ಸಿಂದಗಿ ಪೊಲೀಸರ ಕಾರ್ಯಾಚರಣೆ- 4 ಜನರ ಬಂಧನ, 37 ಬೈಕ್ ವಶ- ಬ್ಯಾಂಕ್, ಫೈನಾನ್ಸ್ ಕಳ್ಳತನದಲ್ಲಿ 3 ಆರೋಪಿಗಳ ಬಂಧನ

ವಿಜಯಪುರ: ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಬೈಕ್ ಕಳ್ಳರು ಮತ್ತು ಮೂರು ಜನ ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರನ್ನು ಬಂಧಿಸಿದ್ದಾರೆ.

ರೂ. 16.65 ಲಕ್ಷ ಮೌಲ್ಯದ 37 ಬೈಕ್ ವಶ

ಮೊದಲ ಪ್ರಕರಣದಲ್ಲಿ ಸಿಂದಗಿ ಪೊಲೀಸರು ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿದ್ದು, ಅವರ ಬಳಿಯಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಇವುಗಳ ಒಟ್ಟು ಮೌಲ್ಯ ರೂ. 16.65 ಲಕ್ಷ ಎಂದು ಅಂದಾಜಿಸಲಾಗಿದೆ.

ಸಿಂದಗಿ ನಗರ ಮತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗು ಹೆಚ್ಚಾದ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಅವರು ಹೆಚ್ಚುವರಿ ಎಸ್ಪಿಗಳಾದ ರಾಮನಗೌಡ ಎ ಹಟ್ಟಿ ಮತ್ತು ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಜಗದೀಶ ಎಚ್. ಎಸ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಆರ್. ಪೊಲೀಸ್ ಪಾಟೀಲ ಹಾಗೂ ಸಿಂದಗಿ ಪಿಎಸ್ಐ ಭೀಮಪ್ಪ ಎಂ. ರಬಕವಿ ಅವರ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ಫೆ. 8 ರಂದು ಸಂಜೆ 4 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದ ಯಂಕಂಚಿ ಬೈಪಾಸ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಎರಡು ಮೊಟರ್ ಸೈಕಲ್ ತಡೆದಿದ್ದಾರೆ.  ಆಗ ಆ ಬೈಕುಗಳಲ್ಲಿ ನಾಲ್ಕು ಜನ ಆರೋಪಿಗಳನ್ನು ವಿಚಾರಿಸಿದಾಗ ತಾವು ಯಾದಗಿರಿ ಜಿಲ್ಲೆಯ ಶಹಾಪೂರ ಮತ್ತು ಸುರಪುರದವರಾದ ಬಸವರಾಜ ಭೀಮಣ್ಣ ಹುಣಸಿಗಿಡದ(31), ಹುಲುಗಪ್ಪ ಮರೆಪ್ಪ ಕೂಕಲೋರ(22), ಕೊಂಡಯ್ಯ ಭೀಮರಾಯ ಪಾರ್ವತಿದೊಡ್ಡಿ(22), ರವಿಕುಮಾರ ದೇವಿಂದ್ರಪ್ಪ ಪಾರ್ವತಿದೊಡ್ಡಿ ಎಂದು ತಿಳಿಸಿದ್ದಾರೆ.  ಅಲ್ಲದೇ, ತಾವು ಒಟ್ಟಾಗಿ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.  ರಾಜನಕೊಳ್ಳೂರ, ಸಿಂದಗಿ, ಯಡ್ರಾಮಿ, ಸೇಡಂ, ಭೀಮರಾಯನಗುಡಿ, ಬಿರೂರ, ಚಾಮನಾಳ, ಬೂದೂನೂರ, ಹದನೂರ, ನೆಲೋಗಿ, ಜೇವರ್ಗಿ, ಮೂದಬಾಳ, ಮಲ್ಲಾ(ಬಿ), ಮಳ್ಳಿ, ಅರಕೇರಾ, ಸಲದಾಪೂರ, ಜಾಲಹಳ್ಳಿ, ಕೊಡೇಕಲ್, ಶಿರಾಳ, ನೇಲ್ಲೋಗಿ, ತಾಳಿಕೋಟೆ ಮುಂತಾದ ಪಟ್ಟಣಗಳು ಮತ್ತು ಗ್ರಾಮಗಳಿಗೆ ತೆರಳಿದಾಗ ಜಮೀನಿನ ದಂಡೆಯಲ್ಲಿ ಹಾಗೂ ಇತರ ಜಾಗಗಳಲ್ಲಿ ನಿಲ್ಲಿಸಿದ ಬೈಕುಗಳ ಹ್ಯಾಂಡ್ ಲಾಕ್ ಮುರಿದು ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ನಂತರ ಕೂಲಕಂಷ ವಿಚಾರಣೆ ನಡೆಸಿದ ಸಿಂದಗಿ ಪೊಲೀಸರು ಒಟ್ಟು ರೂ. 16.65 ಲಕ್ಷ ಅಂದಾಜು ಮೌಲ್ಯದ 37 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಎಸ್ಪಿ ಋಷಿಕೇಶ ಸೋನಾವಣೆ ಸುದ್ದಿಗೋಷ್ಠಿ ನಡೆಸಿದರು

ಬ್ಯಾಂಕ್, ಫೈನಾನ್ಸ್ ಕಳ್ಳರ ಬಂಧನ

ಈ ಮಧ್ಯೆ, ಸಿಂದಗಿ ಪಟ್ಟಣದಲ್ಲಿ ನಡೆದ ನಾನಾ ಬ್ಯಾಂಕ್ ಮತ್ತು ಫೈನಾನ್ಸ್ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ.

ಫೆ. 10 ರಂದು ಸಂಜೆ 4 ಗಂಟೆಗೆ ಸಿಂದಗಿ- ಆಲಮೇಲ ರಸ್ತೆಯಲ್ಲಿ ಡಾಲ್ಫಿನ್ ದಾಬಾ ಬಳಿ ಪೊಲೀಸರು ವಾಹನಗಳ ತಪಾಸಣೆಯಲ್ಲಿದ್ದಾಗ ಸಂಶಯಾಸ್ಪದ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.  ಈ ಆರೋಪಿಗಳನ್ನು ವಿಚಾರಿಸಿದಾಗ ಮೂರು ಜನರು ಕೂಡಿಕೊಂಡು ಸಿಂದಗಿ ಪಟ್ಟಣದಲ್ಲಿರುವ ಅನ್ನಪೂರ್ಣ ಫೈನಾನ್ಸ್ ಮತ್ತು ಎಲ್ ಆ್ಯಂಡ್ ಟಿ ಫೈನಾನ್ಸ್ ನಲ್ಲಿ ಹಾಗೂ ಇಂಡಿ ಪಟ್ಟಣದ ಪಿ.ಕೆ.ಪಿ.ಎಸ್ ಬ್ಯಾಂಕು ಕಳ್ಳತನ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಿಂದಗಿ ಪಟ್ಟಣದ ಗೋಲಿಬಾರ ಮಡ್ಡಿ ಓಣಿಯ ಪ್ರಭು ಶಿವಪ್ಪ ಹಲಗಿ(32), ಅನೀಲ ಸುರೇಶ ನಾಯ್ಕೋಡಿ(32) ಮತ್ತು ಬಸವರಾಜ ಲಕ್ಷ್ಮಣ ಮಾದರ(28) ಎಂಬುವರನ್ನು ಬಂಧಿಸಿ ಅವರ ಬಳಿಯಿದ್ದ ರೂ. 2.20 ಲಕ್ಷ ನಗದು ಮತ್ತು ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಸಿಂದಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಪ್ರಕರಣಗಳನ್ನು ಭೇದಿಸಿರುವ ಸಿಂದಗಿ ಪೊಲೀಸರಿಗೆ ಎಸ್ಪಿ ಋಷಿಕೇಶ ಸೋನಾವಣೆ ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

ಹೊಸ ಪೋಸ್ಟ್‌