ನವರಾತ್ರಿ ಶುಭ ದಿನದಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಬಸವ ನಾಡಿನ ಪೋಷಕರು

ವಿಜಯಪುರ: ಹಿಂದೂ ಸಂಪ್ರದಾಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶುಭ ದಿನಗಳಿಗಾಗಿ ಕಾಯುವ ಸಂಪ್ರದಾಯ ಹಿಂದಿನಂದಲೂ ಆಚರಣೆಯಿಂದ ಬಂದಿದೆ.  ತಮ್ಮ ಮಕ್ಕಳು ವಿದ್ಯಾವಂತರಾಗಬೇಕು.  ಬುದ್ದಿವಂತರಾಗಬೇಕು.  ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು ಎಂದು ಆಶಿಸುವ ಪೋಷಕರು ಬಾಲ್ಯದಲ್ಲಿ ಅವರು ಅಕ್ಷರ ಕಲಿಯುವ ಅಥವಾ ಶಾಲೆಗೆ ಸೇರುವ ದಿನ ಶುಭವಾಗಿದ್ದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ನಂಬಿಕೆಯಿಂದ ಸ್ವಾಮೀಜಿಗಳು ಅಥವಾ ಅರ್ಚಕರು ಇಲ್ಲವೇ ಜ್ಯೋತಿಷಿಗಳು ಬಳಿ ಪಂಚಾಂಗ ಕೇಳುತ್ತಾರೆ.  ಅದೇ ರೀತಿ, ಇಂಥ ಶುಭ ದಿನಗಳಿಗಾಗಿಯೂ ಭಾರತೀಯ ಸಂಪ್ರದಾಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಮುಹೂರ್ತಗಳು ಮಾತ್ರ ಬರುತ್ತವೆ.

ವಿಜಯಪುರ ನಗರದ ಜೋರಾಪುರ ಪೇಟೆಯ ಅಂಬಾಭವಾನಿ ದೇವಸ್ಥಾನ

 

ದಸರಾ ಇಂಥ ಶುಭದಿನವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ವಿಶಿಷ್ಠ ಕಾರ್ಯಕ್ರಮ ಬಸವನಾಡು ವಿಜಯಪುರದಲ್ಲಿ ನಡೆಯಿತು.  ನಗರದ ಜೋರಾಪುರ ಪೇಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ತಂತಮ್ಮ ಮಕ್ಕಳಿಗೆ ಜಗನ್ಮಾತೆ ಸನ್ನಿದಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರು.  ವಿಜಯಪುರ ನಗರದ ಭಕ್ತರಿಗೆ ದೇವಿ ಪ್ರಮುಖವಾಗಿರುುದರಿಂದ ನವರಾತ್ರಿ ದಿನಗಳಲ್ಲಿ ನಿತ್ಯ ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ.  ನವರಾತ್ರಿ ವೈಶಿಷ್ಟ್ಯ ಎಂಬಂತೆ ಇಲ್ಲಿ ವಿದ್ಯಾರಂಭಕ್ಕೆ ಚಾಲನೆ ನೀಡಲಾಯಿತು.  ಪುಟಾಣಿ ಮಕ್ಕಳಿಗೆ ದೇವಿಯ ಸನ್ನಿಧಾನದಲ್ಲಿ ವಿದ್ಯಾರಂಭ ಮಾಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ನಂಬಿಕೆ ಇದೆ.  ಈ ಹಿನ್ನೆಲೆಯಲ್ಲಿ ತಟ್ಟೆಯಲ್ಲಿ ಹಾಕಲಾಗಿದ್ದ ಅಕ್ಕಿಯ ಮೇಲೆ ಪೋಷಕರು ದೇವಸ್ಥಾನದಲ್ಲಿದ್ದ ಮಾರ್ಗದರ್ಶಕರ ಸಲಹೆಯಂತೆ ಅಕ್ಷರಾಭ್ಯಾಸ ಮಾಡಿಸಿದರು.  ಈ ಮೂಲಕ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ದೇವಿಯಲ್ಲಿ ಪಾರ್ಥಿಸಿದ್ದೇವೆ ಎನ್ನುತ್ತಾರೆ ತಾಯಿ  ಪದ್ಮಪ್ರೀಯಾ ಗೆಡ್ಡೆ.

ಬೆಳಿಗ್ಗೆಯಿಂದ ಸಂಜೆಯ ವರೆಗೆ ನಡೆದ ಈ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಚಿಣ್ಣರ ಕೈಯ್ಯಲ್ಲಿ ತಟ್ಟೆಯಲ್ಲಿ ಮೊದಲಿಗೆ ಓಂ ಬೀಜಾಕ್ಷರ, ಸರಸ್ವತಿ, ಗಣೇಶ,  ಶಕ್ತಿ ಮಾತಾ ಹಾಗೂ ಕುಲದೇವರ ಹೆಸರು ಬರೆಯಲು ಭೋಧಿಸಲಾಯಿತು‌.  ಬಳಿಕ ಪುಟಾಣಿಗಳ ಕೈಯಲ್ಲಿ ಅಮ್ಮ ಸೇರಿದಂತೆ ಇತರ ಕನ್ನಡ ಪದಗಳನ್ನು ಬರೆಯಿಸಲಾಯಿತು.  ಮಕ್ಕಳೂ ಕೂಡ ಅಚ್ಚರಿಯಿಂದ ಮತ್ತು ಉತ್ಸಾಹದಿಂದ ಪಾಲ್ಗೊಂಡು ಖುಷಿ ಪಟ್ಟವು.  ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಅಕ್ಷರಾಭ್ಯಾಸದ ಅಂಗವಾಗಿ ಮುತ್ತೈದೆಯರು ಸರಸ್ವತಿ ಸೇರಿದಂತೆ ಜಗನ್ಮಾತೆಯ ಪಾರಾಯಣ ಪಠಿಸಿದರು.  ಇದು ದೈವಭಕ್ತಿಯ ಪ್ರತೀಕವಾಗಿದೆ ಎಂಬುದು ದೇವಸ್ಥಾನದ ಅರ್ಚಕ ಹರೀಶ ಜೋಶಿ ಹೆಮ್ಮೆಯಿಂದ ಹೇಳಿದರು.

ಈ ಬಾರಿ ದಸರಾ ಪೋಷಕರ ಪಾಲಿಗೆ ತಂತಮ್ಮ ಮಕ್ಕಳ ಶಿಕ್ಷಣಕ್ಕೆ ಶುಭಾರಂಭ ಮಾಡಲು ಸಾಕ್ಷಿಯಾಯಿತು.  ಅಲ್ಲದೇ, ಪೋಷಕರ ಜೊತೆ ಮಕ್ಕಳೂ ಕೂಡ ಉತ್ಸಾಹದಿಂದ ಪಾಲ್ಗೋಂಡು, ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ಪಡೆಯಲು ನಾಡಹಬ್ಬ ಪೂರಕವಾಗಿದ್ದು ಗಮನಾರ್ಹವಾಗಿತ್ತು.

ಪೋಷಕರ ಇಚ್ಛೆಯಂತೆ ಅವರ ನವರಾತ್ರಿಯ ಶುಭದಿನದಂದು ಅಕ್ಷರಾಭ್ಯಾಸ ಆರಂಭಿಸಿರುವ ಈ ಮಕ್ಕಳೆಲ್ಲರೂ ಸುಸಂಸ್ಕೃತ ನಾಗರಿಕರಾಗಲಿ.  ಅವರ ಅಪ್ಪ ಅಮ್ಮಂದಿರಗಷ್ಟೇ ಅಲ್ಲ, ದೇಶದ ಕೀರ್ತಿ ಪತಾಕೆಯನ್ನೂ ಎತ್ತಿಯುವಂತಾಗಲಿ ಎಂದು ಹಾರೈಸೋಣ.

Leave a Reply

ಹೊಸ ಪೋಸ್ಟ್‌