ಪ್ರತಿಪಕ್ಷದ ನಾಯಕ ರಾಜ್ಯಾಧ್ಯಕ್ಷನ ರೀತಿಯಲ್ಲಿ ಅಧಿವೇಶನದಲ್ಲಿ ಸಮರ್ಥವಾಗಿ ಮಾತನಾಡಿದ್ದೇನೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ- ಯತ್ನಾಳ

ವಿಜಯಪುರ: ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ, ಅಧ್ಯಕ್ಷನಾಗಿ ಮಾಡಬೇಕಾದ ಕೆಲಸವನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ.  ಇದನ್ನು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ.  ಈ ಮೂಲಕ ನಾನು ಉತ್ತರ ಕರ್ನಾಟಕದ ನಾಯಕರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆದಿರುವುದು ಸಮಾಧಾನ ತಂದಿದೆ.  ಮೂರು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಯ ಬಳಿಕ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರಿಗೂ ಈ ಭಾಗಕ್ಕೆ ಅನ್ಯಾಯವಾಗಿರುವುದು ಮನದಟ್ಟಾಗಿದೆ.  ಹೀಗಾಗಿ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

ಮುರುಗೇಶ ನಿರಾಣಿ ಟೀಕೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಎಂಥವರ ಹೆಸರನ್ನು ತೆಗೆದುಕೊಳ್ತೀರಿ.  ಕೆಲವೊಂದು ಬೀದಿ ನಾಯಿಗಳ ಬಗ್ಗೆ ನಾನು ಉತ್ತರ ಕೊಡಬೇಕು.  ಹಂದಿಗಳು ಹಂಗೆ ಒದರುತ್ತಿರುತ್ತವೆ.  ಇನ್ನು ಮುಂದೆ ಅವುಗಳ ಬಗ್ಗೆ ಪ್ರಶ್ನೆ ಕೇಳಬೇಡಿ.  ಅಲ್ಲಲ್ಲಿ ಕೆಲವೊಂದನ್ನು ವಿಜಯೇಂದ್ರ ಬಿಟ್ಟಿದ್ದಾನೆ.  ಅವುಗಳು ಮಾತನಾಡುತ್ತಿರುತ್ತವೆ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯ ಬೆತ್ತಲೆ ಪ್ರಕರಣ

ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಹಿಳೆಯ ಬೆತ್ತಲೆ ಮಾಡಿ ಕಿರುಕುಳ ನೀಡಿದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಪ್ರದೇಶದಲ್ಲಿ ಇಂಥದ್ದೆ ಘಟನೆ ನಡೆದಿತ್ತು.  ಇದೂ ಕೂಡ ಅಂಥದ್ದೆ ಘೋರ ಘಟನೆ.  ಯಾವುದನ್ನೂ ಸಮರ್ಥನೆ ಮಾಡಿಕೊಳ್ಳಲು ಬರುವುದಿಲ್ಲ.  ರಾಜ್ಯದಲ್ಲಿ ನಮ್ಮ ಪಕ್ಷದವರು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.  ನಿನ್ನೆ ಬೆಳಿಗ್ಗೆ 6.30ಕ್ಕೆ ನಡ್ಡಾ ಅವರು ಕರೆ ಮಾಡಿದ ಮೇಲೆ ನಮ್ಮ ಪ್ರತಿಪಕ್ಷದ ನಾಯಕರು ನಮಗೆ ಕರೆ ಮಾಡಿ ಎಲ್ಲಿದ್ದೀರಾ ಬನ್ನಿ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ಪಕ್ಷದ ಹೈಕಮಾಂಡ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯ ಬೆತ್ತಲೆ ಮಾಡಿ ಕಿರುಕುಳ ನೀಡಿದ ಪ್ರಕರಣ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ ಅವರ ಭ್ರಷ್ಚಾಚಾರ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.  ಉಗ್ರ ಹೋರಾಟ ಮಾಡುವುದಾಗಿ ಜೋಡೆತ್ತುಗಳು ಹೇಳಿದ್ದವು.  ಆದರೆ, ಉಗ್ರವೂ ಮಾಡಲಿಲ್ಲ.  ಪಗ್ರವೂ ಮಾಡಲಿಲ್ಲ.  ಬರೀ ಉಗ್ರವಾಗಿ ಖಂಡಿಸಿದರು.  ಇಲ್ಲಿ ಖಂಡಿಸಿದರೆ, ಪಂಡಿಸಿದರೆ ನಡೆಯುವುದಿಲ್ಲ.  ಬರೀ ಟ್ವೀಟ್ ಮಾಡಿದರೂ ನಡೆಯುವುದಿಲ್ಲ.  ಅದಕ್ಕಾಗಿಯೇ ನಾನು ಡಿ. ಕೆ. ಶಿವಕುಮಾರ ಪ್ರಕರಣದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ಸ್ಟ್ರಾಂಗ್ ಆಗಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ ಅವರು, ಈ ಬಗ್ಗೆ ಮಾಧ್ಯಮದವರೇ ವಿಶ್ಲೇಷಣೆ ಮಾಡಿ.  ನಾನೇಕೆ ಹೇಳಬೇಕು.  ಕರ್ನಾಟಕದಲ್ಲಿ ಪ್ರತಿಪಕ್ಷದ ಮುಖಂಡರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಈಗ ಎರಡು ಪತ್ರಿಕೆಯವರು ಬರೆದಿದ್ದಾರಲ್ಲ.  ನಾವೆಲ್ಲ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಎಷ್ಟು ಮಾಡಬೇಕೋ ಅಷ್ಟು ಮಾಡಿದ್ದೇವೆ.  ನಾನೇ ಒಂದೂವರೆ ಗಂಟೆ ಮಾತನಾಡಿದ್ದೇನ.  ಪಿ.ಎಸ್.ಐ ಪರೀಕ್ಷೆ ಬಗ್ಗೆ ಸಿದ್ಧರಾಮಯ್ಯ ಮತ್ತು ಗೃಹ ಸಚಿವರೊಂದಿಗೆ ಸಾಕಷ್ಟು ವಾಗ್ವಾದ ನಡೆಯಿತು.  ಕೊನೆಗೆ ಸಿಎಂ ಒಪ್ಪಿಕೊಂಡು ಪರೀಕ್ಷೆ ಮುಂದೂಡಿದ್ದಾರೆ.  ಈಗ ಮುಂದೂಡಲಾಗಿರುವ ಪರೀಕ್ಷೆಗಳನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರ ನಡೆಸಬಾರದು.  ಬೆಂಗಳೂರು, ಹುಬ್ಬಳ್ಳಿ, ಕಲಬುರಗಿಗಳಲ್ಲಿಯೂ ನಡೆಸಬೇಕು.  ಪರೀಕ್ಷಾರ್ಥಿಗಳು ಬಡವರಿರುತ್ತಾರೆ.  55 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.  ಅವರೆಲ್ಲರೂ ಒಂದೇ ದಿನ ಬೆಂಗಳೂರಿಗೆ ತೆರಳಬೇಕೆಂದರೆ ರೈಲು, ಬಸ್ ಸಿಗುವುದಿಲ್ಲ.  ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ದ್ವಿಗುಣ ಮಾಡುತ್ತಾರೆ.  ಹೀಗಾಗಿ ಬಡವರಿಗೆ ಪರೀಕ್ಷೆಗೆ ಹಾಜರಾಗಲು ಕಷ್ಟವಾಗುತ್ತದೆ.  ಆದ್ದರಿಂದ ಉಳಿದೆಡೆ ಪರೀಕ್ಷೆ ಕೇಂದ್ರ ತೆರೆಯಬೇಕು ಎಂದು ಅವರು ಆಗ್ರಹಿಸಿದರು.

ಅಧಿವೇಶನದಲ್ಲಿ ಪೊಲೀಸರ ವರ್ಗಾವಣೆ ಬಗ್ಗೆ ಮಾತನಾಡಿದ್ದೇನೆ.  ಓರ್ವ ಪಿ.ಎಸ್.ಐ ಒಂದು ಕಡೆ ಕನಿಷ್ಠ ಎರಡು ವರ್ಷ ಕೆಲಸ ಮಾಡಿದರೆ, ಆ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲು ಸಾಧ್ಯ.  ಆದರೆ, ಕೇವಲ ಒಂದು ವರ್ಷದಲ್ಲಿ ವರ್ಗಾವಣೆ ಮಾಡಿದರೆ, ಆಯಾ ಭಾಗದ ಶಾಸಕರು ಹಣಕ್ಕಾಗಿ ಪಿ.ಎಸ್.ಐ ಗಳಿಗೆ ಬೇಡಿಕೆ ಇಡುತ್ತಾರೆ.  ಈ ಅಧಿವೇಶನದಲ್ಲಿ ಒಳ್ಳೆಯ ನಿರ್ಣಯಯಗಳಾಗಿವೆ. ನಾವು ಮಾತನಾಡಿರುವ ವಿಷಯಗಳಿಗೆ ಸರಕಾರ ಸ್ಪಂದಿಸಿದೆ ಎಂದು ಅವರು ಹೇಳಿದರು.

ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವವರ ಬಗ್ಗೆ ತನಿಖೆ ನಡೆಸಲು ಎನ.ಐ.ಎ ನವರು ರಾಜ್ಯದಲ್ಲಿ ಧಾಳಿ ನಡೆಸಿದ್ದಾರೆ.  ಈಗ ಐದು ಜನ ಸಿಕ್ಕಿದ್ದಾರೆ.  ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಮೈಸೂರು ಮಹಾರಾಜರ ದೂರದೃಷ್ಠಿಯಿಂದ ಆ ಭಾಗ ಅಭಿವೃದ್ಧಿಯಾಗಿದೆ.  ಆ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಜಯಚಾಮರಾಜೇಂದ್ರ ಒಡೆಯರ ಉತ್ತಮ ಕೆಲಸ ಮಾಡಿದ್ದಾರೆ.  ಜಯಚಾಮರಾಜೇಂದ್ರ ಒಡೆಯರಿಂದಾಗಿ ಬೆಂಗಳೂರಿಗೆ ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಬಂದಿದೆ.  ಆದರೆ, ಈ ಭಾಗದಲ್ಲಿ ಆದಿಲ್ ಶಾಹಿ, ನಿಜಾಮ ಶಾಹಿ ಅವರ ಕಾಲದಿಂದ ಈ ಭಾಗದಲ್ಲಿ ಅಭಿವೃದ್ಧಿಯಾಗಲಿಲ್ಲ.  ಹೀಗಾಗಿ ಆ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಯಾರದೋ ಹೆಸರಿಡುತ್ತೇವೆ ಎಂದು ಹೇಳಿದರೆ ಹೇಗೆ? ಮೈಸೂರು ಮಹಾರಾಜರ ಹೆಸರು ಇಡಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲಿನ ಆಗ್ರಹವಿದೆ.

ಈ ಸರಕಾರ ಬಂದ ಮೇಲೆ ಬಿಜೆಪಿ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ದಿದೆ.  ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚುವವರನ್ನು ಪೊಲೀಸರು ಠಾಣೆಗಳಿಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡು ಅವರನ್ನು ಹೆದರಿಸುತ್ತಿದ್ದಾರೆ.  ವಿರುದ್ಧ ಪೋಸ್ಟ್ ಮಾಡಿದರೆ ಜೈಲಿಗೆ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಹಲವಾರು ಕಾರ್ಯಕರ್ತರು ನನಗೆ ಪತ್ರ ಬರೆದಿದ್ದಾರೆ.  ಈ ದೌರ್ಜನ್ಯವನ್ನು ನಾವು ತಡೆದುಕೊಳ್ಳುವುದಿಲ್ಲ.  ಕಾನೂನಿನ ವಿರುದ್ಧ ವರ್ತಿಸಿದರೆ ಕ್ರಮ ಕೈಗೊಳ್ಳಲಿ.  ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ.  ಇನ್ನು ಮುಂದೆ ಇದೇ ರೀತಿ ವರ್ತನೆ ಮುಂದುವರೆದರೆ, ರಾಜ್ಯದಲ್ಲಿ ಅರಾಜಕತೆ ಎದುರಾಗಲಿದೆ.   ಇನ್ನು ಕೆಲವೇ ದಿನಗಳಲ್ಲಿ ಒಂದು ಕಚೇರಿ ತೆರೆಯುತ್ತೇವೆ.  ಎಲ್ಲೆಲ್ಲಿ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಇಂಥ ದೌರ್ಜನ್ಯ ನಡೆಯುತ್ತವೆಯೋ ಅವರ ಪರ ಸಹಾಯ ಮಾಡಲು ವಕೀಲರ ತಂಡ ರಚಿಸುತ್ತೇವೆ.  ಅವರಿಗೆ ಜಾಮೀನು ಕೊಡಿಸಲು, ತೊಂದರೆಯಿಂದ ಪಾರು ಮಾಡಲು ಕ್ರಮ ಕೈಗೊಳ್ಳುತ್ತೇವೆ.  ಉಚಿತವಾಗಿ ಕಾನೂನು ಸೇವೆ ಒದಗಿಸಲು ನ್ಯಾಯವಾದಿಗಳು ಮುಂದೆ ಬಂದಿದ್ದಾರೆ.  ಇನ್ನೆರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಒಂದು ಕಚೇರಿ ಪ್ರಾರಂಭಿಸಿ, ಉಚಿತ ಸಂಪರ್ಕ ಸಂಖ್ಯೆ ನೀಡುತ್ತೇವೆ.  ಅಲ್ಲಿಂದಲೇ ರಾಜ್ಯಾದ್ಯಂತ ಭಯಭೀತರಾಗಿರುವ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ಶಾಸಕರು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ನಮ್ಮ ಶ್ರೇಷ್ಠ ಮಹಾರಾಜರು.  ಶಾಹು ಮಹಾರಾಜರು ಡಾ. ಅಂಬೇಡ್ಕರ ಅವರಿಗೆ ಶಿಕ್ಷಣಕ್ಕಾಗಿ ನೆರವು ನೀಡಿದರು.  ಶಾಹು ಮಹಾರಾಜರು ಮತ್ತು ಮೈಸೂರು ಮಹಾರಾಜರು ದೇಶದಲ್ಲಿಯೇ ಮೊದಲ ಬಾರಿಗೆ ದಲಿತರಿಗೆ ಮೀಸಲಾತಿ ಜಾರಿ ಮಾಡಿದರು.  ಹೆಣ್ಣು ಮಕ್ಕಳಿಗೆ ಅಂಬೇಡ್ಕರ್ ಸಮಾನತೆ ಅಧಿಕಾರ ನೀಡಿದರು.  1923ರಲ್ಲಿಯೇ ಮೈಸೂರಿನಲ್ಲಿ ಮಹಿಳಾ ಕಾಲೇಜು ಪ್ರಾರಂಭಿಸಿದರು.  ಅವರಿಗೆ ಇದ್ದ ದೂರದಷ್ಠಿಯಿಂದ ಅಭಿವೃದ್ಧಿಯಾಗಿದೆ.  ಅವರ ವಿಚಾರಗಳಿಗೆ ಚ್ಯುತಿ ಬಂದರೆ ನಾವು ಸುಮ್ಮನಿರಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಡಿಕೆಶಿ ವಿರುದ್ಧ ಜನೇವರಿ 5 ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.  ನ್ಯಾಯ ಸಿಗುವ ವಿಶ್ವಾಸವಿದೆ.  ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ.  ಇಲ್ಲದಿದ್ದರೆ, ಅವರವರ ಸರಕಾರ ಬಂದಾಗ ಕೊಲೆ ಆರೋಪಿಗಳ ವಿರುದ್ಧ ಪ್ರಕಣಗಳನ್ನು ಹಿಂಪಡೆಯುವ ಪ್ರಕರಣಗಳು ನಡೆದರೆ ಅರಾಜಕತೆ ಉಂಟಾಗಲಿದೆ.  ನ್ಯಾಯಾಲಯ ಸಕಾರಾತ್ಮಕವಾಗಿ ಮತ್ತು ನ್ಯಾಯಯುತವಾಗಿ ತೀರ್ಪು ನೀಡಿಲಿದೆ ಎಂಬ ವಿಶ್ವಾಸವಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌