ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ- ವಿಧಾನ ಸಭೆ ಚುನಾವಣೆ ಸೋಲಿನಿಂದ ಮೋದಿ, ಶಾ ಚೇತರಿಸಿಕೊಂಡಿಲ್ಲ- ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯದಲ್ಲಿ‌ ಬಿಜೆಪಿ ಚೇತರಿಕೆ ಕಾಣುವುದಿಲ್ಲ. ಹೀಗಾಗಿ ಆ ಪಕ್ಷದ ಹೈಕಮಾಂಡ್ ಇನ್ನೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅದು ಮುಳುಗುತ್ತಿರುವ ಹಡಗು ಅಲ್ಲ. ಈಗಾಗಲೇ ಮುಳುಗಿ ಹೋಗಿರುವ ಹಡಗು. ಹೀಗಾಗಿ ಈ ಪಕ್ಷಕ್ಕೆ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಈ ಹಿಂದೆ ಚೈತ್ರಾ ಕುಂದಾಪುರ ಮತ್ತು ಇತರರು ಟಿಕೆಟ್ ಕೊಡಿಸುವುದಾಗಿ ಮೋಸ ಮಾಡಿರುವ ಪ್ರಕರಣ ಎಲ್ಲರಿಗೂ ಗೊತ್ತಿದೆ. 40 ಪರ್ಸೆಂಟ್ ಕಮಿಷನ್ ಸರಕಾರವನ್ನು ನಾವು ನೋಡಿದ್ದೇವೆ. ಇಂದಿಗೂ ಕೂಡ ಆ ಪಕ್ಷಕ್ಕೆ ಓರ್ವ ಪ್ರತಿಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ. ಬಹುಷಃ ನರೇಂದ್ರ ಮೋದಿ ಮತ್ತು ಅಮೀತ ಶಾ ಅವರು ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಕರ್ನಾಟಕ ಬಿಜೆಪಿ ನಾಯಕರ ಮೇಲಿನ ಸಿಟ್ಟಿನಿಂದಾಗಿ ಪ್ರತಿಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷನ ನೇಮಕ ಮಾಡಿಲ್ಲ. ನಮ್ಮ‌ ರಾಜ್ಯದಲ್ಲಿ ಬಿಜೆಪಿ ಮುಗಿದು ಹೋದ ಕಥೆ. ರಾಜ್ಯದಲ್ಲಿ ತಲೆ ಎತ್ತಿ ಮೇಲೆ ಏಳಲಾರದ ಸ್ಥಿತಿಯಲ್ಲಿ ಬಿಜೆಪಿ‌ ಇದೆ.

ಬಿಜೆಪಿ- ಜೆಡಿಎಸ್ ಮೈತ್ರಿ ಪರಿಣಾಮ ಬೀರದು

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈವರೆಗೆ ಜೆಡಿಎಸ್ ಅನಧಿಕೃತವಾಗಿ ಬಿಜೆಪಿಯ ಬಿ ಟೀಂ ಆಗಿತ್ತು. ಈಗ ಅಧಿಕೃತವಾಗಿ ಬಿ ಟೀಂ ಆಗಿದೆ. ಹೀಗಾಗಿ ಜೆಡಿಎಸ್ ಪರವಾಗಿದ್ದ ಜಾತ್ಯತೀತ ಮತಗಳು ಕಾಂಗ್ರೆಸ್ ಪರವಾಗಿ ಬರಲಿವೆ.‌‌ ಈಗಾಗಲೇ ದುಸ್ಥಿತಿಯಲ್ಲಿರುವ ಬಿಜೆಪಿಗೆ ಈ ಮೈತ್ರಿಯಿಂದ ದೊಡ್ಡ ಹೊಡೆತ ಬೀಳಲಿದ್ದು ಅದು ಮತ್ತಷ್ಟು ದುಸ್ಥಿಗೆ ಹೋಗಲಿದೆ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರ

ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವೀಕ್ಷಕರಾಗಿದ್ದಾರೆ. ಅವರು ಜಿಲ್ಲೆಗೆ ಭೇಟಿ‌ ನೀಡಿ ಟಿಕೇಟ್ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಲಿದ್ದಾರೆ. ಅಲ್ಲದೇ, ಸರ್ವೆ ರಿಪೋರ್ಟ್ ಆಧರಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸಚಿವರು, ಶಾಸಕರು, ಸೋತ ಅಭ್ಯರ್ಥಿಗಳ, ಮಾಜಿ ಶಾಸಕರ, ಪದಾಧಿಕಾರಿಗಳ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅಂತಿಮವಾಗಿ ಕೆ. ಪಿ. ಸಿ. ಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಎ. ಐ. ಸಿ. ಸಿ ಅಧ್ಯಕ್ಷ‌ ಖರ್ಗೆ ಹಾಗೂ ಆಯ್ಕೆ ಸಮಿತಿ ಸಭೆ ಸೇರಿ ಅಭ್ಯರ್ಥಿಗಳ‌ನ್ನು ಆಯ್ಕೆ ಮಾಡಲಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ

ಅ. 30 ರಂದು ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಯಲ್ಲಿ‌ ಆಯಾ ಪಕ್ಷಗಳು ತಂತಮ್ಮ ಸದಸ್ಯರನ್ನು ರಕ್ಷಣೆ ಮಾಡಿಕೊಳ್ಲಬೇಕು. ಅವರಿಗೆ ತೊಂದರೆಯಾಗಬಾರದು. ಒತ್ತಾಯದಿಂದ ಯಾರನ್ನೂ ಕರೆದುಕೊಂಡು ಹೋಗಬಾರದು. ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣದಿಂದ ಒಂದು ಕಡೆ ಸೇರಿಸಿರುತ್ತಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರನ್ನು ಬಿಜೆಪಿಯವರು ವಿಶೇಷವಾಗಿ ನಗರದ ಶಾಸಕರು ಒಯ್ದು ಎಲ್ಲೋ ಒಂದು ಕಡೆ ಅಡಗುತಾಣದಲ್ಲಿ ಇಟ್ಟಿರುವುದು ತಿಳಿದು ಬಂದಿದೆ. ಬಿಜೆಪಿಯವರು ಏನು ಮಾಡಿದರೂ ಪ್ರಯೋಜನ ಆಗುವುದಿಲ್ಲ. ಅದು ಬಿಜೆಪಿಯರು ಮಾಡಿರುವ ದೊಡ್ಡ ಕೆಲಸ ಅಲ್ಲ. ನಮಗೂ ಮಾಡಲು ಬರುತ್ತದೆ. ಆದರೆ, ಆ ಕೆಲಸವನ್ನು ನಾವು ಮಾಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸೂಕ್ತ ವೇದಿಕೆಯಾಗಿದೆ. ಯಾವ ಪಕ್ಷಕ್ಕೆ ಮೇಯರ್ ಸ್ಥಾನ‌ ಸಿಗಲಿದೆ ಎಂಬುದು ಚುನಾವಣೆ ಬಳಿಕ ಗೊತ್ತಾಗಲಿದೆ ಎಂದು ಸಚಿವರ ತಿಳಿಸಿದರು.

ನವರಸಪುರ ಉತ್ಸವ ವಿಚಾರ

ನವರಸಪುರ ಉತ್ಸವ ಆಚರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಂ. ಬಿ. ಪಾಟೀಲ‌ ಅವರಯ, ಬರದ ಹಿನ್ನೆಲೆಯಲ್ಲಿ‌ ಈ ಕುರಿತು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು‌ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌