ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ 25 ಲೋಕಸಭೆ ಸೀಟುಗಳಲ್ಲಿ ಬಿಜೆಪಿ ಗೆಲುವು- ನಮ್ಮವರೇ ಪ್ರತಿಪಕ್ಷದ ನಾಯಕರಾಗ್ತಾರೆ- ಗೋವಿಂದ ಕಾರಜೋಳ

ವಿಜಯಪುರ: ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸ್ವಾಗತಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ದೀಪಾವಳಿ ಶುಭಾಷಯ ಕೋರಿದರು.  ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದ್ನನು ಅವರು ಸ್ವಾಗತಿಸಿದರು.

ಬಿಜೆಪಿ ಯುವಕರಿಗೆ ಪ್ರೋತ್ಸಾಹ ಕೊಡುತ್ತದೆ ಎಂಬುದನ್ನು ಹೈಕಮಾಂಡ್ ಮತ್ತೆ ಎತ್ತಿ ತೋರಿಸಿದೆ.  ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ.  ಬಿ. ಎಸ್. ವೈ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿದೆ.  ಇನ್ನು ಮುಂದೆ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಯುವಕರು ಸಂಘಟಿತರಾಗಲಿದ್ದು, ರಾಜ್ಯದಲ್ಲಿ ಬಿಜೆಪಿ 25ಕ್ಕೂ ಹೆಚ್ಚು ಲೋಕಸಭೆ ಸೀಟುಗಳಲ್ಲಿ ಗೆಲವು ಸಾಧಿಸಲಿದೆ.  ಅಲ್ಲದೇ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಬಿಜೆಪಿ ಯಾವಾಗಲೂ ಯುವಕರಿಗೆ ಅವಕಾಶ ಕೊಡುವ ಕೆಲಸ ಮಾಡುತ್ತದೆ.  ಈಗಷ್ಟೆ ವಿಜಯೇಂದ್ರ ಫೋನ್ ಮಾಡಿದ್ದರು.  ನವೆಂಬರ್ 15ರಂದು ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯ ವಿಚಾರ

ಇದೇ ವೇಳೆ, ಬಿ. ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಇದ್ದವರು, ಚುನಾವಣೆ ರಾಜಕಾರಣಲ್ಲಿ ಇದ್ದವರು, ಹುದ್ದೆಗಳನ್ನು ಸಹಜವಾಗಿಯೇ ಅಪೇಕ್ಷೆ ಪಡುತ್ತಾರೆ.  ಕಳೆದ ಬಾರಿ ಚುನಾವಣೆಯಲ್ಲಿ ನಾವು ಸರಕಾರವನ್ನು ಕಳೆದುಕೊಂಡಿದ್ದೇವೆ.  ಹೀಗಾಗಿ ಅಳೆದು ತೂಗಿ ಹೈಕಮಾಂಡ್ ಒಂದು ನಿರ್ಧಾರ ಮಾಡಿರುತ್ತದೆ ಎಂದು ಅವರು ತಿಳಿಸಿದರು.

ಹೈಕಮಾಂಡ್ ನಿರ್ಧಾರವನ್ನು ನಾವೆಲ್ಲರೂ ಬೆಂಬಲಿಸಬೇಕು.  ಅಸಮಾಧಾನ ಇದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಕಾಗುತ್ತದೆ.  ಎಲ್ಲೂ ಭಿನ್ನಾಭಿಪ್ರಾಯ ಇಲ್ಲ. ಒಂದೆರೆಡು ದಿನ ಅಸಮಾಧಾನ ಇರುತ್ತೆದೆ.  ಅದೆಲ್ಲವೂ ಸರಿಯಾಗುತ್ತದೆ ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ಸಿನವರು ಸುಳ್ಳು ಗ್ಯಾರೆಂಟಿ ಕೊಟ್ಟಿದ್ದಾರೆ.  ಅವರ ಪ್ರಣಾಳಿಕೆಯಲ್ಲಿ ಇರುವುದು ಸುಳ್ಳು ಹೇಳಿದ್ದಾರೆ.  ಯುವಕರಿಗೆ ಹಣ ಕೊಡುತ್ತೇವೆ ಎಂದರೂ ಕೊಡಲಿಲ್ಲ.  ಅದೇ ಯುವಕರು ಬಡಿಗೆ ತೆಗೆದುಕೊಂಡು ಓಡಿಸುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಜನರೇ ಇವರನ್ನು ಓಡಿಸುತ್ತಾರೆ ಎಂದು ಅವರು ಹೇಳಿದರು.

ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ 

ರಾಜ್ಯದಲ್ಲಿ ಬಿಜೆಪಿ ಇನ್ನೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ದೊಡ್ಡ ಪಕ್ಷವಾಗಿ, ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ.  ಬಿಜೆಪಿಯವರೇ ಪ್ರತಿಪಕ್ಷದ ನಾಯಕ ಆಗುತ್ತಾರೆ.  ಮೈತ್ರಿಯಲ್ಲಿ ಅಧಿಕಾರ ಹಂಚಿಕೆ ಮಾಡಬಹುದು.  ಮೈತ್ರಿಯಲ್ಲಿ ಪ್ರತಿಪಕ್ಷದ ಸ್ಥಾನ ಕೊಡಲು ಬರುವುದಿಲ್ಲ.  ಹೀಗಾಗಿ ಬಿಜೆಪಿಯವರೇ ಶೀಘ್ರದಲ್ಲೇ ಪ್ರತಿಪಕ್ಷದ ನಾಯಕರಾಗುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ಲೋಕಸಭೆಗೆ ಸ್ಪರ್ಧೆ ವಿಚಾರ

ವಿಜಯಪುರ ಲೋಕಸಭೆಯಿಂದ ಸ್ಪರ್ಧೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ.  ಸಿದ್ರಾಮಯ್ಯನವರು ಸುಳ್ಳು ಗ್ಯಾರೆಂಟಿ ಕೊಟ್ಟಿದ್ದಾರೆ.  ತಾಕತ್ ಇದ್ದರೆ ಲೋಕಸಭೆ ಚುನಾವಣೆ ಎದುರಿಸಿ ತೋರಿಸಲಿ ಎಂದು ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೆ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌