ಹೆಸರು ಬದಲಾವಣೆ, ಜಿಲ್ಲೆ ವಿಭಜನೆ, ಮೆಟ್ರೋಗೆ ಹೊಸ ಹೆಸರು ಕುರಿತು ಸಚಿವ ಎಂ. ಬಿ. ಪಾಟೀಲ ಪ್ರತಿಕ್ರಿಯೆ

ವಿಜಯಪುರ: 12ನೇ ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ವಿಚಾರದಿಂದ ಹಿಡಿದು ಹೊಸ ಹೆಸರಿಡುವ ಕುರಿತು ಕೇಳಲಾದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನಮ್ಮ ಜಿಲ್ಲೆಯ ಹೆಸರು ಬಿಜಾಪುರದಿಂದ ವಿಜಯಪುರ ಎಂದು ಬದಲಾಯಿಸಲಾಗಿದೆ.  79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿರ್ಣಯದಂತೆ ಅಂದು ಹೆಸರು ಬದಲಾಯಿಸಲಾಯಿತು.  2ನೇ ಶತಮಾನದಲ್ಲಿ ವಿಜಯಪುರ ಹೆಸರಿತ್ತು.  ಅಲ್ಲದೇ, ಈ ಹೆಸರಿನ ಬಗ್ಗೆ ಇತರ ಎಲ್ಲ ವಿಷಯಗಳನ್ನು ಸಂಗ್ರಹಿಸಿ ಹಾಗೂ ಅರ್ಹತೆಯ ವಿಚಾರಗಳನ್ನು ಪರಿಗಣಿಸಿ ಅಂದು ವಿಜಯಪುರ ಎಂದು ಹೆಸರನ್ನು ಇಡಲಾಯಿತು ಎಂದು ಸ್ಪಷ್ಟಪಡಿಸಿದರು.

ಬಸವೇಶ್ವರ ಜಿಲ್ಲೆ ಪ್ರಸ್ತಾವನೆ ವಿಚಾರ

ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಹೆಸರಿಡಬೇಕು ಎಂದು ಕೆಲವು ಸಂಘ- ಸಂಸ್ಥೆಗಳು ಮತ್ತು ಸಾರ್ವಜನಿಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.  ಜಿಲ್ಲೆಯ ಹೆಸರು ಬದಲಾವಣೆ ರಾಜಕಾರಣಿಗಳಿಂದ ಬಂದಿಲ್ಲ.  ಅಲ್ಲದೇ, ಬಸವೇಶ್ವರರ ಹೆಸರು ಇಡುವುದಕ್ಕೆ ಯಾರೊಬ್ಬರ ವಿರೋಧವೂ ಇಲ್ಲ.  ಬಸವಣ್ಣನವರ ಕೇವಲ ವಿಜಯಪುರ ಜಿಲ್ಲೆಗೆ ಸೀಮಿತವಾಗಿಲ್ಲ.  ಅವರನ್ನು ಜಿಲ್ಲೆಗೆ ಸೀಮಿತವಾಗಿಸಬಾರದು.  ಅವರು ವಿಶ್ವಗುರು.  ಈ ಕುರಿತು ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು

ಸಂಪೂರ್ಣ ಬೆಂಗಳೂರು ಮೆಟ್ರೋಗೆ ಬಸವೇಶ್ವರ ಅಥವಾ ಬಸವೇಶ್ವರ, ನಮ್ಮ ಬಸವೇಶ್ವರ ಮೆಟ್ರೋ ಇಡುವ ಹೇಳಿಕೆಗೆ ಬದ್ಧನಾಗಿದ್ದೇನೆ.  ಬೆಂಗಳೂರು ಏರಪೋರ್ಟ್ ಗೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಇಡಲಾಗಿದೆ.  ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಅಲ್ಲಿನ ರಾಯಭಾರಿಯಾಗಿದ್ದಾರೆ.  ಅದೇ ರೀತಿ ಬಸವೇಶ್ವರರು ನಮ್ಮ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸುವ ಕುರಿತು ಸಿಎಂ ಜೊತೆ ಚರ್ಚಸಲಾಗುವುದು.  ಸಾಧಕ- ಬಾಧಕಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆ ವಿಭಜನೆ, ಇಂಡಿ ಹೊಸ ಜಿಲ್ಲೆ ಬೇಡಿಕೆ ವಿಚಾರ

ಜಿಲ್ಲೆಗಳ ವಿಭಜನೆ ಮತ್ತು ಹೊಸ ಜಿಲ್ಲೆಗಳ ರಚನೆ ಕುರಿತು ಸರಕಾರ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ.  ಈ ಕುರಿತು ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಬಸವ ಜನ್ಮಸ್ಥಳ ಅಭಿವೃದ್ಧಿ ಪ್ರಾಧಿಕಾರ ವಿಚಾರ

ಬಸವೇಶ್ವರರ ಜನ್ಮಸ್ಥಳ ಬಸವನ ಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.  ಈ ಹಿಂದೆ ನಾನು ಜಲಸಂಪನ್ಮೂಲ‌ ಸಚಿವನಾಗಿದ್ದಾಗ ರೂ. 139 ಕೋ. ಮ್ಯೂಸಿಯಂ ಗಾಗಿ ನೀಡಿದ್ದೆ.  ಬಸವಣ್ಣನವರು ವಿಶ್ವಗುರು.  ಬಸವಾದಿ‌ ಶರಣರ ಬಗ್ಗೆ ಜಾಗತಿಕ ಸಿದ್ಧಾಂತವಾಗಬೇಕು.  ಎಲ್ಲ‌ ಬಗೆಯ ಸಮಾನತೆ ಸಾರಿ, ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಕಾಯಕಕ್ಕೆ ಗೌರವ ಕೊಡುವ ಪರಿಕಲ್ಪನೆಯನ್ನು ಅನುಭವ ಮಂಟಪದ ರೂಪದಲ್ಲಿ ಜಾರಿಗೆ ತಂದಿದ್ದಾರೆ.  ಈ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಹೆಸರು ಬದಲಾವಣೆ, ಜಿಲ್ಲೆ ವಿಭಜನೆ, ಮೆಟ್ರೋ ಹೆದರು, ಬಸವೇಶ್ವರರು ಸಾಂಸ್ಕೃತಿಕ ರಾಯಭಾರಿಗಳ ವಿಚಾರ ಕುರಿತು ಸಿಎಂ ಜೊತೆ ಚರ್ಚೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಮತ್ತೋಮ್ಮೆ ಸ್ಪಷ್ಟಪಡಿಸಿದರು.

ಮಹಾಗಡಿ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆ ಬೇಡಿಕೆ ವಿಚಾರ

ಮಹಾರಾಷ್ಟ್ರದಲ್ಲಿರುವ ಗಡಿ ಗ್ರಾಮಗಳಲ್ಲಿ ಅಭಿವೃದ್ಧಿಯಾಗಿಲ್ಲ.  ಹೀಗಾಗಿ ಅಲ್ಲಿನ ಜನ ತಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಮಹಾಜನ ವರದಿ, ಗಡಿ ವಿವಾದ ವಿಷಯಗಳನ್ನು ಸರಕಾರಗಳೊಂದಿಗೆ ಮಾತುಕತೆ ನಡೆಯಬೇಕು ಎಂದು ಅವರು ಹೇಳಿದರು.

ರಾಜ್ಯಕ್ಕೆ ಅಂಬೇಡ್ಕರ ಹೆಸರಿಡುವ ವಿಚಾರ

ಕರ್ನಾಟಕಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬುದ್ಧ ನಂತರ ಬಸವೇಶ್ವರರು ಮತ್ತು ಅಂಬೇಡ್ಕರರು ಶ್ರೇಷ್ಠರಾಗಿದ್ದಾರೆ.  ಇದೆಲ್ಲವನ್ನೂ ಸರಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ತಿಕೋಟಾ ಇನ್ನೆರಡು ದಿನಗಳಲ್ಲಿ ಬರಪೀಡಿತ ಘೋಷಣೆ ನಿರೀಕ್ಷೆಯಿದೆ.  ಮಹಾನಗರ ಪಾಲಿಕೆ ಚುನಾವಣೆ ಪ್ರಕರಣ ನ್ಯಾಯಾಲಯದಲ್ಲಿದೆ.  ಯತ್ನಾಳ ಅವರ ಪಕ್ಷದ ಸದಸ್ಯರೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಾಹುಲ ಶಿಂಧೆ, ಎಸ್ಪಿ ರಿಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌