ಅಡ್ವಾಣಿಗೆ ಭಾರತರತ್ನ ಸ್ವಾಗತಾರ್ಹ- ಶಿವಕುಮಾರ ಸ್ವಾಮೀಜಿಗೂ ನೀಡಲಿ- ಡಿಕೆಶಿಗೆ ಮುಂದೆ ಸಿಎಂ ಆಗುವ ಅರ್ಹತೆ ಇದೆ- ರಂಭಾಪುರಿ ಶ್ರೀ

ವಿಜಯಪುರ: ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಉಪಪ್ರಧಾನಿ ಎಲ್. ಕೆ. ಆಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಹಿರಿಯ ನಾಯಕನಿಗೆ ಭಾರತ ರತ್ನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಕಟ್ಟುವಲ್ಲಿ ಲಾಲ ಕೃಷ್ಣ ಅಡ್ವಾಣಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ ಕೃಷ್ಣ ಅಡ್ವಾಣಿ ಇಬ್ಬರೂ ಹೋರಾಟ ಮಾಡಿದ್ದಾರೆ.  ಬಿಜೆಪಿ ಬಹಳಷ್ಟು ಸಂಕಷ್ಟದ ಸಮಯದಲ್ಲಿದ್ದಾಗ ಅದನ್ನು ಇಬ್ಬರೂ ಕಟ್ಟಿ ಬೆಳೆಸಿದ್ದಾರೆ.  ವಾಜಪೇಯಿ ಮತ್ತು ಅಡ್ವಾಣಿ ಜೋಡೆತ್ತುಗಳಾಗಿ ಭಾರತೀಯ ಸಂಸ್ಕೃತಿ ಉಳಿಸಿಲು ಹೋರಾಡಿದ್ದಾರೆ ಎಂದು ಶ್ಲಾಘಿಸಿದರು.

ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.  ಅದೇ ರೀತಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಈ ಹಿಂದಿನ ಬಿಜೆಪಿ ಸರಕಾರಕ್ಕೆ ಆಗ್ರಹ ಮಾಡಲಾಗಿತ್ತು.  ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಿಲ್ಲ.  ಮುಂದಿನ ದಿನಗಳಲ್ಲಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಆಶಾಭಾವ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆಧ್ಯಾತ್ಮಿಕ ಕ್ಷೇತ್ರ ಮಾತ್ರವಲ್ಲ ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ದಗಂಗಾ ಶ್ರೀಗಳು ಕ್ರಾಂತಿ ಮಾಡಿದ್ದಾರೆ.  ಮುಂದಿನ ದಿನಗಳಲ್ಲಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ರಂಭಾಪುರ ಶ್ರೀಗಳು ಆಗ್ರಹಿಸಿದರು.

ಡಿಸಿಎಂ ಡಿ. ಕೆ. ಶಿವಕುಮಾರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಹಾರೈಕೆ

ಇದೇ ವೇಳೆ, ಡಿಸಿಎಂ ಡಿ. ಕೆ. ಶಿವಕುಮಾರ ಅವರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಡಿ. ಕೆ. ಶಿವಕುಮಾರ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಲಿ.  ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬೆಳೆಯಲು ಅಧಿಕಾರಕ್ಕೆ ಬರಲು ಡಿ. ಕೆ. ಶಿವಕುಮಾರ ಬಹಳಷ್ಟು ಶ್ರಮಿಸಿದ್ದಾರೆ.  ವೀರಶೈವ ಲಿಂಗಾಯತ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.  ಅವರ ಅವಧಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ.  ಡಿ. ಕೆ. ಶಿವಕುಮಾರ ಅವರ ಶ್ರಮದ ಫಲವಾಗಿ ಉತ್ತರ ಕರ್ನಾಟಕದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.  ಅವರ ಅನುಭವ ತಿರಸ್ಕಾರ ಮಾಡಲು ಆಗುವುದಿಲ್ಲ.  ಮುಂದಿನ ದಿನಗಳಲ್ಲಿ ಅವರಿಗೆ ಅತ್ಯುನ್ನತ ಸ್ಥಾನ ಸಿಗಲಿದೆ.  ರಾಜ್ಯದಲ್ಲಿ ಅತ್ಯುನ್ನತ ಸ್ಥಾನ ಎಂದರೆ ಅದು ಮುಖ್ಯಮಂತ್ರಿ ಸ್ಥಾನ.  ಈಗ ಸಿಗುತ್ತೆ ಎಂದು ಹೇಳುವುದಿಲ್ಲ.  ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಸಿಗಬಹುದಾದ ಅರ್ಹತೆ ಅವರಿಗೆ ಇದೆ.  ನಮಗಷ್ಟೇ ಅಲ್ಲ, ಬೇರೆಯವರ ಅಭಿಪ್ರಾಯವೂ ಇದೆ ಆಗಿದೆ.  ಆದರೆ, ಮುಂದಿನ ನಿರ್ಧಾರ ಅವರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ರಂಭಾಪುರ ಜಗದ್ಗುರುಗಳು ಹೇಳಿದರು.

ಈ ಸಂದರ್ಭದಲ್ಲಿ ಮನಗೂಳಿ ಹಿರೇಮಠ ಸಂಸ್ಥಾನ ಮಠಾಧೀಶ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌