ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅವೈಜ್ಞಾನಿಕ ಶಿಕ್ಷಣ ನೀತಿ ಆರೋಪ- ಎಬಿವಿಪಿ ಬೃಹತ್ ಪ್ರತಿಭಟನೆ

ವಿಜಯಪುರ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಶ್ರೀ ಸಿದ್ದೇಶ್ವರ ದೇವಾಲಯ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಗಾಂಧಿಚೌಕ್ – ಬಸವೇಶ್ವರ ಚೌಕ್ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.  ಅಲ್ಲದೇ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿರುದ್ಧ ಧಿಕ್ಕಾರ ಘೋಷಣೆ ಹಾಕಿದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕ್ಕಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ಅನೇಕ ವಿಶ್ವವಿದ್ಯಾಲಯಗಳು ಅತ್ಯಂತ ವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡುತ್ತಿವೆ.  ಆದರೆ, ಇಂದಿನ ವಿವಿಗಳಿಗೆ ಶಿಕ್ಷಣಕ್ಕಿಂತ ಕೇವಲ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ.  ಸರಕಾರ ಮತ್ತು ವಿವಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು.  ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ವಿಜಯಪುರದಲ್ಲಿ ಎಬಿವಿಪಿ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸಿದರು

ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಮಾತನಾಡಿ, ಸರಿಯಾದ ಸಮಯಕ್ಕೆ ಪರೀಕ್ಷೆ ಫಲಿತಾಂಶವನ್ನು ನೀಡುತ್ತಿಲ್ಲ.  ಘೋಷಿಸಲಾಗಿರುವ ಫಲಿತಾಂಶದಲ್ಲಿ ಹಲವಾರು ರೀತಿಯ ಗೊಂದಲಗಳು ಸೃಷ್ಟಿಯಾಗುತ್ತಿವೆ.  ಕೆಲವೊಂದು ಸೆಮಿಸ್ಟರ್ ಗಳ ಫಲಿತಾಂಶಗಳು ಬಂದು ವರ್ಷವಾದರೂ ಈವರೆಗೆ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ಸಿಗದಿರುವುದು ದುರಾದೃಷ್ಟದ ಸಂಗತಿಯಾಗಿದೆ.  ಉತ್ತೀರ್ಣರಾದ ವಿದ್ಯಾರ್ಥಿ ಮತ್ತೆ ಫಲಿತಾಂಶವನ್ನು ನೋಡಿದಾಗ ಅನುತೀರ್ಣ ಎಂದು ತೋರಿಸಿದ ಉದಾಹರಣೆಗಳೂ ಇವೆ.  ಪರೀಕ್ಷೆಗಳು ನಡೆದ ಎಷ್ಟೋ ತಿಂಗಳುಗಳಾದರೂ ಫಲಿತಾಂಶವನ್ನು ನೀಡುತ್ತಿಲ್ಲ.  ವಿಶ್ವವಿದ್ಯಾಲಯದ ಸಹಾಯವಾಣಿಯು ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ.  ಬೋಧನಾ ವಿಷಯಗಳ ಕುರಿತು ವಿಶ್ವವಿದ್ಯಾಲಯಕ್ಕೆ ಸ್ಪಷ್ಟನೆ ಇಲ್ಲದೆ ತರಗತಿಗಳನ್ನ ಪ್ರಾರಂಭ ಮಾಡಿದ ಒಂದು ತಿಂಗಳ ನಂತರ ವಿಷಯಗಳನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕರಾದ ಮಂಜುನಾಥ ಹಳ್ಳಿ,  ಹರ್ಷ ನಾಯಕ, ರೇಖಾ ಮಾಳಿ, ಕವಿತಾ ಬಿರಾದಾರ, ಸಿದ್ದು ಪತ್ತಾರ, ಶಿವನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾಳಿ, ಮಾಂತೇಶ ಕಂಬಾರ, ಶ್ರೀಕಾಂತ ರೆಡ್ಡಿ, ಪ್ರವೀಣ ಬಿರಾದಾರ, ಅಭಿಷೇಕ ಬಿರಾದಾರ, ಅಭಿಷೇಕ ಗುಡದಿನ್ನಿ, ಸಂದೀಪ ಅರಳಗುಂಡಗಿ,  ಐಶ್ವರ್ಯ ಆಸಂಗಿ, ವಿನಾಯಕ, ಪೂಜಾ ವೀರಶೆಟ್ಟಿ, ಶ್ರವಣಕುಮಾರ, ಅಮಿತ  ದರ್ಶನ ಪ್ರದೀಪ, ವಿಜಯಲಕ್ಷ್ಮಿ, ಶಿಲ್ಪಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌