ವೃಕ್ಷತ್ಥಾನ್ ಹೆರಿಟೇಜ್ ರನ್- 2023: ಸಾರ್ವಜನಿಕರು, ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಕೈ ಜೋಡಿಸಿ ಯಶಸ್ವಿಗೊಳಿಸಿ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವವಹನ್ನು ಸಾರುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ನಗರದಲ್ಲಿ ಡಿ. 24ರಂದು ನಡೆಯಲಿರುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನ್ನು ಜಿಲ್ಲೆಯ ನಾನಾ ಸಂಘ ಸಂಸ್ಥೆಗಳ ಸಹಾಯ, ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ,  ಮೂಲಸೌಕರ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.  
ನಗರದ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಾನಾ ಸಂಘ- ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯೀಕರಣ ಅಭಿವೃದ್ಧಿಪಡಿಸುವುದರ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವವಹನ್ನು ಸಾರುವ ನಿಟ್ಟಿನಲ್ಲಿ  ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋಥಾನ್ ಹೆರಿಟೇಜ್ ರನ್-2023 ಹಮ್ಮಿಕೊಂಡಿದ್ದು,  ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ಯ ಅಗತ್ಯವಾಗಿದ್ದು, ವಿವಿಧ ಸಂಘ-ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ಹೆರಿಟೇಜ್ ರನ್ ಆಯೋಜನೆಗೆ ಕೈ ಜೋಡಿಸಬೇಕು. ಈ ಹೆರಿಟೇಜ್ ರನ್ ಸಿದ್ದೇಶ್ವರ ಶ್ರೀಗಳಿಗೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಈ ಓಟದಲ್ಲಿ ನಾನು ಭಾಗವಹಿಸುತ್ತಿದ್ದು, ಸಾರ್ವಜನಿಕರು -ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿ ವೃಕ್ಷತ್ಥಾನ್ ಹೆರಿಟೇಜ್ ರನ್- 2023 ಪೂರ್ವಭಾವಿ ಸಭೆ ನಡೆಯಿತು
ಈ ಕಾರ್ಯಕ್ರಮ ಪಕ್ಷಾತೀತವಾದ ಕಾರ್ಯಕ್ರಮ.  ಯಶಸ್ವಿಗಾಗಿ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ. ಪ್ರತಿಯೊಬ್ಬರು ಸ್ವಯಂ ಇಚ್ಛೆಯಿಂದ  ಭಾಗವಹಿಸಬೇಕು. ಜಿಲ್ಲೆಯ ಹಸರೀಕರಣ ಹಾಗೂ ಐತಿಹಾಸಿಕ ಸ್ಮಾರಕಗಳ ಮಹತ್ವ ವಿಶ್ವದಾದ್ಯಂತ ಸಾರುವ ಈ ವಿಶೇಷವಾದ ಕಾರ್ಯಕ್ರಮಕ್ಕೆ  ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಸ್ವಯಂ ಇಚ್ಛೆಯಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ಈ ಬಾರಿ ವೃಕ್ಷೋತ್ಥಾನ ಹೆರಿಟೇಜ್ ರನ್ ವೃತ್ತಿಪರವಾಗಿ ನಿರ್ವಹಿಸಲಾಗುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ನೊಂದಣಿಗೆ ಹೆಚ್ಚಿನ ಒತ್ತು ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಬೇಕು. ಹೆರಿಟೇಜ್ ರನ್ ಕುರಿತು ಪ್ರಚಾರ ಕೈಗೊಂಡು ನೋಂದಣಿಗೆ ಕ್ರಮ ವಹಿಸಬೇಕು. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದ್ದು,   ಬಿಎಲ್‍ಡಿಇದಿಂದ 10 ಲಕ್ಷ ರೂ. ಒದಗಿಸಲಾಗುವುದು ಎಂದು ಘೋಷಿಸಿದರು. ಇತರೆ ಸಂಘ-ಸಂಸ್ಥೆಗಳು ಸಹ  ಸಹಾಯ ಸಹಕಾರ ಒದಗಿಸಲು ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು. ಸರ್ಕಾರಿ  ಸಂಸ್ಥೆಗಳಾದ ಎಂಎಸ್‍ಐಎಲ್, ಕೆಎಸ್‍ಡಿಎಲ್, ಇಂಡಸ್ಟ್ರೀಯಲ್ ಸೇರಿದಂತೆ ವಿವಿಧ  ಸಂಸ್ಥೆಗಳಿಂದ ಸಹಾಯ ಒದಗಿಸಲಾಗುವುದು ಎಂದು ಅವರು ಹೇಳಿದರು.
ಐತಿಹಾಸಿಕ ಸ್ಮಾರಕಗಳ ಮಹತ್ವದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮರ ಬೆಳೆಸುವ ಪರಿಸರ ಉಳಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಮಾರಕಗಳ ಸಂರಕ್ಷಣೆ ಮಹತ್ವ ಈ ಮೂಲಕ ಸಾರಲಾಗುತ್ತಿದೆ ವೃಕ್ಷೋತ್ಥಾನ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಜಲತಜ್ಞರಾದ ರಾಜೇಂದ್ರ ಸಿಂಗ್ ಅವರು ಭಾಗವಹಿಸಲಿದ್ದಾರೆ.  ಅದರಂತೆ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಖಾತೆ ಸಚಿವರೂ ಸಹ ಭಾಗವಹಿಸಲಿದ್ದಾರೆ. ಜಿಲ್ಲೆಯ ಜನತೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅರಣ್ಯೀಕರ ಅಭಿವೃದ್ದಿ ನಿಟ್ಟಿನಲ್ಲಿ ನಿರಂತರವಾಗಿ ಹೆರಿಟೇಜ್ ರನ್ ಆಯೋಜನೆಯಾಗಬೇಕು.  ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವಂತೆ ಪ್ರಚಾರ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಈ ಮೊದಲು ಕೇವಲ ದೇಶದ ದೊಡ್ಡ, ದೊಡ್ಡ ನಗರಗಳಲ್ಲಿ ಆಯೋಜಿಸಲಾಗುತ್ತಿದ್ದ ಹೆರಿಟೇಜ್ ರನ್ ಮ್ಯಾರಾಥಾನ್ ಕಳೆದ 2017ರಿಂದ ವಿಜಯಪುರದಲ್ಲಿ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಈ ಬಾರಿ ವೃತ್ತಿಪರತೆಯಾಗಿ  ಓಟಗಾರರು ಓಡಿದ ಮಾಹಿತಿ ಎಷ್ಟು ಕೀ.ಮೀ., ಎಷ್ಟು ನಿಮಿಷದಲ್ಲಿ ಓಟಗಾರ ಓಡಿದ್ದಾರೆ ಎಂಬುದರ ಕುರಿತು ಓಟ ಮುಗಿದ ನಂತರ ಮೊಬೈಲ್ಗೆ ಸಂದೇಶ ರವಾನೆಯಾಗುವ ಡಿಜಿಟಲ್ ಚಿಪ್‍ನ್ನು ಬಳಸಿ ಶಿಸ್ತುಬದ್ಧವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಡಿ. 24 ರಂದು ನಡೆಯುವ ಈ ಕಾರ್ಯಕ್ರಮ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಗೊಂಡು ನಗರದ ನಾನಾ ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಮಾರ್ಗವಾಗಿ ಪುನಃ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ.   ಪುರುಷ ಹಾಗೂ ಮಹಿಳೆಯರಿಗಾಗಿ 21 ಕಿ.ಮೀ., 10 ಕಿ.ಮೀ., 5 ಕಿ.ಮೀ. 3.5 ಕಿ.,ಮೀ. ಹಾಗೂ 8 ವರ್ಷದಿಂದ 12 ವರ್ಷದವರೆಗಿನ  ಮಕ್ಕಳಿಗಾಗಿ 800 ಮೀಟರ್ ಹಾಗೂ ಚಿಕ್ಕ ಮಕ್ಕಳಿಗೆ ಫನ್ ರನ್ ಆಯೋಜಿಸಲಾಗಿದೆ ಎಂದು ಹೇಳಿದರು.
ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಪ್ರತಿ 3 ಕಿ.ಮೀ.ಗೆ ಒಂದರಂತೆ ಒಟ್ಟು 7 ಹೈಡ್ರೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಓಟಗಾರರಿಗೆ, ಫಿಜಿಯೋಥೆರಪಿ, ತಾಜಾ ಹಣ್ಣುಗಳು, ಬಾಳೆಹಣ್ಣು, ನೋವು ನಿವಾರಕ ಔಷಧಿ, ಪ್ರಥಮ ಚಿಕಿತ್ಸಾ ಸಾಮಗ್ರಿಗಳು ಲಭ್ಯವಿರಲಿವೆ.  ಓಟಗಾರರಿಗೆ ಪ್ರೋತ್ಸಾಹಿಸಲು ಸ್ಥಳೀಯ ಸಂಸ್ಕøತಿ, ಕಲಾ ಪ್ರಕಾರಗಳನ್ನು ಬಳಸಿಕೊಂಡು ಮನರಂಜಿಸುವ ಮೂಲಕ ಓಟಗಾರರಲ್ಲಿ ಉತ್ತೇಜನ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ವಿಜಯಪುರದ ನಗರದಲ್ಲಿ ಹಮ್ಮಿಕೊಳ್ಳುವ ವೃಕ್ಷೋತ್ಥಾನ ಹೆರಿಟೇಜ್ ರನ್ ಕಾರ್ಯಕ್ರಮದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ.  ಈ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಎಲ್ಲ ಸಂಘ-ಸಂಸ್ಥೆಗಳು, ಕಾರ್ಯಕ್ರಮ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
 ಮಹಾಂತೇಶ ಬಿರಾದಾರ ಹಾಗೂ  ವೃಕ್ಷೋತ್ಥಾನ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಹೆರಿಟೇಜ್ ರನ್  ಕುರಿತು ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವೃಕ್ಷತ್ಥಾನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಡಾ. ಮಹಾಂತೇಶ ಬಿರಾದಾರ, ಆನಂದ ದೊಡಮನಿ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌