ ಕುರಿತು ಮಾಹಿತಿ ಒದಗಿಸಬೇಕು.  ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಎಲ್ಲ ಕಾರ್ಖಾನೆಗಳು ಪಾಲಿಸಬೇಕು.  ನಿಯಮದಂತೆ ತೂಕದ ಯಂತ್ರಗಳನ್ನು ಅಕ್ಟೋಬರ್ 27ರ ಒಳಗಾಗಿ ರೈತರ ಸಮಕ್ಷಮದಲ್ಲಿ ಸತ್ಯಾಪಣೆ ಮಾಡಿಕೊಳ್ಳಬೇಕು.  ಕೇಂದ್ರ ಸರಕಾರದ ವೆಬ್ ಪೋರ್ಟಲ್‌ನಲ್ಲಿ ಪ್ರತಿ ಸೋಮವಾರ ಕಡ್ಡಾಯವಾಗಿ ಸಕ್ಕರೆ ದಾಸ್ತಾನು ವಿವರಗಳನ್ನು ನಮೂದು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕಬ್ಬು ಕಟಾವು ಮಾಡಲು ಬೇರೆ ಜೆಲ್ಲೆ ಮತ್ತು ರಾಜ್ಯಗಳಿಂದ  ಆಗಮಿಸುವ ಕಾರ್ಮಿಕರು ತಮ್ಮ ಜೊತೆಯಲ್ಲಿ ತಂತಮ್ಮ ಮಕ್ಕಳನ್ನು ಕಬ್ಬು ಕಟಾವಿಗೆ ಕರೆದುಕೊಂಡು ಬರುವುದರಿಂದ  ಬಾಲ ಕಾರ್ಮಿಕರನ್ನು ತೆಗೆದುಕೊಳ್ಳಬಾರದು ಎಂದು ಸಂಬಂಧಿಸಿದವರಿಗೆ ಕಾರ್ಖಾನೆಯವರು ಸೂಚನೆ ನೀಡಬೇಕು.  ಬಾಲ ಕಾರ್ಮಿಕರ ಪರಿಶೀಲನೆಗೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಉಪವಿಭಾಗಾಧಿಕಾರಿಗಳು ಕಟಾವು ಮಾಡುವ ಪ್ರದೇಶಗಳಿಗೆ ಅನಿರಿಕ್ಷೀತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.  ಒಂದು ವೇಳೆ ಬಾಲ ಕಾರ್ಮಿಕ ಪ್ರಕರಣ ಕಂಡು ಬಂದರೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು.  ಇದಕ್ಕೆ ಆಸ್ಪದ ನೀಡಬಾರದು.  ಕಬ್ಬು ಕಟಾವಿಗೆ ಬಂದ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಬಿಡುವಂತೆ ಕಾರ್ಮಿಕರಿಗೆ ತಿಳುವಳಿಕೆ ನೀಡಬೇಕು ಎಂದು ಅವರು ಸೂಚನೆ ನೀಡಿದರು.

ಕಬ್ಬು ಸಾಗಾಣಿಕೆ ವಾಹನಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಬೇಕು.  ವಾಹನಗಳ ಹಿಂಭಾಗ ರೇಡಿಯಂ ಅಳವಡಿಸಬೇಕು.  ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಮತ್ತು ಕಬ್ಬು ಸರಬರಾಜು ಮಾಡುವ ವಾಹನಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಅಬ್ಬರದ ಧ್ವನಿವರ್ಧಕ ಬಳಸದಂತೆ ಕಡಿವಾಣ ಹಾಕುವಂತೆ ಸಕ್ಕರೆ ಕಾರ್ಖಾನೆಯವರಿಗೆ ಟಿ. ಭೂಬಾಲನ ಸೂಚನೆ ನೀಡಿದರು.

ಈ ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಆಹಾರ ಇಲಾಖೆಯ ಅಮರೇಶ ತಾಂಡೂರ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌