ವಿಜಯಪುರ ಡಿಡಿಪಿಐ ಕುರ್ಚಿಗೆ ಇಬ್ಬರು ಅಧಿಕಾರಿಗಳ ಕಿತ್ತಾಟ- ಕಡತಗಳಿಗೆ ನಾನೇ ಸಹಿ ಹಾಕುವೆ ಎಂದು ಪಟ್ಟು

ವಿಜಯಪುರ: ನಗರದಲ್ಲಿ ಒಂದೇ ಕುರ್ಚಿಗಾಗಿ ಇಬ್ಬರು ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು ಕಾದಾಟ ನಡೆಸುತ್ತಿದ್ದಾರೆ.

ವಿಜಯಪುರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಲ್ಲಿ ಡಿಡಿಪಿಐ ಎನ್. ಎಚ್. ನಾಗೂರ ಹಾಗೂ ಪ್ರಭಾರಿ ಡಿಡಿಪಿಐ ಉಮಾದೇವಿ ಸೊನ್ನವರ ಅವರ ಮಧ್ಯೆ ಕುರ್ಚಿಗಾಗಿ ಜಗಳ ನಡೆಯುತ್ತಿದೆ.

ಹಣಕಾಸು ದುರುಪಯೋಗ ಹಿನ್ನೆಲೆ ಅಮಾನತಾಗಿದ್ದ ಡಿಡಿಪಿಐ ಎನ್. ಎಚ್. ನಾಗೂರ

ಹಣಕಾಸು ದುರುಪಯೋಗ ಮತ್ತು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ಡಿಡಿಪಿಐ ಎನ್. ಎಚ್. ನಾಗೂರ ಅವರನ್ನು ಜನೇವರಿ 30 ರಂದು ರಾಜ್ಯ ಸರಕಾರ ಅಮಾನತು ಮಾಡಿತ್ತು.  ಅಲ್ಲದೇ, ಈ ಸ್ಥಳಕ್ಕೆ ಉಮಾದೇವಿ ಸೊನ್ನವರ ಎಂಬುವರನ್ನು ಪ್ರಭಾರಿ ಡಿಡಿಪಿಐ ಎಂದು ಆದೇಶ ಹೊರಡಿಸಿತ್ತು.

ಎನ್. ಎಚ್. ನಾಗೂರ, ಉಷಾದೇವಿ ಸೊಲನ್ನರ

ಪ್ರಭಾರಿ ಡಿಡಿಪಿಐ ಆಗಿ ಅಧಿಕಾರ ವಹಿಸಿಕೊಂಡಿದ್ದ ಉಮಾದೇವಿ ಸೊನ್ನವರ

ಎನ್. ಎಚ್. ನಾಗೂರು ಅವರನ್ನು ಅಮಾನತು ಮಾಡಿ ಹಿನ್ನೆಲೆಯಲ್ಲಿ ಪ್ರಭಾರಿ ಡಿಡಿಪಿಐ ಆಗಿ ನೇಮಕವಾಗಿದ್ದ ಉಮಾದೇವಿ ಸೊನ್ನವರ ಅವರು ವಿಜಯಪುರ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶದಂತೆ ಫೆಬ್ರವರಿ 2 ರಂದು ಅಧಿಕಾರ ವಹಿಸಿಕೊಂಡಿದ್ದರು.

ಕೆ ಎ ಟಿ ಮೊರೆ ಹೋಗಿದ್ದ ಎನ್. ಎಚ್. ನಾಗೂರ

ತಮ್ಮನ್ನು ಸೇವೆಯಿಂದ ಅಮಾನತು ಮಾಡಿರುವ ಸರಕಾರದ ಆದೇಶ ಪ್ರಶ್ನಿಸಿ ಡಿಡಿಪಿಐ ಎನ್. ಎಚ್. ನಾಗೂರ ಅವರು ಕಲಬುರಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಮೊರೆ ಹೋಗಿದ್ದರು.  ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕಲಬುರಗಿ ಕೆ ಎ ಟಿ ಎನ್. ಎಚ್. ನಾಗೂರ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.  ಫೆಬ್ರವರಿ 7 ರಂದು ಕೆ ಎ ಟಿ ತಡೆಯಾಜ್ಞೆ ನೀಡಿತ್ತು.

ಮರಳಿ ಕಚೇರಿಗೆ ಬಂದ ಎನ್. ಎಚ್. ನಾಗೂರ

ಅಮಾನತು ಆದೇಶಕ್ಕೆ ಕೆ ಎ ಟಿ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಮರಳಿ ವಿಜಯಪುರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ಆಗಮಿಸಿರುವ ಎನ್. ಎಚ್. ನಾಗೂರ ಅವರು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡತಗಳಿಗೆ ತಮ್ಮಿಂದ ಸಹಿ ಪಡೆಯೇಕು ಎಂದು ಹೇಳುತ್ತಿದ್ದಾರೆ.

ನನ್ನದೇ ಸಹಿ ಪಡೆಯಬೇಕು ಎನ್ನುತ್ತಿರುವ ಉಮಾದೇವಿ ಸೊನ್ನವರ

ಈ ಮಧ್ಯೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಧಾರವಾಡ ವಲಯ ಆಯುಕ್ತರ ಆದೇಶದಂತೆ ನಾನು ಪ್ರಭಾರ ಡಿಡಿಪಿಐ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ.  ಹೀಗಾಗಿ ಈಗ ನಾನು ಡಿಡಿಪಿಐ ಆಗಿದ್ದೇನೆ.  ನಾನೇ ಕಡಗಳಿಗೆ ಸಹಿ ಹಾಕುತ್ತೇನೆ ಎಂದು ಉಮಾದೇವಿ ಸೊನ್ನವರ ಪ್ರತಿಪಾದಿಸುತ್ತಿದ್ದಾರೆ.

ಇಬ್ಬರು ಅಧಿಕಾರಿಗಳ ಕಿತ್ತಾಟದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹೈರಾಣ

ಇಬ್ಬರು ಹಿರಿಯ ಅಧಿಕಾರಿಗಳ ಅಧಿಕಾರದ ಕಿತ್ತಾಟದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳಉ ಮತ್ತು ಸಿಬ್ಬಂದಿ ಹೈರಾಣಾಗಿದ್ದಾರೆ.  ನಾವು ಯಾರಿಂದ ಕಡತಗಳಿಗೆ ಸಹಿ ಪಡೆಯಬೇಕು ಎಂದು ಗೊಂದಲದಲ್ಲಿದ್ದಾರೆ.  ಈ ನಿಟ್ಟಿನಲ್ಲಿ ಜಿ. ಪಂ. ಸಿ ಇ ಓ ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ.

ಆದರೆ, ಸರಕಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವಿಜಯಪುರ ಡಿಡಿಪಿಐ ಅಧಿಕಾರದ ವ್ಯಾಪ್ತಿಯ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

ಹೊಸ ಪೋಸ್ಟ್‌