ಅಂಧ ಅನಾಥ ವೃದ್ಧೆಯ ಬಾಳಿಗೆ ಬೆಳಕಾದ ಡಾ. ಪ್ರಭುಗೌಡ ಲಿಂಗದಳ್ಳಿ- ಅಜ್ಜಿಗೆ ದೀಪಾವಳಿ ಸಂದರ್ಭದಲ್ಲಿ ದೃಷ್ಠಿ ನೀಡಿದ ವೈದ್ಯ

ವಿಜಯಪುರ: ಕಣ್ಣು ಕಾಣದ ಹಿನ್ನೆಲೆಯಲ್ಲಿ ಸಂಬಂಧಿಕರು ಬಿಟ್ಟುಹೋದ ಅಜ್ಜಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಠಿ ನೀಡುವ ಮೂಲಕ ಬಸವನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅನಾಥ ವೃದ್ಧೆಯ ಜೀವದಲ್ಲಿ ದೀಪಾವಳಿ ಬೆಳಕು ಮೂಡಿಸಿದ್ದಾರೆ.

ಇದೀಗ ಅಜ್ಜಿ ಚೇತರಿಸಿಕೊಂಡಿದ್ದು, ಆಕೆಯನ್ನು ತವರೂರಿಗೆ ಕಳುಹಿಸಿಕೊಟ್ಟಿರುವ ವೈದ್ಯರ ಮಾನವೀಯತೆ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.  ಅಷ್ಟೇ ಅಲ್ಲ, ಡಾ. ಪ್ರಭುಗೌಡ ಲಿಂಗದಳ್ಳಿ ಅವರು ತಮ್ಮ ಆಸ್ಪತ್ರೆಯ ಸಿಬ್ಬಂದಿಯಾದ ದತ್ತನಗೌಡ ಚೋಕಾವಿ ಅವರನ್ನು ಅಜ್ಜಿಯ ಜೊತೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗೆ ಕಳುಹಿಸಿಕೊಟ್ಟಿದ್ದು, ಅಜ್ಜಿಯ ಹತ್ತಿರದ ಸಂಬಂಧಿ ರುದ್ರಪ್ಪ ಕುಂಬಾರ ಎಂಬುವರ ಬಳಿಗೆ ಬಿಟ್ಟು ಬಂದಿದ್ದಾರೆ.

ಅಜ್ಜಿಯ ಕಣ್ಣುಗಳಿಗೆ ಕನ್ನಡಕ ಹಾಕುತ್ತಿರುವ ಡಾ. ಪ್ರಭುಗೌಡ ಲಿಂಗದಳ್ಳಿ

ಪ್ರಕರಣದ ಹಿನ್ನೆಲೆ

ನಾಲ್ಕಾರು ದಿನಗಳ ಹಿಂದೆ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ವಿಜಯಪುರ ನಗರದ ಹೋಟೆಲೊಂದಕ್ಕೆ ತೆರಳಿದ್ದರು.  ಅಲ್ಲಿದ್ದ ಅಂಧ ವೃದ್ಧೆಗೆ ವ್ಯಕ್ತಿಯೊಬ್ಬ ತಿಂಡಿ ತಿನ್ನಿಸುತ್ತಿದ್ದಾಗ, ಸದಾ ಅಂಧರ ಬಾಳಿಗೆ ಬೆಳಕು ನೀಡಲು ಪರಿತಪಿಸುವ ವೈದ್ಯರ ದೃಷ್ಠಿ ಅಜ್ಜಿಯ ಕಡೆಗೆ ಹೋಗಿದೆ.  ಆ ವೃದ್ಧೆಗೆ ಎರಡೂ ಕಣ್ಣುಗಳು ಕಾಣದ ವಿಷಯ ತಿಳಿದ ವೈದ್ಯರು ನಮ್ಮಾಸ್ಪತ್ರೆಗೆ ಬಂದು ಬಿಡಿ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾರೆ.

ನಂತರ ವಿಚಾರಿಸಿದಾಗ ಅಜ್ಜಿಯ ಜೊತೆಗಿದ್ದ ರಮೇಶ ರತ್ನಾಕರ ಹೆಸರಿನ ಟ್ಯಾಕ್ಸಿ ಚಾಲಕ ಅಜ್ಜಿ ತನಗೆ ಹೇಗೆ ಸಿಕ್ಕಳು ಎಂಬುದರ ಕುರಿತು ಮಾಹಿತಿ ನೀಡಿದ್ದಾನೆ.  ತನ್ನ ಟ್ಯಾಕ್ಸಿಯೊಂದಿಗೆ ವಿಜಯಪುರ ನಗರದ ಇಬ್ರಾಹಿಂಪೂರ ರೇಲ್ವೆ ಸೇತುವೆ ನಿಂತಾಗ ಅಜ್ಜಿಯೊಬ್ಬಳು ಅಳುತ್ತ ನಿಂತಿದ್ದಳು.  ಕೈಯಲ್ಲಿ ಚೀಲ ಮಾತ್ರವಿತ್ತು.  ಆಕೆಯ ಬಳಿ ಹೋಗಿ ವಿಚಾರಿಸಿದಾಗ ತನಗೆ ಕಣ್ಣು ಕಾಣಿಸುವುದಿಲ್ಲ.  ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದ ತನ್ನ ಸಹೋದರಿ ಪಾರವ್ವ ಎಂಬುವಳು ಇಲ್ಲಿಗೆ ಬಿಟ್ಟು ಹೋಗಿದ್ದಾಳೆ.  ಜೊತೆಗೆ ನನ್ನ ಬಳಿ ಇದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಮಾಹಿತಿ ನೀಡಿದ್ದಾಳೆ.  ಆಗ ರಮೇಶ ರತ್ನಾಕರ ಅಜ್ಜಿಯನ್ನು ಹೋಟೆಲೊಂದಕ್ಕೆ ಕರೆದುಕೊಂಡು ಹೋಗಿ ಊಟ ಮಾಡಿಸುವಾಗ ಅದೇ ಹೋಟೇಲಿಗೆ ಬಂದಿದ್ದ ಡಾ. ಪ್ರಭುಗೌಡ ಲಿಂಗದಳ್ಳಿ ಅಜ್ಜಿಯನ್ನು ಪರಿಕ್ಷಿಸಿ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದರೆ ದೃಷ್ಟಿ ಸರಿಯಾಗುತ್ತದೆ ಎಂದು ಹೇಳಿ ತಮ್ಮ ಕಾರಿನಲ್ಲಿಯೇ ಆಕೆಯನ್ನು ತಮ್ಮ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಬಳಿಕ ಅಜ್ಜಿಯನ್ನು ಕೇಳಿದಾಗ ತನ್ನ ಹೆಸರು ಗೌರಮ್ಮ ಕುಂಬಾರ(70) ಎಂಬ ಮಾಹಿತಿ ನೀಡಿದ್ದಾಳೆ.  ಒಬ್ಬಳೇ ಯಾಕೆ ಬಂದಿದ್ದೀಯಾ ಎಂದು ಪ್ರಶ್ನಿಸಿದಾಗ ನನಗೆ ಎರಡೂ ಕಣ್ಣುಗಳು ಕಾಣುವುದಿಲ್ಲ.  ನನ್ನ ಅಕ್ಕ ಪಾರವ್ವ ಕಣ್ಣಿನ ಚಿಕಿತ್ಸೆ ಕೊಡಿಸುವುದಾಗಿ ಕರೆದುಕೊಂಡು ಬಂದು ಇಲ್ಲಿಯೇ ಬಿಟ್ಟು ಹೋಗಿದ್ದಾಳೆ ಎಂದು ಮಾಹಿತಿ ನೀಡಿದ್ದಾಳೆ.

ಅನುಗ್ರಹ ಆಸ್ಪತ್ರೆಗೆ ದಾಖಲಾದ ಅಜ್ಜಿಯ ಎರಡೂ ಕಣ್ಣುಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಪ್ರಭುಗೌಡ ಲಿಂಗದಳ್ಳಿ, ಅಜ್ಜಿಗೆ ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ.  ಈ ಮೂಲಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಧಕಾರದ ಬದುಕು ಸಾಗಿಸುತ್ತಿದ್ದ ಗೌರಮ್ಮ ಕುಂಬಾರಳ ಜೀವನ ಬೆಳಕಿನೆಡೆಗೆ ಸಾಗುವಂತೆ ಮಾಡಿದ್ದಾರೆ.

ಕತ್ತಲಿನ ಜಗತ್ತಿನಲ್ಲಿ ಬದುಕುತ್ತಿದ್ದ ಅಜ್ಜಿಗೆ ಈಗ ದೃಷ್ಠಿ ಬಂದಿರುವುದು ಎಲ್ಲಿಲ್ಲದ ಹಿಗ್ಗು ತಂದಿದೆ.  ವೈದ್ಯರಿಗೆ ಕೈಮುಗಿದು ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಿದ್ದಾಳೆ.  ತನಗೆ ಎಲ್ಲ ವಸ್ತುಗಳು ಕಾಣುತ್ತಿರುವುದರಿಂದ ಸಂತಸಗೊಂಡು ಮಕ್ಕಳಂತೆ ಖುಷಿ ಪಟ್ಟಿದ್ದಾಳೆ.  ತನ್ನ ಬಾಳಿಗೆ ಬೆಳಕು ನೀಡಿದ ಡಾ. ಪ್ರಭುಗೌಡ ಲಿಂಗದಳ್ಳಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ಅಜ್ಜಿ, ವೈದ್ಯರ ಬದುಕು ಸದಾ ಸುಖಮಯವಾಗಿರಲಿ.  ಸಾಮಾಜಿಕವಾಗಿ ಮತ್ತಷ್ಟು ಸೇವೆ ಮಾಡುವಂತಾಗಲಿ ಎಂದು ಹರಸಿದ್ದಾಳೆ.  ಅಷ್ಟೇ ಅಲ್ಲ, ಆಸ್ಪತ್ರೆಯ ದತ್ತು ಹೊಸಮಠ, ಶರಣು ಕೊಂಡಗೂಳಿ, ಸವಿತಾ ಕೊಂಡಗೂಳಿ, ಸಂಗಮೇಶ ಪಾಟೀಲಮುಂತಾದ ಸಿಬ್ಬಂದಿಯ ಪ್ರೀತಿಯ ಆರೈಕೆಗೆ ಧನ್ಯವಾದ ಹೇಳಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಪ್ರಭುಗೌಡ ಲಿಂಗದಳ್ಳಿ, ಪೋಷಕರು ತಮ್ಮ‌ ಮಕ್ಕಳಿಗಾಗಿ ಜೀವನವಿಡೀ ಶ್ರಮಿಸುತ್ತಾರೆ.  ಆದರೆ, ವೃದ್ದಾಪ್ಯದಲ್ಲಿ ಒಬ್ಬಂಟಿಯಾಗಿ ಅದರಲ್ಲೂ ಕಣ್ಣು ಕಾಣದೆ ಬದುಕು ಸವೆಸುವುದು ಅತ್ಯಂತ ಕಠಿಣವಾಗಿರುತ್ತದೆ.  ಮಕ್ಕಳಿಲ್ಲದಿದ್ದರೆ ಸಂಬಂಧಿಕರಾದರೂ ಇಂಥ ಜನರ ಕಡೆಗೆ ಗಮನ ಹರಿಸಿ ಅವರ ಬಾಳಿಗೆ ಊರುಗೋಲಾಗಬೇಕು ಎಂದು ತಿಳಿಸಿದ್ದಾರೆ.

ಡಾ. ಪ್ರಭುಗೌಡ ಪಾಟೀಲ ನೇತ್ರ ಚಿಕಿತದ್ಸೆಯ ಮೂಲಕ ಇಡೀ ಉತ್ತರ ಕರ್ನಾಟಕವಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಹೆಸರು ಮಾಡಿದ್ದು, ಕಳೆದ 20 ವರ್ಷಗಳಲ್ಲಿ 35 ರಿಂದ 40 ಸಾವಿರ ಜನರಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೆಳಕು ನೀಡಿದ್ದಾರೆ.  ಅಷ್ಟೇ ಅಲ್ಲ, ಅನುಗ್ರಹ ಆಸ್ಪತ್ರೆಯ ಮೂಲಕ ಜಿಲ್ಲಾದ್ಯಂತ ನಾನಾ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕವೂ ಜನಪ್ರೀಯರಾಗಿದ್ದಾರೆ.  ಈ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯ ಸರಕಾರ 2021ರಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.  ನಾನಾ ಸಂಘ- ಸಂಸ್ಥೆಗಳು ನೀಡಿರುವ ಪ್ರಶಸ್ತಿ ಮತ್ತು ಸನ್ಮಾನಗಳಿಗೆ ಲೆಕ್ಕವೇ ಇಲ್ಲದಷ್ಟು ಮಾನ್ಯತೆ ಈ ಆಸ್ಪತ್ರೆಗೆ ಸಿಕ್ಕಿದೆ.

ವೃತ್ತಿಯಲ್ಲಿ ಉತ್ತುಂಗದಲ್ಲಿದ್ದರೂ, ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ ಸೇವೆಯಲ್ಲಿ ಎನಗಿಂತ ಕಿರಿಯಲಿಲ್ಲ ಎಂಬ ಮನೋಭಾವದಿಂದ ಅಂಧರ ಬಾಳಿಗೆ ಬೆಳಕಾಗುತ್ತಿರುವ ಡಾ. ಪ್ರಭುಗೌಡ ಲಿಂಗದಳ್ಳಿ ಅವರ ಸೇವೆಗೆ ಹ್ಯಾಟ್ಸಾಫ್ ಹೇಳಲೇಬೇಕು.

Leave a Reply

ಹೊಸ ಪೋಸ್ಟ್‌