ಜೆಜೆಎಂ ಯೋಜನೆಗೆ ಗ್ರಾ. ಪಂ. ಸಮುದಾಯ ವಂತಿಗೆ ಪಡೆಯದಂತೆ ಮಾಡಿದ ಹೋರಾಟ ಫಲ ನೀಡಿದೆ- ವಿಪ ಶಾಸಕ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ.  ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ. 1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ ರೂ. 1.22 ಕೋ. ವೆಚ್ಚದಲ್ಲಿ ಮನೆಮನೆಗಳಿಗೆ ನೀರು ಪೂರೈಸುವ ಜೆಜೆಎಂ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಮುಂಚೆ ಜೆಜೆಎಂ ಯೋಜನೆ ಕಾಮಗಾರಿಗಳಿಗೆ ಪ್ರತಿಯೊಂದು ಗ್ರಾ. ಪಂ. ಗಳು 15ನೇ ಹಣಕಾಸಿನಡಿ ಮತ್ತು ಫಲಾನುಭವಿಗಳಿಂದ ಸಮುದಾಯ ವಂತಿಗೆಯನ್ನು ನೀಡಬೇಕಿತ್ತು.  ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಗ್ರಾಮಸ್ಥರು ನಮಗೆ ನಳಗಳೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.  ಅಲ್ಲದೇ, ಗ್ರಾ. ಪಂ. ಗಳು ಕೂಡ 15ನೇ ಹಣಕಾಸಿನಡಿ ವಂತಿಗೆ ಪಾವತಿಸಿಸುವುದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿತ್ತು.  ಹಲವಾರು ಗ್ರಾ. ಪಂ. ಗಳಿಗೆ ವಿದ್ಯುತ್ ಬಿಲ್ ಪಾವತಿಸಲೂ ಹಣವಿರಲಿಲ್ಲ.  ಈ ಕುರಿತು ನಾನು ವಿಧಾನ ಪರಿಷತ್ತಿನ ಶಾಸಕರ ಜೊತೆಗೂಡಿ ಅಂದಿನ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆ.  ಉತ್ತರ ಪ್ರದೇಶ ಮಾದರಿಯಂತೆ ರಾಜ್ಯ ಸರಕಾರವೇ ಗ್ರಾ. ಪಂ. ಗಳ ಸಮುದಾಯ ವಂತಿಗೆಯ ಪಾಲನ್ನು ಭರಿಸಬೇಕು ಎಂದು ಮನವಿ ಮಾಡಿದ್ದೆ.  ಅದಕ್ಕೆ ಸಚಿವರು ಒಪ್ಪಿದ್ದರು.  ಅಲ್ಲದೇ, ಗ್ರಾಮ ಪಂಚಾಯಿತಿಗಳಿಂದ ಪಡೆಯಲಾಗಿದ್ದ ಸಮುದಾಯ ವಂತಿಗೆಯನ್ನು ಮರಳಿಸಿದ್ದರು.  ಇದರಿಂದ ಫಲಾನುಭವಿಗಳು ಮತ್ತು ಗ್ರಾ. ಪಂ. ಗಳಿಗೆ ಹೆಚ್ಚುವರಿ ಹೊರೆ ತಪ್ಪಿತು ಎಂದು ಅವರು ತಿಳಿಸಿದರು.

ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕಾರಜೋಳ ಗ್ರಾಮದಲ್ಲಿ ಕಾರಜೋಳ, ತೊನಶ್ಯಾಳ ಜೆಜೆಎಂ ಯೋಜನೆಗೆ ಭೂಮಿಪೂಜೆ ನೆರವೇರಿಸಿದರು

ಈಗ ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಬಹುತೇಕ ಪೂರ್ಣವಾಗುವ ಹಂತದಲ್ಲಿದ್ದು, ಕೆಲವು ಕಡೆ ಪೈಪುಗಳು ಮತ್ತು ನಳಗಳ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.  ಈಗ ಯೋಜನೆ ಚಾಲ್ತಿಯಲ್ಲಿರುವ ಕೆಲವು ಕಡೆ ಜಲಮೂಲಗಳ ಸಮಸ್ಯೆ ಇದೆ.  ಇದಕ್ಕಾಗಿಯೇ ಜಲಧಾರೆ ಯೋಜನೆಯಡಿ ಆಲಮಟ್ಟಿ ಜಲಾಷಯದಿಂದ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೆರಡು ವರ್ಷಗಳಲ್ಲಿ ಪೂರ್ಣವಾಗಲಿದೆ.  ಇದು ಪೂರ್ಣವಾದ ಬಳಿಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.  ಅಲ್ಲದೇ, ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೆ ನಳಗಳ ಮೂಲಕ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದರು.

ಈಗ ಹೊನಗನಹಳ್ಳಿ, ಸವನಳ್ಳಿ, ತೊನಶ್ಯಾಳ, ತೊನಶ್ಯಾಳ ಪುನರ್ವಸತಿ ಕೇಂದ್ರ -1ಕ್ಕೆ ಕುಡಿಯುವ ನೀರು ಪೂರೈಸಲು ಸಚಿವ ಎಂ. ಬಿ. ಪಾಟೀಲ ಅವರು ಕಾರಜೋಳ ಕೆರೆಯಲ್ಲಿ ತೆರೆದ ಭಾವಿ ತೋಡಿಸಲು ಕ್ರಮ ಕೈಗೊಂಡಿದ್ದಾರೆ.  ಅಲ್ಲಿ ಜಲಮೂಲ ಸೃಷ್ಠಿ ಮಾಡಿ ಮೋಟರ್ ವ್ಯವಸ್ಥೆ ಕಲ್ಪಿಸಿ ಈ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯಲು ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ.  ಇದು ಇತರೇ ಯೋಜನೆಗಳಿಗಿಂತ ಭಿನ್ನವಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸೋಮನಾಥ ಕಳ್ಳಿಮನಿ, ಬಿ. ಡಿ. ಅಸಂಗಿ, ರಾಚಯ್ಯ ಮಠಪತಿ, ಪವನ ಆಸಂಗಿ, ಪರಶುರಾಮ ಮಲಘಾಣ, ಸುರೇಶ ಜಾಧವ, ಚಂದ್ರವ್ವ ಚಲವಾದಿ, ಪಾಂಡು ಜಾಧವ, ಪರಶು ವಾಲಿಕಾರ, ಕಾಂತು ಓಡಿಯರ, ಮಾಂತು ಯಾಳವಾರ, ಆನಂದ ಜಾಧವ, ಯಂಕಪ್ಪ ಉಪ್ಪಾರ, ಲಕ್ಷ್ಮಣ ಪೂಜಾರಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲ, ರಾಜು ತಳೆವಾಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌