ಓಐಡಿವೈಓ ವತಿಯಿಂದ ನೇತಾಜಿ ಸುಭಾಸಚಂದ್ರ ಬೋಸ ಅವರ 127ನೇ ಜನ್ಮದಿನಾಚರಣೆ

ವಿಜಯಪುರ: ಎಐಡಿವೈಓ ವತಿಯಿಂದ ನಗರದ ಹುತಾತ್ಮ ಸರ್ಕಲ್ ಮತ್ತು ಸರಕಾರಿ ಐಟಿಐ ಕಾಲೇಜ್‌ನಲ್ಲಿ ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ನೇತಾಜಿ ಸುಭಾಸಚಂದ್ರ ಬೋಸ್‌ರವರ 127ನೇ ಜನ್ಮದಿನಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಇಂದಿನ ಯುವಜನರಿಗೆ ನೇತಾಜಿಯವರ ಜೀವನ ಚರಿತ್ರೆ ಆದರ್ಶವಾಗಿರಬೇಕು.  ನೇತಾಜಿಯವರು ಜೀವನದುದ್ದಕ್ಕೂ ಸಂಧಾನತೀತವಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು.  ಎರಡು ಬಾರಿ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿ ಪೂರ್ಣ ಸ್ವರಾಜ್ಯದ ಬಗ್ಗೆ ಹಾಗೂ ಕಾರ್ಮಿಕ ವರ್ಗ ಅಧಿಕಾರಕ್ಕೆ ಬರಬೇಕು ಎಂದು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದರು.  ಕಾಂಗ್ರೆಸ್‌ನಲ್ಲಿದ್ದುಕೊಂಡೇ ಹಲವಾರು ಸಂಧಾನತೀತ ಹೋರಾಟಗಳನ್ನು ಮುಂದುವರಿಸಿದ್ದರು ಎಂದು ಹೇಳಿದರು.

ನಂತರ ಕಾಂಗ್ರೆಸ್ಸಿನಿಂದ ಹೊರಬಂದು ಪಾರ್ವರ್ಡ್ ಬ್ಲಾಕ್ ಸ್ಥಾಪನೆ ಮಾಡಿ ಇಡೀ ದೇಶದುದ್ದಕ್ಕೂ ಯುವಜನರನ್ನು ಒಂದುಗೂಡಿಸಿ ಸೈದ್ಧಾಂತಿಕವಾಗಿ ಬ್ರಿಟಿಷ್‌ರ ವಿರುದ್ದ ಹೋರಾಟ ನಡೆಸಿದರು.  ನೇತಾಜಿಯವರ ದೃಷ್ಟಿಯಲ್ಲಿ ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು.  ಧರ್ಮ ವ್ಯಕ್ತಿಯೊಬ್ಬರ ವೈಯಕ್ತಿಕ ವಿಷಯವಾಗಿರಬೇಕು.  ಮಾನವನಾಗಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಇಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ತ್ರಯ ಇರಬೇಕು ಎಂಬ ನಿಲುವು ಹೊಂದಿದ್ದರು.  ಆದರೆ ಇಂದು ಬಹುತೇಕ ರಾಜಕೀಯ ಪಕ್ಷಗಳು ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಚುನಾವಣೆ ಗೆಲ್ಲುವ ಬದಲು ಧರ್ಮವನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ನಡೆದ ನೇತಾಜಿ ಸುಭಾಷಚಂದ್ರ ಬೋಸ್ ಅವರ ಜಯಂತಿ ಕಾರ್ಯಕ್ರಮದಲ್ಲಿ ರಮೇಶ ದೇಸಾಯಿ ಮಾತನಾಡಿದರು

ಸರಕಾರಿ ಐಟಿಐ ಕಾಲೇಜ್‌ನ ಪ್ರಾಚಾರ್ಯ ರಮೇಶ ದೇಸಾಯಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನೈತಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ.  ನೇತಾಜಿ ಸುಭಾಷಚಂದ್ರರಂಥ ಮಹಾನ್ ಕ್ರಾಂತಿಕಾರಿಗಳನ್ನು ಅಧ್ಯಯನ ಮಾಡುವ ಮೂಲಕ ಪ್ರತಿಯೊಬ್ಬರು ಉನ್ನತ ವಿಚಾರ ಮತ್ತು ಉನ್ನತ ಮೌಲ್ಯ, ಸಾಂಸ್ಕೃತಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜ್‌ನ ಉಪನ್ಯಾಸಕ ರವಿ ಖೇಡಗಿ, ಮಹಾಂತೇಶ ಭಜಂತ್ರಿ, ಡಿ. ಎನ್. ಬಿರಾದಾರ, ಎಂ. ವಿ. ತಾವರಖೇಡ, ಸಂಘಟನಕಾರ ರಮೇಶ ಹೊಸಮನಿ, ಅನುರಾಗ ಸಾಳುಂಕೆ, ಮಹಾಂತೇಶ ನಾಯ್ಕೊಡಿ, ಎಐಡಿವೈಒ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌