ಫೆ.24ರಂದು ಇಂಡಿಯಲ್ಲಿ ಜಿಲ್ಲಾ ಗಾಣಿಗ ಸಮಾವೇಶ- ನೂತನ ಸಭಾಭವನ ಭೂಮಿಪೂಜೆ ಕಾರ್ಯಕ್ರಮ- ಎಂ. ಎಸ್. ಲೋಣಿ

ವಿಜಯಪುರ: ಫೆ. 24ರಂದು ಇಂಡಿಯಲ್ಲಿ ವಿಜಯಪುರ ಜಿಲ್ಲಾ‌ ಗಾಣಿಗ ಸಂಘದ ಬೃಹತ್ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಾಣಿಗರ ಸಂಘ ಮತ್ತು ಇಂಡಿ ತಾಲೂಕು‌ ಘಟಕದ ಸಂಯುಕ್ತಾಶ್ರಯದಲ್ಲಿ ಫೆ. 24ರಂದು ಬೆಳಿಗ್ಗೆ 10.30 ಕ್ಕೆ ಇಂಡಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿಯ ಗಾಣಿಗ ಸಮಾಜದ ಜಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.  ಈ ಸಂದರ್ಭದಲ್ಲಿ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಭಾಭವನದ ಭೂಮಿ ಪೂಜೆ ಮತ್ತು ಜಿಲ್ಲಾ‌ ಗಾಣಿಗ ಸಮಾಜದ ಬೃಹತ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇಂಡಿ ಪಟ್ಟಣದಲ್ಲಿ ಗಾಣಿಗ ಸಮಾಜಕ್ಕೆ ಸೇರಿರುವ ಎರಡು ಎಕರೆ ಜಾಗದಲ್ಲಿ ನೂತನ ಸುಸಜ್ಜಿತ ಸಭಾಭವನ ನಿರ್ಮಿಸಲು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ರೂ. 5 ಕೋ. ಅನುದಾನ ನೀಡಿದ್ದಾರೆ.  ಇದರಲ್ಲಿ ಈಗಾಗಲೇ ರೂ. 2 ಕೋ.  ಹಣ ಮಂಜೂರು ಮಾಡಿ ಹಿಂದುಳಿದ ಗಾಣಿಗ ಸಮಾಜವನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಾಣಿಗ ಸಮಾಜದ ಮುಖಂಡರು ಸಮಾವೇಶದ ಭಿತ್ತಿಪತ್ರ ಬಿಡುಗಡೆ ಮಾಡಿದರು

ಗಾಣಿಗ ಸಮಾಜಕ್ಕೆ 2ಎ ಮೀಸಲಾತಿ ಇದ್ದರೂ ಸಮಾಜದ ಏಳಿಗೆಗಾಗಿ ಯಾವುದೇ ಸರಕಾರದಿಂದ ಸೂಕ್ತ ಅನುದಾನ, ಪ್ರಾತಿನಿಧ್ಯ ಸಿಕ್ಕಿಲ್ಲ.  ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ‌ ಅನುಕೂಲಕ್ಕಾಗಿ ಹಾಸ್ಟೆಲ್ ವ್ಯವಸ್ಥೆ ಕೂಡ ಇಲ್ಲ.  ರಾಜ್ಯದಲ್ಲಿ ಸುಮಾರ 60 ಲಕ್ಷ ಸಮಾಜದ ಜನಸಂಖ್ಯೆ ಇದ್ದರೂ ಯಾವುದೇ ತಾಲೂಕಿನಲ್ಲಿ ಸಮುದಾಯ ಭವನಗಳಿಲ್ಲ.  ಆದರೆ, ಯಶವಂತರಾಯಗೌಡ ಪಾಟೀಲ ಅವರು ರಾಜ್ಯದ ಇತಿಹಾಸದಲ್ಲಿ ಗಾಣಿಗ ಸಮಾಜ ಗುರುತಿಸಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ರೂ. 5 ಕೋ. ಅನುದಾನ ನೀಡಿದ ಏಕೈಕ ಶಾಸಕರಾಗಿದ್ದಾರೆ.  ಉತ್ತರ ಕರ್ನಾಟಕದಲ್ಲಿನ ಶಾಸಕರು ಹಿಂದುಳಿದ ಗಾಣಿಗ ಸಮಾಜದ ಏಳಿಗೆಗಾಗಿ ಈ ರೀತಿಯ ಅನುದಾನ ನೀಡಲಿ‌ ಎಂದು ಸಮಾಜದ ಪರವಾಗಿ ಕೋರಿಕೊಳ್ಳುತ್ತೇವೆ.  ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶಕ್ಕೆ ಸುಮಾರು 15 ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ. ಬಿ. ಪಾಸೋಡಿ ಮಾತನಾಡಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ ನೂತನ ಸಭಾಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.  ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ.  ಅಥಣಿ ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ.  ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳು, ವನಶ್ರೀಮಠದ ಅಧ್ಯಕ್ಷ ಸಿದ್ದಮುತ್ಯಾ, ತಿಂಥಣಿಯ ಅಡವಿಲಿಂಗ ಮಹಾರಾಜರು, ಬೀದರಿನ ಸಿದ್ದಾರೂಢ ಆಶ್ರಮದ ಶಂಕರಾನಂದ ಮಹಾಸ್ವಾಮಿಗಳು, ಹಿರೆರೂಗಿ ಸುಗಲಮ್ಮ ತಾಯಿ ಸಾನಿಧ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಲದೇ, ಸಂಸದ ರಮೇಶ ಜಿಗಜಿಣಗಿ, ಭೂಸೇನಾ ನಿಗಮದ ಅಧ್ಯಕ್ಷ ಮತ್ತು ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ, ಚಿತ್ರದುರ್ಗ ನಗರ ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಗಾಣಿಗ ಸಮಾಜದ ರಾಜಕೀಯ ನಾಯಕರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವೇಳೆ ಜಿಲ್ಲಾ ಗಾಣಿಗ ಸಮಾಜ ಸಂಘದ ಉಪಾಧ್ಯಕ್ಷ ಶರಣಪ್ಪ ಶ್ಯಾಪೇಟಿ, ಸಿ. ಎಸ್. ಬಿರಾದಾರ, ಅಮರೇಶ ಹೊಸಮನಿ, ಪ್ರಧಾನ ಕಾರ್ಯದರ್ಶಿ ಡಾ. ಬಾಬು ಸಜ್ಜನ, ಮಾಜಿ ಜಿಲ್ಲಾಧ್ಯಕ್ಷ ಎಸ್. ಎಸ್. ಶಿರಾಡೋಣ, ಎನ್. ಎಸ್. ಲೋಣಿ, ಕೋಶಾಧ್ಯಕ್ಷ ಬಿ. ಕೆ. ಚೌಧರಿ, ಯುವ ಮುಖಂಡರಾದ ಶ್ರೀಶೈಲ ಹಳ್ಳಿ, ಸಚಿನ ಅಡಕಿ, ಮದನ ಲೋಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌