ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ತರಬೇತಿ ಅಗತ್ಯ- ಜಿಲ್ಲಾಧಿಕಾರಿ ಟಿ. ಭೂಬಾಲನ

ವಿಜಯಪುರ: ವಿಕಲಚೇತನರಲ್ಲಿರುವ ಕೌಶಲ್ಯಾಭಿವೃದ್ದಿಯನ್ನು ಗುರುತಿಸಿ, ಅವರ ಕೌಶಲ್ಯಕ್ಕೆ ತಕ್ಕಂತೆ ಸೂಕ್ತ ತರಬೇತಿ ಒದಗಿಸುವ ಮೂಲಕ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸುವಂತೆ ಅನುಕೂಲ ಕಲ್ಪಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ  ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಜಿಲ್ಲೆಯ ಎಲ್ಲಾ ತಾಲೂಕಾ ಮಟ್ಟದಲ್ಲಿ ವಿಕಲಚೇತನರ ಕುಂದುಕೊರತೆ ಸಭೆಗಳನ್ನು ಆಯೋಜಿಸಿ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ವಿಕಲಚೇತನರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿ ,ಆಸ್ಪತ್ರೆ, ಶಾಲಾ ಕಾಲೇಜುಗಳಲ್ಲಿ ಬ್ಯಾಂಕ್‌ಗಳಲ್ಲಿ ರ‍್ಯಾಂಪ್ಸ್ ಮತ್ತು ರೇಲಿಂಗ್ಸ್ ಅಳವಡಿಸುವಂತೆ  ಜಿಲ್ಲಾ ಆರೋಗ್ಯಾಧಿಕಾರಿ, ಉಪ ನಿರ್ದೇಶಕರು ಜಿಲ್ಲಾ ಶಾಲಾ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ  ಸೂಚನೆ ನೀಡಿದರು. ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್  ಒದಗಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಎನ್.ಆರ್.ಎಚ್.ಎಂ ಯೋಜನೆಯಡಿ ಬೆನ್ನುಹುರಿ ಅಫಘಾತಕ್ಕೆ ಒಳಗಾದ ವಿಕಲಚೇತನರಿಗೆ ಮೆಡಿಕಲ್ ಕಿಟ್ ವಿತರಿಸಲು ಅವಕಾಶವಿದ್ದು, ಮೆಡಿಕಲ್ ಕಿಟ್ ಅವಶ್ಯಕತೆಯನುಸಾರ ಒದಗಿಸಬೇಕು.  ಎಲ್ಲಾ ಶಾಲೆಗಳಲ್ಲಿ ಸ್ಪೀಚ್ ಥೆರಪಿಸ್ಟ್ ನೇಮಕ ಮಾಡಬೇಕು.  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾಗಿರುವ ಫಲಾನುಭವಿಯ ಪಾಲು ರಿಯಾಯಿತಿ, ಬೆನ್ನು ಹುರಿ ಅಫಘಾತಕ್ಕೆ ಒಳಗಾದ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಒದಗಿಸಬೇಕು.  ವಿಕಲಚೇತನರಿಗೆ ನೀಡುತ್ತಿರುವ ಇಂಧನ ಚಾಲಿತ ತ್ರಿಚಕ್ರ ವಾಹನಗಳ ರೆಟ್ರೋ ಪಿಟ್ಮೆಂಟ್ ದೊಡ್ಡದಾಗಿದ್ದು, ಅದನ್ನು ವೈಜ್ಞಾನಿಕವಾಗಿ ಅಳವಡಿಸಬೇಕು ಮತ್ತು ಸದರಿ 100 ಸಿ.ಸಿ ಒಳಗಿನ ವಾಹನಗಳನ್ನು ಖರೀದಿಸುವುದು ಸೇರಿದಂತೆ ವಿಕಲಚೇತನರ ಕುಂದು ಕೊರತೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಅವರ ಕುಂದು ಕೊರತೆಗಳಿಗೆ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವಿಕಲಚೇತನರಿಗೆ ಉದ್ಯೋಗ ಒದಗಿಸಲಾಗುತ್ತಿದೆ.  ಅವರು ನಿರ್ವಹಿಸುವ ಕೆಲಸಗಳನ್ನು ಮಾತ್ರ ಅವರಿಗೆ ವಹಿಸಿಕೊಡಲಾಗುತ್ತಿದೆ.  ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ 824 ವಿಕಲಚೇತನ ಮಕ್ಕಳಿಗೆ ನಾನಾ ಬಗೆಯ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ.  ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಬೆನ್ನುಹುರಿ ಅಫಘಾತಕ್ಕೆ ಒಳಗಾದ ವಿಕಲಚೇತನರಿಗೆ ಉಚಿತ ವೈದ್ಯಕೀಯ ಸೇವೆ  ಒದಗಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ಧಿನ್ ಸೌದಾಗರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ. ಕೆ. ಚವ್ಹಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌